'ಆರ್ಎಸ್ಎಸ್ ರೀತಿಯಲ್ಲಿ ನಮ್ಮ ಶತ್ರುಗಳಿಗೂ ತರಬೇತಿ ಕೊಡುವುದಿಲ್ಲ'
ಪುನಶ್ಚೇತನಗೊಳಿಸಲಾದ ಘಟಪ್ರಭಾ ಸೇವಾದಳದ ತರಬೇತಿ ಕೇಂದ್ರಕ್ಕೆ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳಗಾವಿ, (ಸೆ.13): ಆರ್ಎಸ್ಎಸ್ ರೀತಿಯಲ್ಲಿ ನಮ್ಮ ಶತ್ರುಗಳನ್ನು ಕೂಡ ತಯಾರು ಮಾಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.
ಇಲ್ಲಿನ ಪಕ್ಷದ ಕಚೇರಿಯಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಪಕ್ಷದ ಕಾರ್ಯಕರ್ತರಿಗೆ ತರಬೇತಿ ನೀಡಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಘಟಪ್ರಭಾದಲ್ಲಿ ನಾ.ಸು. ಹರ್ಡೀಕರ್ ಸಮಾಧಿ ಸ್ಥಳದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲಿ ರಾಜ್ಯದ ಕಾರ್ಯಕರ್ತರಿಗೆ ತರಬೇತಿ ಕೊಡಲಾಗುವುದು ಎಂದು ತಿಳಿಸಿದರು.
ಆರ್ಎಸ್ಎಸ್ ಮಾದರಿ ಅನುಸರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದಕ್ಕೂ ಇದಕ್ಕೂ ಸಂಬಂಧವಿಲ್ಲ. ಪಕ್ಷದ ಸಿದ್ಧಾಂತ ಹಾಗೂ ಇತಿಹಾಸ ಗಮನದಲ್ಲಿಟ್ಟುಕೊಂಡು ದೇಶದ ಅಭಿವೃದ್ಧಿಗಾಗಿ ಕಾರ್ಯಕರ್ತರು ಹೇಗೆ ತೊಡಗಿಸಿಕೊಳ್ಳಬೇಕು ಎನ್ನುವುದನ್ನು ತಿಳಿಸಲಾಗುವುದು. ನಾವು ಲಾಠಿ ಹಿಡಿದರೆ ಬೇರೆಯವರಿಗೆ ಸಹಾಯ ಆಗುವಂತಹ ರೀತಿಯಲ್ಲಿ ಇರುತ್ತದೆಯೇ ವಿನಃ ಭಯ ಬೀಳಿಸುವಂತಿರುವುದಿಲ್ಲ. ಅಂತಹ ಸಂಘಟನೆಗಳಿಗೂ ನಮಗೂ ಸಂಬಂಧವಿಲ್ಲ ಎಂದರು.
ಸ್ವಾತಂತ್ರ್ಯ ಹೋರಾಟದ ವಿರುದ್ಧ ಇದ್ದಂತಹ ಆರ್ಎಸ್ಎಸ್ನಿಂದ ನಾವು ಕಲಿಯುವಂಥದ್ದು ಏನೂ ಇಲ್ಲ. ಬಿಜೆಪಿಯ ಕೆಲವು ದೊಡ್ಡ ನಾಯಕರು ಅಫೀಮು ತೆಗೆದುಕೊಳ್ಳದೇ ಮನೆಯಿಂದ ಈಚೆಗೆ ಬರುತ್ತಿರಲೇ ಇಲ್ಲ. ಅದೆಲ್ಲವೂ ನಮಗೆ ಗೊತ್ತಿದೆ. ಆದರೆ, ಅವರ ಹೆಸರು ಹೇಳಲು ಬಯಸುವುದಿಲ್ಲ ಎಂದು ಹೊಸ ಬಾಂಬ್ ಸಿಡಿಸಿದರು.
ಕಾನೂನು ಬಾಹಿರ ಚಟುವಟಿಕೆಗಳೇನೇ ನಡೆದರೂ ಅದನ್ನು ಅಲ್ಪಸಂಖ್ಯಾತ ನಾಯಕರೇ ಮಾಡಿದ್ದು ಎಂದು ಬಿಂಬಿಸುವುದು ಬಿಜೆಪಿಯರಿಗೆ ಫ್ಯಾಷನ್ ಆಗಿಬಿಟ್ಟಿದೆ. ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವುದೇ ಬಿಜೆಪಿಯ ಮೂಲ ಉದ್ದೇಶ. ಅದು 1923ರಿಂದಲೂ ನಡೆದುಕೊಂಡು ಬಂದಿದೆ. ಅದರ ವಿರುದ್ಧ ಹೋರಾಟಕ್ಕಾಗಿಯೇ ಕಾರ್ಯಕರ್ತರನ್ನು ಸಜ್ಜು ಮಾಡುತ್ತಿದ್ದೇವೆ ಎಂದು ಹೇಳಿದರು.