Asianet Suvarna News Asianet Suvarna News

ಕಾಂಗ್ರೆಸ್‌ ಹಿರಿಯ ನಾಯಕರಿಬ್ಬರ ಕಚ್ಚಾಟ ಈಗ ಹೈಕಮಾಂಡ್ ಅಂಗಳಕ್ಕೆ..!

*  ಕೆ.ಹೆಚ್ ಮುನಿಯಪ್ಪ ವರ್ಸಸ್ ರಮೇಶ್ ಕುಮಾರ್
*  ಜಗಜ್ಜಾಹೀರಾದ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಶೀತಲ‌ಸಮರ 
*  ಹೈಕಮಾಂಡ್‌ನಲ್ಲಿಯೂ ಗುರುತಿಸಿಕೊಂಡಿರುವ ಇಬ್ಬರೂ ನಾಯಕರು
 

Cold war Between in Congress Leaders in Chikkaballapur grg
Author
Bengaluru, First Published Jul 4, 2022, 1:30 AM IST

ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಚಿಕ್ಕಬಳ್ಳಾಪುರ(ಜು.04):  ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನ ಮುಂದುವರೆಸಿದೆ. ಆದ್ರೆ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಿಬ್ಬರ ಕಚ್ಚಾಟ ಆ ಪಕ್ಷಕ್ಕೆ ಮುಳವಾಗುವ ಲಕ್ಷಗಳು ಗೋಚರಿಸುತ್ತಿವೆ. ಇಬ್ಬರು ನಾಯಕರ ಹಾವು ಮುಂಗುಸಿ ಆಟ ಪಕ್ಷಕ್ಕೆ ಪ್ರಾಣ ಸಂಕಟ ಎನ್ನುವಂತಾಗಿದೆ. 

ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ಮಟ್ಟಿಗೆ ಚಿನ್ನದ ಮೊಟ್ಟೆ ಇಡುವ ಜಿಲ್ಲೆಗಳು. ಕಾರಣ ಹಿಂದೆಲ್ಲ ಪಕ್ಷಕ್ಕೆ ಸಂಪೂರ್ಣ ಬೆಂಬಲ‌ ನೀಡಿರುವ ಜಿಲ್ಲೆಗಳು. ಅವಳಿ ಜಿಲ್ಲೆಗಳಿಂದ ಇಲ್ಲಿ ಒಟ್ಟು ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲು ಕಾಂಗ್ರೆಸ್ ಗೆಲುವು ಕಂಡ ಉದಾಹರಣೆಯೂ ಇದೆ. ಈ ವಿಧಾನಸಭೆಯಲ್ಲಿಯೂ ಚಿಕ್ಕಬಳ್ಳಾಪುರದಿಂದ ಬಿಜೆಪಿಯ ಹಾಲಿ‌ ಸಚಿವ‌ ಡಾ. ಸುಧಾಕರ್ ಮತ್ತು ಕೋಲಾರ ಕ್ಷೇತ್ರದಿಂದ ಜೆಡಿಎಸ್‌ನ ಶ್ರೀನಿವಾಸಗೌಡ ಹೊರತುಪಡಿಸಿದಂತೆ ಎಲ್ಲವೂ ಕಾಂಗ್ರೆಸ್ ಪಕ್ಷದಿಂದ ಗೆದ್ದವರು. 

Karnataka Politics:  'ಸ್ನಾನ ಮಾಡುವಾಗ ಮಾತ್ರ ಬಂದು ನೋಡಬೇಡಿ..ನನಗೆ ವಯಸ್ಸಾಗಿದೆ'

ಶ್ರೀನಿವಾಸಗೌಡ ಈಗಾಗಲೇ ಕಾಂಗ್ರೆಸ್ ಸೇರಿದ್ದು ಆಗಿದೆ. ಆದ್ರೆ ಅವಳಿ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಮಾಜಿ ಕೇಂದ್ರ ಸಚಿವ ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್. ಮುನಿಯಪ್ಪ ಪಕ್ಷದ ಮತ್ತು ಮತ್ತೊರ್ವ ಹಿರಿಯ ನಾಯಕ ರಮೇಶ್ ಕುಮಾರ್ ಪ್ರಶ್ನಾತಿತ ನಾಯಕರೇ ಆಗಿದ್ದಾರೆ. ಇಬ್ಬರೂ ಕೂಡ ಈ ವ್ಯಾಪ್ತಿಯಲ್ಲಿ ತಮ್ಮದೇ ಆದ ಬಲಾಬಲ, ಪ್ರಭಾವ ಹೊಂದಿದ್ದಾರೆ. ಒಟ್ಟು ಏಳು ಬಾರಿ ಸಂಸದರಾಗಿ ಕೋಲಾರದಲ್ಲಿ ಗೆಲುವು ಕಂಡಿರುವ ಕೆ.ಹೆಚ್.ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು ಈಗ ಕೊಂಚ ಹಿನ್ನೆಲೆಯಲ್ಲಿ ಇದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಾರಣ ಎಂಬುದು ಮುನಿಯಪ್ಪ ಆಕ್ರೋಶ ಆರಂಭವಾಗಲು ಕಾರಣ. ಅದರಲ್ಲಿಯೂ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಲೋಕಸಭೆ ಚುನಾವಣೆಯಲ್ಲಿ ತನ್ನ ವಿರುದ್ಧ ಪ್ರಚಾರ ಮಾಡಿದ್ದು, ಈಗ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರೋದು ಮುನಿಯಪ್ಪ ಪಾಲಿಗೆ ನುಂಗಲಾರದ ತುತ್ತಾಗಿದೆ. ಸಹಜವಾಗಿ ತಮ್ಮ ಸಹಮತ ಇಲ್ಲದೆ ತಮ್ಮ ಕ್ಷೇತ್ರದಲ್ಲಿ ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿರೋದಕ್ಕೆ ಮುನಿಯಪ್ಪ ಆಕ್ರೋಶ ಹೊರಹಾಕಿದ್ದಾರೆ. ರಮೇಶ್ ಕುಮಾರ್ ವಿರುದ್ಧ ತನ್ನ ತೀವೃ ಆಕ್ರೋಶವನ್ನು ಬೆಂಬಲಿಗರ ಸಭೆಯಲ್ಲಿ ಹೊರಹಾಕಿದ್ದು ತಮ್ಮದೇ ಪಕ್ಷದ‌ ಹೈಕಮಾಂಡ್ ವಿರುದ್ಧ ಅಸಮಧಾನ ಹೊರ ಹಾಕಿದ್ದಾರೆ. ತನ್ನ ಹಿನ್ನಡೆಗೆ ಮಾಜಿ ಸ್ಪೀಕರ್ ನೇರ ಕಾರಣ ಎಂಬುದು ಮುನಿಯಪ್ಪ ಆಕ್ರೋಶಕ್ಕೆ ಕಾರಣ.

ಕ್ಷೇತ್ರದಲ್ಲಿ ಹರಿದಿರುವ ಕೆ.ಸಿ ವ್ಯಾಲಿ ನೀರಿನ‌ ಕುರಿತು ಆರಂಭವಾದ ವಾದ ವಿವಾದ ಈ ಇಬ್ಬರು ನಾಯಕರ ರಾಜಕೀಯ ವೈಷಮ್ಯ ಈಗ ಬೀದಿಗೆ ಬಂದಿದೆ. ಕೆ.ಸಿ‌ ವ್ಯಾಲಿ ನೀರು ಯೋಗ್ಯವಾದದ್ದು ಎಂದು ಕೋಲಾರ ಶ್ರೀನಿವಾಸಗೌಡ ವಾದ,ಇದಕ್ಕೆ ಇಂಬು ನೀಡಿದ ರಮೇಶ್ ಕುಮಾರ್ ಸಹ ಕೆ.ಸಿ ವ್ಯಾಲಿ ನೀರು ಕ್ಷೇತ್ರಕ್ಕೆ ಹರಿಸಿದ್ದು ತಾವೇ ಎಂಬ ವಿಚಾರ ಸಹಜವಾಗಿ ಮುನಿಯಪ್ಪರನ್ನು‌ ಕೆರಳಿಸಿತ್ತು, ಅಲ್ಲಿಂದ ಆರಂಭಗೊಂಡ ಇಬ್ಬರು ಹಿರಿಯ ನಾಯಕರ ಕಚ್ಚಾಟ ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. 

ಕಳೆದ ಎರಡು ವರ್ಷಗಳಿಂದಲೂ ಮುನಿಯಪ್ಪ ತಮ್ಮ‌ ಸೋಲಿಗೆ ರಮೇಶ್ ಕುಮಾರ್ ರೆ ಕಾರಣ ಎಂದು ಪದೇ ಪದೇ ಅಸಮಧಾನದ ಹೇಳಿಕೆ ಕೊಡುತ್ತಲೇ ಬಂದಿದ್ದಾರೆ,ಹೈಕಮಾಂಡ್ ಗೂ ಸಹ ದೂರು ನೀಡಿದ್ದರು. ಈಗ ಮುನಿಯಪ್ಪ ಗಾಯದ ಮೇಲೆ ಬರೆ ಹಾಕಿದಂತೆ ತನಗೆ ಗೊತ್ತಿಲ್ಲದಂತೆ ತಮ್ಮ ಜೊತೆ ಮಾತುಕತೆ ಮಾಡದೆ ಇಬ್ಬರೂ ಮಾಜಿ ಶಾಸಕರನ್ನು ಕಾಂಗ್ರೆಸ್ ಗಡ ಸೇರ್ಪಡೆ ಮಾಡಿದ್ದು ಕುದಿಯುವಂತೆ ಮಾಡಿದೆ.

KH Muniyappa: ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಾದರೆ ಸ್ವಾಗತ

ಆದ್ರೆ ಇದಾವುದಕ್ಕು ತಲೆ ಕೆಡಿಸಿಕೊಂಡಂತೆ ಕಾಣದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪಕ್ಷದಲ್ಲಿ ತಮ್ಮ ಗುಂಪಿನ ಪ್ರಾಭಲ್ಯ ತೋರಿಸುತ್ತಲೇ ಬಂದಿದ್ದಾರೆ.ಈ ಹಿಂದೆ ಕೋಲಾರ ಕ್ಷೇತ್ರದ ಜೆ ಡಿ ಎಸ್ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು ನಂತರ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಚಿಂತಾಮಣಿ ಮಾಜಿ ಸುಧಾಕರ್ ರನ್ನು ಪಕ್ಷಕ್ಕೆ ವರಿಷ್ಟರ‌ ಮುಂದೆಯೇ ಸೇರಿಸಿಕೊಂಡು ಬೀಗುತಿದ್ಸಾರೆ.ಮುನಿಯಪ್ಪ ಆರೋಪಗಳಿಗೂ ಕೇರ್ ಮಾಡದ ರಮೇಶ್ ಕುಮಾರ್ ತಮ್ಮದೇ ಧಾಟಿ ಮತ್ತು ಶೈಲಿಯ ರಾಜಕೀಯ ಪಟ್ಟುಗಳನ್ನ ಹಾಕುತಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅದೆಷ್ಟು ಸ್ಥಾನಗಳನ್ನು ಪಡೆಯುತ್ತೋ ಗೊತ್ತಿಲ್ಲ.ಆದ್ರೆ ಪಕ್ಷ ಒಂದೊಮ್ಮೆ ಅಧಿಕಾರಕ್ಕೆ ಬಂದರೆ ಈ ಬಯಲು ಸೀಮೆಯ ಹಿರಿಯ ನಾಯಕರಿಬ್ಬರು ಮುಖ್ಯಮಂತ್ರಿ ಗಾದಿಗೆ ಪ್ರಯತ್ನ ಮಾಡುವುದು ಶತಸಿದ್ದ. ಯಾಕೆಂದ್ರೆ ಇಬ್ಬರೂ ಕೂಡ ಹೈಕಮಾಂಡ್‌ನಲ್ಲಿಯೂ ಗುರುತಿಸಿಕೊಂಡಿರುವ ನಾಯಕರು. ರಾಜ್ಯದ ಮಟ್ಟಿಗೂ ಕೂಡ ಕಾಂಗ್ರೆಸ್ ನ ಹಿರಿಯ ನಾಯಕರು.ಸಿದ್ದರಾಮಯ್ಯ ಡಿಕೆಶಿ ನಡುವೆ ಮುಸುಕಿನ‌ ಗುದ್ದಾಟ ಇದೆಯೋ‌ ಇಲ್ಲವೋ ಆದ್ರೆ ಮುನಿಯಪ್ಪ ಮತ್ತು ರಮೇಶ್ ಕುಮಾರ್ ಶೀತಲ‌ಸಮರ ಈಗ ಜಗಜ್ಜಾಹೀರಾಗಿದೆ.
 

Follow Us:
Download App:
  • android
  • ios