ಸುರ್ಜೇವಾಲಾ ಹೋದಲ್ಲೆಲ್ಲ ಬಿಜೆಪಿ ಪ್ರತಿಭಟನೆ: ಸಚಿವ ಸಿ.ಸಿ.ಪಾಟೀಲ್
ಸುರ್ಜೇವಾಲಾ ಅವರು ನಾಡಿನ ಮುಖ್ಯಮಂತ್ರಿ ಅವರನ್ನು ಶಕುನಿ ಇದ್ದಂತೆ ಎಂದು ನಿಂದಿಸಿದ್ದಾರೆ. ಹಾಗಾದರೆ ನಾವು ಸುರ್ಜೇವಾಲಾ ಅವರನ್ನು ಏನೆನ್ನಬೇಕು, ದುರ್ಯೋಧನ ಅನ್ನಬೇಕಾ? ಅವರು ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ಕೆಟ್ಟಪದ ಬಳಕೆ ಮಾಡಿರುವುದು ಇಡೀ ನಾಡಿಗೆ ಮಾಡಿದ ಅಪಮಾನ: ಸಿ.ಸಿ.ಪಾಟೀಲ್
ಬೆಂಗಳೂರು(ಮಾ.28): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಹೀಗಳೆದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರು ಹೋದಲ್ಲೆಲ್ಲಾ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಎಚ್ಚರಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸುರ್ಜೇವಾಲಾ ಅವರು ನಾಡಿನ ಮುಖ್ಯಮಂತ್ರಿ ಅವರನ್ನು ಶಕುನಿ ಇದ್ದಂತೆ ಎಂದು ನಿಂದಿಸಿದ್ದಾರೆ. ಹಾಗಾದರೆ ನಾವು ಸುರ್ಜೇವಾಲಾ ಅವರನ್ನು ಏನೆನ್ನಬೇಕು, ದುರ್ಯೋಧನ ಅನ್ನಬೇಕಾ? ಅವರು ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ಕೆಟ್ಟಪದ ಬಳಕೆ ಮಾಡಿರುವುದು ಇಡೀ ನಾಡಿಗೆ ಮಾಡಿದ ಅಪಮಾನ. ಕಾಂಗ್ರೆಸ್ ಪಕ್ಷಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ರಾಜ್ಯದ ಜನರ ಕ್ಷಮೆ ಕೇಳಬೇಕು. ಸುರ್ಜೇವಾಲಾ ಅವರಿಗೂ ಕ್ಷಮೆ ಕೇಳಲು ಪಕ್ಷ ಸೂಚಿಸಬೇಕು. ಒಂದು ವೇಳೆ ಅವರು ಕ್ಷಮೆ ಕೇಳದೆ ಹೋದರೆ ಅವರು ಹೋದ ಕಡೆಯಲ್ಲೆಲ್ಲಾ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೀಸಲಾತಿ ವಿಚಾರ; ಸಿಎಂ ಬೊಮ್ಮಾಯಿ ಆಧುನಿಕ ಶಕುನಿ: ಸುರ್ಜೇವಾಲಾ ಕಿಡಿ
ಸುರ್ಜೇವಾಲಾ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ? ರಾಜ್ಯದಲ್ಲಿ ಎಷ್ಟುಜಿಲ್ಲೆಗಳಿವೆ ಎಂದು ಅವರನ್ನು ಕೇಳಿ ನೋಡಿ? ಸ್ವಾತಂತ್ರ್ಯ ಬಂದಾಗಿನಿಂದ ಅನೇಕ ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ನವರಿಂದ ವಿವಿಧ ಸಮುದಾಯಗಳಿಗೆ ಸೂಕ್ತ ಮೀಸಲಾತಿ ನೀಡಲು ಆಗಿರಲಿಲ್ಲ. ಕೇವಲ ಮುಸ್ಲಿಮರ ಓಲೈಕೆ ಮಾಡಿಕೊಂಡು ಬಂದಿದ್ದರು. ಈಗಲೂ ಅದನ್ನೇ ಹೇಳುತ್ತಿದ್ದಾರೆ. ತಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದುಪಡಿಸಿರುವುದನ್ನು ವಾಪಸ್ ಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಮುಸ್ಲಿಮರ ಓಲೈಕೆಗಾಗಿ ಪರಿಜ್ಞಾನ ಇಲ್ಲದೆ ಮಾತನಾಡುತ್ತಿದ್ದಾರೆ. ಅವರಿಗೆ ಜನರೇ ಚುನಾವಣೆಯಲ್ಲಿ ಬುದ್ಧಿ ಕಲಿಸುತ್ತಾರೆ ಎಂದು ಸಚಿವರು ಹೇಳಿದರು.