ಉತ್ತರಪ್ರದೇಶ ಬಿಜೆಪಿ ಮುಸ್ಲಿಂ ಮತದಾರರಿಗೆ ಗಾಳ ಹಾಕಲು ಮುಂದಾಗಿದೆ. ಏಪ್ರಿಲ್‌ನಿಂದ ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಸಮ್ಮೇಳನ ನಡೆಸುತ್ತಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ‘ಸ್ನೇಹಮಿಲನ’ ತಂತ್ರ ಮಾಡುತ್ತಿದೆ. 

ಲಖನೌ (ಮಾರ್ಚ್‌ 8, 2023): 2024ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಮತದಾರರಿಗೆ ಗಾಳ ಹಾಕಲು ಬಿಜೆಪಿ ಮುಂದಾಗಿದೆ. ಮುಸ್ಲಿಂ ಮತದಾರರ ಪ್ರಭಾವವಿರುವ ಪಶ್ಚಿಮ ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳಲ್ಲಿ ಅವರನ್ನು ಓಲೈಸಲು ‘ಸ್ನೇಹ ಮಿಲನ: ಒಂದೇ ದೇಶ, ಒಂದೇ ಡಿಎನ್‌ಎ, ಸಮ್ಮೇಳನ’ ಎಂಬ ಪರಿಕಲ್ಪನೆಯಡಿ ಸಮ್ಮೇಳನಗಳನ್ನು ಆಯೋಜಿಸಲು ನಿರ್ಧರಿಸಿದೆ. ಮುಂದಿನ ತಿಂಗಳು ಮುಜಾಫರ್‌ನಗರದಲ್ಲಿ ಈ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ.

Add Asianetnews Kannada as a Preferred SourcegooglePreferred

ಮುಸ್ಲಿಂ ಜಾಟರು, ಮುಸ್ಲಿಂ ರಜಪೂತರು, ಮುಸ್ಲಿಂ ಗುಜ್ಜರ್‌ ಹಾಗೂ ಮುಸ್ಲಿಂ ತ್ಯಾಗಿ ಸಮುದಾಯಗಳು ಪಶ್ಚಿಮ ಉತ್ತರಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಆ ಭಾಗದ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲೂ ಈ ಸಮುದಾಯಗಳ ಜನಸಂಖ್ಯೆ ಸರಾಸರಿ ಎರಡೂವರೆ ಲಕ್ಷದಷ್ಟಿದೆ. ಸ್ನೇಹಮಿಲನಗಳನ್ನು ಆಯೋಜಿಸುವ ಮೂಲಕ ಈ ಮತದಾರರನ್ನು ಸಂಪರ್ಕಿಸಲು ಬಿಜೆಪಿ ಯತ್ನಿಸಲಿದೆ. ಮುಂದಿನ ತಿಂಗಳು ಈದ್‌ ಹಬ್ಬ ಮುಗಿದ ನಂತರ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ ಎಂದು ಉತ್ತರಪ್ರದೇಶ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಕುನ್ವರ್‌ ಬಾಸಿತ್‌ ಅಲಿ ಅವರು ತಿಳಿಸಿದ್ದಾರೆ.

ಇದನ್ನು ಓದಿ: ಕೊಡಗಿನ ಭದ್ರಕೋಟೆಯಲ್ಲಿ ಬಿಜೆಪಿ ಮತ್ತೆ ಕಮಲ ಅರಳಿಸಲು ಪ್ಲಾನ್

ಪ್ರತಿಯೊಬ್ಬರ ಡಿಎನ್‌ಎ (DNA) ಕೂಡ ಒಂದೇ. ಎಲ್ಲರೂ ಸೇರಿ ದೇಶವನ್ನು (Country) ಮುನ್ನಡೆಸೋಣ ಎಂಬ ಅಂಶವನ್ನು ಮುಸಲ್ಮಾನರಿಗೆ (Muslims) ಮನದಟ್ಟು ಮಾಡಿಕೊಡುತ್ತೇವೆ. ಸಮ್ಮೇಳನಗಳಲ್ಲಿ ಹಿಂದೂ ಜಾಟರು, ರಜಪೂತರು, ಗುಜ್ಜರ್‌ ಹಾಗೂ ತ್ಯಾಗಿ ಸಮುದಾಯಗಳ ನಾಯಕರು ವೇದಿಕೆಯಲ್ಲಿರುತ್ತಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್‌ (Rajnath Singh), ರಾಜ್ಯ ಬಿಜೆಪಿ ಅಧ್ಯಕ್ಷ ಭೂಪೇಂದ್ರ ಚೌಧರಿ, ಮುಜಾಫರ್‌ನಗರ ಸಂಸದ ಸಂಜೀವ್‌ ಬಾಲ್ಯಾನ್‌, ರಾಜ್ಯದ ಸಚಿವ ಸೋಮೇಂದ್ರ ತೋಮರ್‌ ಅವರು ಈ ಸಮ್ಮೇಳನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

ಉತ್ತರಪ್ರದೇಶದಲ್ಲಿ (Uttar Pradesh) 80 ಲೋಕಸಭಾ ಕ್ಷೇತ್ರಗಳು ಇದ್ದು, 2019ರಲ್ಲಿ ಬಿಜೆಪಿ 65ರಲ್ಲಿ ಗೆದ್ದಿತ್ತು. ಬಿಎಸ್ಪಿ 10, ಸಮಾಜವಾದಿ ಪಕ್ಷ 3 ಹಾಗೂ ಬಿಜೆಪಿಯ ಮಿತ್ರಪಕ್ಷ ಅಪ್ನಾದಳ- ಸೋನೇಲಾಲ್‌ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದವು.

ಇದನ್ನೂ ಓದಿ: ವೀರಶೈವ-ಲಿಂಗಾಯತರಿಗೆ ಸಮುದಾಯ ಆಕಾಂಕ್ಷಿಗಳಿಗೆ ಬಿಜೆಪಿ ಟಿಕೆಟ್ ನೀಡುವಂತೆ ಗುಬ್ಬಿಯಲ್ಲಿ ಮುಖಂಡರ ಸಭೆ