ಪದಗ್ರಹಣಕ್ಕೆ ಸರ್ಕಾರದ ಅನುಮತಿ: ಜೂನ್ 14 ಕ್ಕೆ ಕಾರ್ಯಕ್ರಮ ಮಾಡಲ್ಲ ಎಂದ ಡಿಕೆಶಿ!
ಡಿಕೆಶಿ ಪದಗ್ರಹಣಕ್ಕೆ ಸರ್ಕಾರದ ಅಡ್ಡಿ ಇಲ್ಲ| ಸಿಎಂ ಯಡಿಯೂರಪ್ಪ ಸ್ಪಷ್ಟನೆ| ಪದಗ್ರಹಣಕ್ಕೆ ಹೆಚ್ಚು ಜನ ಸೇರುವ ಉದ್ದೇಶದಿಂದ ಅನುಮತಿ ನೀಡಿಲ್ಲ| ಕಡಿಮೆ ಜನ ಸೇರಿಸಿ ಯಾವಾಗ ಬೇಕಾದ್ರೂ ಪದಗ್ರಹಣ ಮಾಡಿಕೊಳ್ಳಲಿ| ಸಿಎಂ ಯಡಿಯೂರಪ್ಪ ಹೇಳಿಕೆ ಗಮನಿಸಿದ್ದೇನೆ| ಕಾರ್ಯಕ್ರಮ ಜೂನ್ 14 ಕ್ಕೆ ಮಾಡಲ್ಲ| ಮುಂದೆ ದಿನಾಂಕ ನಿಗದಿ ಮಾಡುತ್ತೇವೆ
ಬೆಂಗಳೂರು(ಜೂ.11): ಜೂ.14ರಂದು ನಡೆಯಬೇಕಿದ್ದ ತಮ್ಮ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ್ದ ಬೆನ್ನಲ್ಲೇ ದ್ವೇಷ ರಾಜಕಾರಣ ನಡೆಸುತ್ತಿದ್ದಾರೆಂಬ ಟೀಕಾ ಪ್ರಹಾರ ಬಿಎಸ್ವೈ ವಿರುದ್ಧ ಕೇಳಿ ಬಂದಿತ್ತು. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಡಿಕೆಶಿ ಪದಗ್ರಹಣಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಿಕೆಶಿ ಪದಗ್ರಹಣಕ್ಕೆ ಸರ್ಕಾರ ಅನುಮತಿ ನಿರಾಕರಿಸಿದ ಕಾರಣವನ್ನು ವಿವರಿಸಿದ ಸಿಎಂ ಯಡಿಯೂರಪ್ಪ ಪದಗ್ರಹಣಕ್ಕೆ ಹೆಚ್ಚು ಜನ ಸೇರುವ ಉದ್ದೇಶದಿಂದ ಅನುಮತಿ ನೀಡಿರಲಿಲ್ಲ. ಕಡಿಮೆ ಜನ ಸೇರಿಸಿ ಯಾವಾಗ ಬೇಕಾದ್ರೂ ಪದಗ್ರಹಣ ಮಾಡಿಕೊಳ್ಳಲಿ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನ ಸೇರಲು ಅವಕಾಶ ನೀಡುತ್ತಿಲ್ಲ. ಇತಿಮಿತಿಯೊಳಗೆ ಕಾರ್ಯಕ್ರಮ ಮಾಡಿಕೊಳ್ಳಲು ಅಭ್ಯಂತರ ಇಲ್ಲ ಎಂದಿದ್ದಾರೆ.
ಮಾಡಿಯೇ ತೀರುತ್ತೇವೆಂದು ಸರ್ಕಾರದ ವಿರುದ್ಧ ತೊಡೆತಟ್ಟಿ ನಿಂತ ಸಿದ್ದರಾಮಯ್ಯ...!
ಕಾರ್ಯಕ್ರಮ ಜೂನ್ 14 ಕ್ಕೆ ಮಾಡಲ್ಲ: ಡಿಕೆಶಿ
ಇನ್ನು ಸಿಎಂ ಯಡಿಯೂರಪ್ಪ ಅನುಮತಿ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಡಿಕೆಶಿ 'ಕಾರ್ಯಕ್ರಮ ಜೂನ್ 14 ಕ್ಕೆ ಮಾಡಲ್ಲ. ನಾನು ಸಿಎಲ್ಪಿ ಲೀಡರ್ ಸೇರಿದಂತೆ ರಾಷ್ಟ್ರ ಮಟ್ಟದ ನಾಯಕರ ಜತೆ ಚರ್ಚೆ ಮಾಡಬೇಕಿದೆ. ಬಳಿಕ ದಿನಾಂಕ ಘೋಷಣೆ ಮಾಡುತ್ತೇನೆ. ಕಾರ್ಯಕರ್ತರು ಸಿದ್ಧತೆ ಮುಂದೂವರೆಸಲಿ. ಇದು ನನ್ನ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕ್ರಮ. ಹತ್ತು ಸಾವಿರ ಸ್ಥಳಗಳಲ್ಲಿ ಜನ ಸೇರಿ ಕಾರ್ಯಕ್ರಮ ವೀಕ್ಷಣೆ ಮಾಡ್ತಾರೆ. ಎಲ್ಲದಕ್ಕೂ ವ್ಯವಸ್ಥೆ ಮಾಡಬೇಕಿದೆ' ಎಂದಿದ್ದಾರೆ.
ಅಲ್ಲದೇ ಇದರ ನಡುವೆ ಪರಿಷತ್ ಚುನಾವಣೆ ಸಹ ಇದೆ. ಅದಕ್ಕೆ ಅಭ್ಯರ್ಥಿ ಗಳ ನೇಮಕ ಮಾಡಬೇಕಿದೆ. ಬಹಳ ಜವಾಬ್ದಾರಿ ಇದೆ. ಇದೆಲ್ಲದರ ಜತೆಗೆ ಕಾರ್ಯಕ್ರಮ ದಿನಾಂಕ ನಿಗದಿ ಮಾಡ್ತೀವಿ ಎಂದು ಡಿಕೆಶಿ ಸ್ಪಷ್ಟೀಕರಿಸಿದ್ದಾರೆ.