Asianet Suvarna News Asianet Suvarna News

ಚಿಕ್ಕಮಗಳೂರು ನಗರಸಭೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಫಿಕ್ಸ್, ಆಕಾಂಕ್ಷಿಗಳಲ್ಲಿ ಗರಿಗೆದರಿದ ಚಟುವಟಿಕೆ

ಇಲ್ಲಿನ ನಗರಸಭೆಯ ಎರಡೂವರೆ ವರ್ಷದ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿದ್ದು, ಗಾದಿಗೇರಲು ಚಟುವಟಿಕೆಗಳು ಗರಿಗೆದರುತ್ತಿವೆ. 

Chikkamagaluru Municipal Council Fix elections for the post of President and Vice President gvd
Author
First Published Aug 12, 2024, 9:09 PM IST | Last Updated Aug 12, 2024, 9:09 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.12): ಇಲ್ಲಿನ ನಗರಸಭೆಯ ಎರಡೂವರೆ ವರ್ಷದ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡೂ ಸಾಮಾನ್ಯ ಮಹಿಳೆಯರಿಗೆ ಮೀಸಲಾಗಿದ್ದು, ಗಾದಿಗೇರಲು ಚಟುವಟಿಕೆಗಳು ಗರಿಗೆದರುತ್ತಿವೆ. ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿಯಿಂದ 9 ಮಂದಿ, ಕಾಂಗ್ರೆಸ್ನಿಂದ 5, ಎಸ್ಡಿಪಿಐ 1 ಹಾಗೂ ಪಕ್ಷೇತರ 1 ಸೇರಿ ಒಟ್ಟು 16 ಮಂದಿ ಮಹಿಳೆಯರು ಆಯ್ಕೆಯಾಗಿದ್ದು, ಎಲ್ಲರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸಲು ಅವಕಾಶವಿದೆ.ಆದರೆ ನಗರಸಭೆಯಲ್ಲಿ ಬಿಜೆಪಿ ಬಹುಮತ ಗಳಿಸಿರುವುದರಿಂದ ಅಧಿಕಾರ ಹಿಡಿಯಲು ಹೆಚ್ಚಿನ ಅವಕಾಶಗಳಿವೆ. ಬಿಜೆಪಿಗೆ ಜೆಡಿಎಸ್ನ ಬೆಂಬಲವೂ ಇರುವುದರಿಂದ ಗಾದಿ ಹಿಡಿಯುವ ಹಾದಿ ಸುಗಮವಾಗಬಹುದು.

ಬಿಜೆಪಿ ಪಾಲಿಗೆ ನಗರಸಭೆ?: 35 ಸ್ಥಾನಗಳ ಪೈಕಿ 18 ರಲ್ಲಿಗೆದ್ದು ಸರಳ ಬಹುಮತ ಹೊಂದಿರುವ ಬಿಜೆಪಿ ಪಾಲಿಗೆ ಇಬ್ಬರು ಜೆಡಿಎಸ್ ಸದಸ್ಯರು, ಒಬ್ಬರು ಲೋಕಸಭಾ ಸದಸ್ಯರು, ಬಿಜೆಪಿಯ ಇಬ್ಬರು ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ.ರವಿ, ಎಂ.ಕೆ.ಪ್ರಾಣೇಶ್ ಹಾಗೂ ಜೆಡಿಎಸ್ನ ಎಸ್.ಎಲ್. ಭೋಜೇಗೌಡರ ಬೆಂಬಲವೂ ಇರುವುದರಿಂದ ಒಟ್ಟು ಸಂಖ್ಯಾಬಲ 24ಕ್ಕೇರುತ್ತದೆ. ಪಕ್ಷದ ಒಪ್ಪಂದವನ್ನು ಮುರಿದ ಆರೋಪದ ಮೇಲೆ ನಿಕಟಪೂರ್ವ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಬಿಜೆಪಿ ಅಮಾನತು ಪಡಿಸಿರುವುದರಿಂದ ಅವರ ಬೆಂಬಲ ಸಿಗುವುದು ಅನುಮಾನವಾದರೂ ಬಿಜೆಪಿ ಸಂಖ್ಯೆ 23 ಆಗುತ್ತದೆ.

Kodagu: ಮತ್ತೆ ಭೂಕುಸಿತದ ಭೂತಕ್ಕೆ ಬೆಚ್ಚಿಬಿದ್ದ ಹಿಂದಿನ ಭೂಕುಸಿತಗಳಲ್ಲಿ ಸತ್ತು ಬದುಕಿ ಬಂದ ಜನ!

ಆದರೂ ವರಸಿದ್ದಿ ವೇಣುಗೋಪಾಲ್ ಅವರಿಗೆ ಚುನಾವಣೆ ವೇಳೆ ವಿಪ್ ನೀಡಲು ಅವಕಾಶವಿದೆ. ಅಲ್ಲದೆ ಅವರು ಬಿಜೆಪಿ ಪರವಾಗಿಯೇ ಮತ ಚಲಾಯಿಸುತ್ತಾರೆ ಎನ್ನುವ ನಂಬಿಕೆ ಬಿಜೆಪಿ ಪಾಳೆಯದಲ್ಲಿದೆ.ಉಳಿದಂತೆ ಕಾಂಗ್ರೆಸ್ 12 ಸಂಖ್ಯಾ ಬಲ ಹೊಂದಿದ್ದು, ಅವರಿಗೆ ಎಸ್ಡಿಪಿಐನ ಒಬ್ಬರು, ಹಾಗೂ ಶಾಸಕ ಎಚ್.ಡಿ.ತಮ್ಮಯ್ಯ ಮತ್ತೋರ್ವ ಪಕ್ಷೇತರ ಅಭ್ಯರ್ಥಿ ಬೆಂಬಲವಿದೆ. ಒಂದೊಮ್ಮೆ ವರಸಿದ್ದಿ ವೇಣುಗೋಪಾಲ್ ಕಾಂಗ್ರೆಸ್ ಪರ ವಾಲಿದರೂ ಅವರ ಒಟ್ಟು ಸಂಖ್ಯೆ 15 ಕ್ಕೆ ನಿಲ್ಲುತ್ತದೆ. ಈ ಎಲ್ಲಾ ಲೆಕ್ಕಾಚಾರಗಳ ಪೈಕಿ ಸಧ್ಯದ ಸ್ಥಿತಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ಸಮಸ್ಯೆ ಇಲ್ಲ. ಮುಂದೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ನಡೆದರೆ ಏನು ಬೇಕಾದರೂ ಆಗಬಹುದು.

ಆಕ್ಷಾಂಕಿಗಳಿಂದ ಕಸರಸ್ತು: ಬಿಜೆಪಿಯಿಂದ ಗೆದ್ದಿರುವ 9 ಮಂದಿ ಮಹಿಳಾ ಸದಸ್ಯರಲ್ಲಿ ಈಗ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನ ಅಲಂಕರಿಸುವ ಆಕಾಂಕ್ಷೆ ಗರಿಗೆದರಿದೆ. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮೈಸೂರು ಪಾದಯಾತ್ರೆ ಮುಗಿಸಿ ನಿನ್ನೆ ನಗರಕ್ಕಾಗಮಿಸಿದ ಕೂಡಲೇ ಆಕಾಂಕ್ಷಿಗಳು ಪ್ರತ್ಯೇಕವಾಗಿ ಭೇಟಿ ಮಾಡಿ ಒತ್ತಡ ಹೇರಿದ್ದಾರೆ.ಯಾರಿಗೆ ಅದೃಷ್ಠ ಒಲಿಯುತ್ತದೆ. ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.ಈ ನಡುವೆ ಏಕೈಕ ಪಕ್ಷೇತರ ಮಹಿಳಾ ಸದಸ್ಯೆ ಶೀಲಾ ದಿನೇಶ್ ಅವರು ಯಾರನ್ನು ಬೆಂಬಲಿಸುತ್ತಾರೆ. ಅಥವಾ ಚುನಾವಣೆ ಸಂದರ್ಭದಲ್ಲಿ ಅವರ ನಿಲುವೇನು ಎನ್ನುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯ ಸಾಧನೆಗೆ ಮತ್ತೊಂದು ಗರಿ: NIRF ಶ್ರೇಯಾಂಕದಲ್ಲಿ 81ನೇ ಸ್ಥಾನ!

ಕಾಂಗ್ರೆಸ್ ನಿಂದಲೂ ಪ್ರಯತ್ನ: ಕಾಂಗ್ರೆಸ್ ಪಕ್ಷದ 12 ಸದಸ್ಯರ ಪೈಕಿ 5 ಮಂದಿ ಮಹಿಳಾ ಸದಸ್ಯರಿದ್ದಾರೆ. ಅಧಿಕಾರ ಹಿಡಿಯಲು ಅಗತ್ಯವಿರುವಷ್ಟು ಸಂಖ್ಯಾ ಬಲ ಇಲ್ಲವಾದರೂ ಪ್ರಯತ್ನವನ್ನು ಬಿಡುವುದಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಈಗಾಗಲೇ ಶಾಸಕ ಎಚ್.ಡಿ.ತಮ್ಮಯ್ಯ ಅವರೊಂದಿಗೆ ಸದಸ್ಯರುಗಳು ಸಮಾಲೋಚನೆ ನಡೆಸುತ್ತಿದ್ದು, ಯಾವ ರೀತಿಯ ತಂತ್ರಗಳನ್ನು ಹೆಣೆಯಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios