ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡರಿಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನವರು ರಾಜಭವನ ಚಲೋ ಮಾಡುತ್ತಿರುವುದು ದುರಂತ. ಈ ರೀತಿ ಅವರು ಮಾಡಿದರೆ ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ವರದಿ: ವರದರಾಜ್, ದಾವಣಗೆರೆ 

Add Asianetnews Kannada as a Preferred SourcegooglePreferred

ದಾವಣಗೆರೆ (ಜೂ.16): ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡರಿಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನವರು ರಾಜಭವನ ಚಲೋ ಮಾಡುತ್ತಿರುವುದು ದುರಂತ. ಈ ರೀತಿ ಅವರು ಮಾಡಿದರೆ ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು. ದಾವಣಗೆರೆಯ ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮಾಡುತ್ತಿರುವುದು ಕಾನೂನು ಬಾಹಿರ. ಭ್ರಷ್ಟಾಚಾರದ ಪ್ರಕರಣದ ವಿರುದ್ದ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್‌ನ ದುರಂತ ಎಂದು ಹೇಳಿದರು.

ಜನರೇ ಕಾಂಗ್ರೆಸನ್ನ ಮನೆಗೆ ಕಳಿಸುತ್ತಾರೆ ಎಂದರು‌. ಕುಪ್ಪಳ್ಳಿಯಿಂದ ಬೆಂಗಳೂರಿಗೆ ಸಾಹಿತಿಗಳು ಪ್ರಗತಿಪರರು ಪಾದಯಾತ್ರೆ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಈಗಾಗಲೇ ಪಠ್ಯಕ್ರಮ ಪರಿಷ್ಕರಣೆ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಲಾಗಿದೆ. ಪಠ್ಯಕ್ರಮದಲ್ಲಿ ಯಾವ ವಿಷಯ ಇರಬೇಕು ಎಂಬ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಜನತೆ ನೀಡಿದ ಸಲಹೆಯಂತೆ ಪಠ್ಯಪರಿಷ್ಕರಣೆ ಮಾಡಲಾಗುವುದು. ರಾಜ್ಯದ ಜನರ ಸಲಹೆ ಸೂಚನೆ ಪಡೆದು ವೆಬ್ ಸೈಟ್‌ನಲ್ಲಿ ಹಾಕಲಾಗುವುದು. ಒಟ್ಟಾರೆ ಎಲ್ಲಾ ಆಕ್ಷೇಪಣೆ ಸಲಹೆ ಪಡೆದ ನಂತರ ಪಠ್ಯ ಪರಿಷ್ಕರಣೆ ಅಂತಿಮ ರೂಪ ಪಡೆಯಲಿದೆ ಎಂದರು. 

ತುಕಡೆ ಗ್ಯಾಂಗ್ ಮಾಡಿದ ಕೆಲ್ಸವನ್ನೇ ಕರ್ನಾಟಕದಲ್ಲಿ ಬರಗೂರು ಸಮಿತಿ ಮಾಡಿದೆ: ಸಚಿವ ನಾಗೇಶ್

ಮೇಕೆ ದಾಟು ಯೋಜನೆ ಕುರಿತಂತೆ ಈಗಾಗಲೇ ಸಿಡ್ಲ್ಯೂಸಿ ಜೊತೆ ಮಾತುಕತೆ ನಡೆಸಲಾಗಿದೆ. ಇದಲ್ಲದೇ ತಮಿಳುನಾಡು ಸಚಿವರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿರುವ ವಿಚಾರಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲ. ಈ ವಿಷಯದಲ್ಲಿ ಸಿಡಬ್ಲೂಎಂಎ ನಿರ್ಧಾರವೇ ಅಂತಿಮ. ಮುಂದಿನ ವಾರದಲ್ಲಿ ಸಭೆ ಕರೆಯಲ್ಲಿದ್ದು ನಮ್ಮ ವಾದವನ್ನು ಅಲ್ಲಿ ಮಂಡಿಸಲಾಗುವುದು ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು. ತಮಿಳುನಾಡಿನ ಹೇಳುವ ವಿಚಾರದಲ್ಲಿ ಯಾವುದೇ ಕಾನೂನಾತ್ಮಕ ವಿಷಯಗಳು ಬರುವುದಿಲ್ಲ. ಮೇಕೆದಾಟು ಬಳಿ ಕಾಮಗಾರಿ ನಡೆಸುವ ಕುರಿತು ಪ್ರಕ್ರಿಯೆಗಳು ನಡೆಯುತ್ತಿದೆ ಎಂದರು. 

ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮಾತನಾಡಿ, ಮೀಸಲಾತಿ ನಿಗದಿ ಪಡಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿದೆ ಪ್ರಕ್ರಿಯೆ ನಡೆಯುತ್ತಿದೆ. ಮೊದಲನೇ ಹಂತದಲ್ಲಿ ಬಿಬಿಎಂಪಿ ಚುನಾವಣೆ ಕುರಿಂತಂತೆ ಮೀಸಲಾತಿ ನಿಗದಿಪಡಿಸಲಾಗುವುದು. ಆದಾದ ನಂತರ ರಾಜ್ಯದ ಎಲ್ಲಾ ಜಿ.ಪಂ, ತಾ.ಪಂ ಗಳ ಚುನಾವಣೆಗೆ ಹಿಂದುಳಿದ ವರ್ಗಗಳ ಆಯೋಗ ನೀಡುವ ಮೀಸಲಾತಿ ವರದಿಯನ್ವಯ ಚುನಾವಣೆ ನಡೆಸಲಾಗುವುದು ಎಂದರು. ದಾವಣಗೆರೆಗೆ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತಂತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. 

Davanagere: ಅಗಲಿದ ಪ್ರೀತಿಯ ಮಾಲೀಕನ ಸಮಾಧಿ ಮೇಲೆ ಮಲಗುವ 'ಡಯನಾ' ಶ್ವಾನ

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಎಸ್.ಎ ರವೀಂದ್ರನಾಥ್, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ ರಾಮಚಂದ್ರ, ಮೇಯರ್ ಜಯಮ್ಮ ಗೋಪಿನಾಯ್ಕ್, ಪೂರ್ವವಲಯ ಐಜಿಪಿ ಕೆ.ತ್ಯಾಗರಾಜನ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ ಸಿಇಒ ಡಾ.ಎ ಚನ್ನಪ್ಪ, ಎಸ್ಪಿ ಸಿ.ಬಿ ರಿಷ್ಯಂತ್ ಇದ್ದರು.