ಈಗ ಸತೀಶ್ ಜಾರಕಿಹೊಳಿಯಿಂದ ಹೊಸ ರಾಜಕೀಯ ಸಿದ್ಧತೆ : ರಹಸ್ಯ ಬಿಚ್ಚಿಟ್ಟರು
ಈಗ ಸತೀಶ್ ಜಾರಕಿಹೊಳಿ ಇದೀಗ ಹೊಸ ರಾಜಕೀಯ ಸಿದ್ಧತೆ ಬಗ್ಗೆ ಮಾತನಾಡಿದ್ದಾರೆ. ಜಾರಕಿಹೊಳಿ ಹೇಳಿದ ಆ ಸುದ್ದಿ ಏನು..?
ಬೆಂಗಳೂರು (ಡಿ.03): ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಬಲವರ್ಧನೆ ಮಾಡಲು ರೂಪರೇಷೆ ಸಿದ್ಧಪಡಿಸುತ್ತಿದ್ದೇವೆ. ಪಕ್ಷವನ್ನು ಕೇಡರ್ ಬೇಸ್ ಪಕ್ಷ ಮಾಡಲು ಯುವಕರಲ್ಲಿ ಜಾಗೃತಿ ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಕೇಡರ್ ಬೇಸ್ ಪಕ್ಷವನ್ನಾಗಿ ಮಾಡಲು ಸಿದ್ಧತೆ ನಡೆಸುತ್ತಿದ್ದೇವೆ. ಇದಕ್ಕಾಗಿ ಈಗಾಗಲೇ ಪೂರ್ವಭಾವಿ ತಯಾರಿ ನಡೆಸುತ್ತಿದ್ದೇವೆ. ಇದನ್ನು ಆರ್ಎಸ್ಎಸ್ ಸಂಘಟನೆಯೊಂದಿಗೆ ಹೋಲಿಕೆ ಮಾಡಬಾರದು. ಅವರದ್ದು ಹಿಂಸೆ, ಅಸಮಾನತೆ ಪ್ರತಿಪಾದಿಸುವ ಸಂಘಟನೆ. ನಮ್ಮ ಸಿದ್ಧಾಂತಗಳು ಹಾಗೂ ಅವರ ಸಿದ್ಧಾಂತಗಳು ಬೇರೆ ಬೇರೆ ಎಂದರು.
ಯಾವ್ ಕಾರಣಕ್ಕೂ ಹೀಗ್ ಮಾಡ್ಬೇಡಿ : BSY ಗೆ ಸಿದ್ದರಾಮಯ್ಯ ಪತ್ರ ...
ಕೆಪಿಸಿಸಿಯ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಗೋಹತ್ಯೆ ನಿಷೇಧ ಕಾಯಿದೆಯನ್ನು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಶೋಷಣೆ, ದಬ್ಬಾಳಿಕೆ, ಸುಳ್ಳು ದೂರುಗಳನ್ನು ದಾಖಲಿಸುವ ಸಲುವಾಗಿಯೇ ಜಾರಿಗೆ ತರಲಾಗುತ್ತಿದೆ. ಹೀಗಾಗಿ ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ನಮ್ಮ ನಿಲುವು ಏನು ಎಂಬುದನ್ನು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು ಹೇಳಿದರು.
ಬಸವ ಕಲ್ಯಾಣ ಕ್ಷೇತ್ರದ ಬಗ್ಗೆ ಮಾತನಾಡಿದ ಅವರು, ನನ್ನ ಕ್ಷೇತ್ರಕ್ಕೆ ತುಂಬಾ ಹತ್ತಿರವಿರುವ ಕ್ಷೇತ್ರ. ಹೀಗಾಗಿ ನನ್ನ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆಗೆ ಸಮಿತಿ ರಚನೆ ಮಾಡಲಾಗಿದೆ. ಬಿಜೆಪಿ ಕೋಮುವಾದಿ ಪಕ್ಷ ಅಂತ ಜಗಜ್ಜಾಹೀರಾಗಿದೆ. ಹೀಗಾಗಿ ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದರು.