2047ರಲ್ಲಿ ದೇಶ ಅಭಿವೃದ್ಧಿಶೀಲ ಹಾಗೂ ವಿಕಸಿತ ಭಾರತವಾಗಿಸುವ ದಿಸೆಯಲ್ಲಿ ಪ್ರಧಾನಿಗೆ ದೇಶದ ಪ್ರತಿಯೊಬ್ಬರೂ ಬೆಂಬಲಿಸಬೇಕಾಗಿದೆ ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.

ಶಿಕಾರಿಪುರ (ನ.01): ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಬಲಿಷ್ಠ ಭಾರತ, ಸಮೃದ್ಧ ಭಾರತದ ಕನಸು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿ ಸಂಕಲ್ಪ ತೊಟ್ಟಿದ್ದು 2047ರಲ್ಲಿ ದೇಶ ಅಭಿವೃದ್ಧಿಶೀಲ ಹಾಗೂ ವಿಕಸಿತ ಭಾರತವಾಗಿಸುವ ದಿಸೆಯಲ್ಲಿ ಪ್ರಧಾನಿಗೆ ದೇಶದ ಪ್ರತಿಯೊಬ್ಬರೂ ಬೆಂಬಲಿಸಬೇಕಾಗಿದೆ ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮನವಿ ಮಾಡಿದರು. ತಾಲೂಕಿನಲ್ಲಿ ಶ್ರೀ ಸರ್ದಾರ್ ವಲ್ಲಭಬಾಯಿ ಪಟೇಲ್‌ರ 150ನೇ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ವತಿಯಿಂದ ನಡೆದ ಏಕತಾ ಯಾತ್ರೆ ನಂತರ ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶ ಬಲಿಷ್ಠ ಹಾಗೂ ಸುಭದ್ರಗೊಳಿಸುವ ಚಿಂತನೆ ಮೇರೆಗೆ ಸ್ವಾತಂತ್ರಗಳಿಸಿದ ನಂತರದಲ್ಲಿ ಹರಿದು ಹಂಚಿ ಹೋಗಿದ್ದ 565 ಕ್ಕೂ ಅಧಿಕ ಸಾಮಂತ ರಾಜ್ಯವನ್ನು ಒಗ್ಗೂಡಿಸಿ ಭವ್ಯ ಭಾರತ ನಿರ್ಮಾಣಗೊಳಿಸುವಲ್ಲಿ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲರು ಯಶಸ್ವಿಯಾಗಿದ್ದು, ಏಕೀಕೃತ ಭಾರತದ ಜತೆಗೆ ಸಮೃದ್ದ ದೇಶ, ವಿಕಸಿತ ದೇಶದ ಬಗ್ಗೆ ಅಚಲ ವಿಶ್ವಾಸ ಹೊಂದಿದ್ದ ಪಟೇಲರನ್ನು ಇತಿಹಾಸ ಪುಟದಲ್ಲಿ ಶಾಶ್ವತವಾಗಿಸಿ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಜರಾಮರಗೊಳಿಸುವ ನಿಟ್ಟಿನಲ್ಲಿ ಮೋದಿ 2014ರಲ್ಲಿ ಪ್ರಥಮ ಬಾರಿಗೆ ಪ್ರಧಾನಿಯಾದ ಸಂದರ್ಭದಲ್ಲಿ ಪಟೇಲ್ ಅವರ ಜಯಂತಿ ಆಚರಣೆಯನ್ನು ಏಕತಾ ದಿನವಾಗಿಸುವ ತೀರ್ಮಾನ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಪ್ರಧಾನಿ ಮೋದಿ ಸಂಕಲ್ಪ

ಈ ಹಿಂದಿನ ಸರ್ಕಾರ ಎಂದಿಗೂ ಪಟೇಲ್ ಅವರನ್ನು ಸ್ಮರಿಸುವ ಕಾರ್ಯವನ್ನು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪಟೇಲ್ ರ ಬಲಿಷ್ಠ ಭಾರತ, ಸಮೃದ್ದ ಭಾರತದ ಕನಸು ನನಸಾಗಿಸಲು ಪ್ರಧಾನಿ ಮೋದಿ ಸಂಕಲ್ಪ ಕೈಗೊಂಡಿದ್ದಾರೆ. 2047ರಲ್ಲಿ ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತಿಸುವ ದಿಸೆಯಲ್ಲಿ ಎಲ್ಲ ಕ್ಷೇತ್ರವನ್ನು ಬಲಿಷ್ಠವಾಗಿಸುವ ಮೂಲಕ ನನಸುಗೊಳಿಸಲು ಶ್ರಮಿಸುತ್ತಿದ್ದಾರೆ. ಜಾತಿ ಧರ್ಮ ಬಿಟ್ಟು ಪ್ರತಿಯೊಬ್ಬ ದೇಶಭಕ್ತನ ಹೃದಯದಲ್ಲಿ ಪಟೇಲ್ ಶಾಶ್ವತ ಸ್ಥಾನಗಳಿಸಿ ಅವರ ಸನ್ಮಾರ್ಗದಲ್ಲಿ ಮುನ್ನಡೆಸುವ ಶಪಥ ಮಾಡಿದ್ದಾರೆ. ಈ ದಿಸೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆ ಒಂದಾಗಿ ಒಟ್ಟಾಗಿ ಹೆಜ್ಜೆ ಹಾಕಬೇಕಾಗಿದೆ ಎಂದು ತಿಳಿಸಿದರು.

ಆರಂಭದಲ್ಲಿ ಆರಾಧ್ಯ ದೈವ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದಿಂದ ಏಕತಾ ಯಾತ್ರೆ ಬಸ್ ನಿಲ್ದಾಣ ಮೂಲಕ ತಾಲೂಕು ಕಚೇರಿ ಮುಂಭಾಗದ ಹುತಾತ್ಮ ಸ್ವಾತಂತ್ರ ಹೋರಾಟಗಾರರ ಸ್ಮಾರಕ ಬಳಿ ಸಂಪನ್ನಗೊಂಡಿತು. ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್,ತಾ.ಅಧ್ಯಕ್ಷ ಹನುಮಂತಪ್ಪ,ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿದೇವಿ, ತಾ.ಅಧ್ಯಕ್ಷೆ ರೇಖಾ, ಕಾರ್ಯದರ್ಶಿ ಕೆ.ವಿ ರೂಪ, ಪುರಸಭಾಧ್ಯಕ್ಷೆ ಸುನಂದಾ ಮಂಜುನಾಥ್, ಉಪಾಧ್ಯಕ್ಷೆ ರೂಪ, ಸದಸ್ಯ ಪಾಲಾಕ್ಷಪ್ಪ, ರೂಪಕಲಾ ಹೆಗ್ಡೆ, ಲಕ್ಷ್ಮೀ ಮಹಾಲಿಂಗಪ್ಪ, ಪ್ರಶಾಂತ್ ಮುಖಂಡ ಗುರುಮೂರ್ತಿ, ಮೇಘರಾಜ್, ಮಾಲತೇಶ್, ಕುಕ್ಕೆ ಪ್ರಶಾಂತ್, ವಸಂತಗೌಡ, ಕೆ.ಪಿ ಮಂಜುನಾಥ್, ಡಿ.ಎಲ್.ಬಸವರಾಜ್, ಮಹೇಶ್ ಹುಲ್ಮಾರ್, ಸಿದ್ದಲಿಂಗಪ್ಪ, ನಿವೇದಿತಾ, ರುದ್ರೇಶ್ ಮತ್ತಿತರರು ಹಾಜರಿದ್ದರು.