ಕಾಂಗ್ರೆಸ್ ನೇರ ಪೈಟೋಟಿ ನೀಡುವ ಪಕ್ಷ, ಹೊಂದಾಣಿಕೆ ಏನಿದ್ದರೂ ಬಿಜೆಪಿ ಮಾಡಿಕೊಳ್ಳುತ್ತದೆ. ಚನ್ನಪಟ್ಟಣ ಜನತೆಗೆ ಭಾವನಾತ್ಮಕವಾಗಿ ಮಾತನಾಡುವುದು, ಅಳುವುದನ್ನು ನೋಡಿ ಸಾಕಾಗಿದೆ. ಇವರ ಅಳುವಿಗೆ ಅಲ್ಲಿನ ಜನ ಸ್ಪಂದಿಸಲ್ಲ ಎಂದು ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ  

ಹುಬ್ಬಳ್ಳಿ(ಅ.26): ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಬಿಜೆಪಿ ಎದುರಾಳಿಯೇ ಅಲ್ಲ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಮರ್ಥ ಅಭ್ಯರ್ಥಿಗಳನ್ನು ಹಾಕಿದ್ದು, ನಮ್ಮ ಗೆಲುವು ನಿಶ್ಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. 

Add Asianetnews Kannada as a Preferred SourcegooglePreferred

ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಗೆದ್ದಿರಬಹುದು. ಆದರೆ ಈಗ ಎದುರಾಳಿ ಇಲ್ಲ ಅಂತಲ್ಲ, ಆಗ ನಮ್ಮ ಅಭ್ಯರ್ಥಿ ಪಠಾಣ 68000 ಮತ ಪಡೆದಿದ್ದರು. ಅವರಿಗೆ ಕೊನೇ ಗಳಿಗೆಯಲ್ಲಿ ಟಿಕೆಟ್ ಕೊಟ್ಟರೂ ಉತ್ತಮ ಸ್ಪರ್ಧೆ ನೀಡಿದ್ದೇವೆ. ಅದರಂತೆ ಲೋಕಸಭಾ ಚುನಾವಣೆಯಲ್ಲಿ ಇದೇ ಬೊಮ್ಮಾಯಿ ವಿಧಾನಸಭೆಯಲ್ಲಿ ಸ್ಪರ್ಧಿಸಿದ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ 8 ಸಾವಿರಕ್ಕೂಹೆಚ್ಚು ಮತ ಹೆಚ್ಚು ಪಡೆದಿದ್ದರು. ನಮ್ಮ ಅಭ್ಯರ್ಥಿ ಸಮರ್ಥರಾಗಿದ್ದು, ನಮಗೆ ಯಾರೂ ಎದುರಾಳಿಗಳಿಲ್ಲ ಎಂದು ಹೇಳಿದರು. 

ಬೈಎಲೆಕ್ಷನ್‌ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ವಿಜಯೇಂದ್ರ

ಖಾದ್ರಿ ಮನವೊಲಿಕೆ: 

ಶಿಗ್ಗಾಂವಿಗೆ ಸೈಯದ್ ಅಜ್ಜಂಪೀರ್ ಖಾದ್ರಿ ಸಹ ಟಿಕೆಟ್ ಕೇಳಿದ್ದರು. ಅವರ ಹೆಸರು ಹೈಕಮಾಂಡ್‌ಗೆ ಕಳುಹಿಸಲಾಗಿತ್ತು. ಕಳೆದ ಬಾರಿ ಪಠಾಣ ಚುನಾವಣೆ ಸ್ಪರ್ಧಿಸಿದ್ದರಿಂದ ಈಗ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. ಖಾದ್ರಿ ಸಹ ಅರ್ಹ ಅಭ್ಯರ್ಥಿಯಾಗಿದ್ದಾರೆ. ನಾವು ಅವರ ಮನವೊಲಿಸುತ್ತೇವೆ ಎಂದರು. 

ಅಳು ನೋಡಿ ಸಾಕಾಗಿದೆ: 

ಕಾಂಗ್ರೆಸ್ ನೇರ ಪೈಟೋಟಿ ನೀಡುವ ಪಕ್ಷ, ಹೊಂದಾಣಿಕೆ ಏನಿದ್ದರೂ ಬಿಜೆಪಿ ಮಾಡಿಕೊಳ್ಳುತ್ತದೆ. ಚನ್ನಪಟ್ಟಣ ಜನತೆಗೆ ಭಾವನಾತ್ಮಕವಾಗಿ ಮಾತನಾಡುವುದು, ಅಳುವುದನ್ನು ನೋಡಿ ಸಾಕಾಗಿದೆ. ಇವರ ಅಳುವಿಗೆ ಅಲ್ಲಿನ ಜನ ಸ್ಪಂದಿಸಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಇದೇ ವೇಳೆ ತಿರುಗೇಟು ನೀಡಿದರು.