ರಾಜ್ಯ ರಾಜಕಾರಣದಲ್ಲಿ ವಿವಿಧ ರೀತಿಯ ಬೆಳವಣಿಗೆಗಳು ಆಗುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಶುಕ್ರವಾರ ಕಾಂಗ್ರೆಸ್ ನಾಯಕರು ಸಭೆಯನ್ನು ಕರೆದಿದ್ದಾರೆ. 

 ಬೆಂಗಳೂರು : ಕಳೆದ ಹಲವು ದಿನಗಳಿಂದ ಅತೃಪ್ತ ಶಾಸಕರ ಅಟಾಟೋಪಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷವು ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಆಯೋಜಿಸುವ ಮೂಲಕ ತನ್ನನ್ನು ತಾನೇ ಪರೀಕ್ಷೆಗೆ ಒಡ್ಡಿಕೊಳ್ಳಲು ಮುಂದಾಗಿದೆ. 

Add Asianetnews Kannada as a Preferred SourcegooglePreferred

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ 3.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಈ ಪಕ್ಷದ ಸಭೆಯು ಅತೃಪ್ತ ಶಾಸಕರಲ್ಲಿ ಭೀತಿ ಹುಟ್ಟುಹಾಕುವ ಭಾಗವಾಗಿದೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ವಿಪ್ ಜಾರಿ ಮಾಡುವ ಮೂಲಕ ಬಿಜೆಪಿಯ ಅಡಗುತಾಣಗಳಲ್ಲಿ ಅಡಗಿಕೊಂಡಿರುವ ಅತೃಪ್ತರ ನಿಷ್ಠೆಯನ್ನೂ ನೋಡಲು ಕಾಂಗ್ರೆಸ್ ಮುಂದಾಗಿದೆ.

ಕಾಂಗ್ರೆಸ್ ನಾಯಕತ್ವ ಹೂಡಿರುವ ಈ ದಾಳದಿಂದಾಗಿ ಅತೃಪ್ತರು ಒಂದೋ ಸಭೆಗೆ ಹಾಜರಾಗಿ ಪಕ್ಷದೊಂದಿಗೆ ತಾವು ಇದ್ದೇವೆ ಎಂಬುದನ್ನು ಸ್ಪಷ್ಟಪಡಿಸಬೇಕು, ಇಲ್ಲವೇ ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಬೇಕು. ಯಾವುದೇ ಕಾರಣಕ್ಕೂ ಇನ್ನೂ ನಿಗೂಢ ನಡೆಗಳನ್ನು ನಡೆಸಲು ಅತೃಪ್ತರಿಗೆ ಅವಕಾಶ ಇಲ್ಲದಂತಾಗುತ್ತದೆ. ಏಕೆಂದರೆ, ಕಾಂಗ್ರೆಸ್ ನಾಯಕತ್ವವು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಉಲ್ಲೇಖಿಸಿ ಈ ವಿಪ್ ಜಾರಿ ಮಾಡಿದೆ. ಇದನ್ನು ಉಲ್ಲಂಘಿಸುವವರನ್ನು ಸ್ವ ಇಚ್ಛೆಯಿಂದ ಪಕ್ಷವನ್ನು ಬಿಡಲು ಇಚ್ಛಿಸಿರುವರು ಎಂದು ಪರಿಗಣಿಸುವ ಅಸ್ತ್ರ ನಾಯಕತ್ವಕ್ಕೆ ದೊರೆಯುತ್ತದೆ.