*  ಡಿಎನ್‌ಎ ಮೂಲಕ ನಾಯಕತ್ವ ಬರಲ್ಲ ಎಂದು ಟಾಂಗ್‌*  ಎಚ್‌ಡಿಕೆ, ಜಮೀರ್‌ ಸಂಬಂಧ ಹೊರಬಿದ್ದರೆ ಮಾನಗೇಡಿ*  ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಲು ನೈತಿಕತೆ ಬೇಕು

ಹಾನಗಲ್ಲ(ಅ.27):  ಚೀಲದಲ್ಲಿ ಹಣ ತಂದು ಹಂಚುವ ಎಕ್ಸ್‌ಪರ್ಟ್‌ಗಳು ಕಾಂಗ್ರೆಸ್‌ನಲ್ಲಿದ್ದಾರೆ. ಅದರಲ್ಲಿ ಪದವಿ, ಪಿಎಚ್‌ಡಿ ಮಾಡಿದವರು ಅವರಲ್ಲಿದ್ದಾರೆ. ನಮ್ಮದು ಜಾತಿ ರಾಜಕಾರಣವಲ್ಲ. ನೀತಿ ರಾಜಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ(CT Ravi) ತಿರುಗೇಟು ನೀಡಿದ್ದಾರೆ. 

Add Asianetnews Kannada as a Preferred SourcegooglePreferred

ಇಲ್ಲಿಯ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಜಾತಿ(Caste) ಆಧಾರದ ಮೇಲೆ ಯಾವುದೇ ಯೋಜನೆ ತಂದಿಲ್ಲ. ಬಡವರ ಪರ ಯೋಜನೆ ತಂದಿದ್ದೇವೆ. ಆದರೆ, ಅದು ಕಾಂಗ್ರೆಸ್‌ನವರಿಗೆ(Congress) ಕೋಮುವಾದ ಕಂಡಂತೆ ಕಾಣುತ್ತಿದೆ ಎಂದರು.

ಬಿಜೆಪಿ ಪರ ಅಲೆ ಕಂಡು ಕಾಂಗ್ರೆಸ್‌ಗೆ ಸಾರ್ವತ್ರಿಕ ಚುನಾವಣೆ ಭೀತಿ ಶುರು: ಕಟೀಲ್‌

ಹೈಬ್ರೀಡ್‌ ರಾಜಕಾರಣಿಗಳನ್ನು ನಾವು ನೋಡಿದ್ದೇವೆ. ಕಾಂಗ್ರೆಸ್‌ಗೆ ಅಸಹನೆ ಕಾಡುತ್ತಿದೆ. ತನ್ನನ್ನು ಬಿಟ್ಟು ಅಧಿಕಾರದಲ್ಲಿ ಯಾರೂ ಇರಬಾರದು ಎಂಬ ಅಸಹನೆ ಅವರದು. ನಾವು ಯಾವತ್ತೂ ದೇಶಕ್ಕೆ ಹಾನಿಯಾಗುವ ವಿಚಾರವನ್ನು ಬೆಂಬಲಿಸಲಿಲ್ಲ. ಭಯೋತ್ಪಾದಕರನ್ನು(Terrorists) ಬೆಂಬಲಿಸಲಿಲ್ಲ. ನೈತಿಕ ಬೆಂಬಲದ ಹೆಸರಿನಲ್ಲಿ ದೇಶ ವಿರೋಧಿಗಳನ್ನು ಬೆಂಬಲಿಸುವ ಕೆಲಸ ಮಾಡಿಲ್ಲ. ದೇಶದೊಳಗಿದ್ದು ದೇಶ ಕುಗ್ಗಿಸುವ, ಚೀನಾ(China), ಪಾಕಿಸ್ತಾನ(Pakistan) ಮನೋಭಾವ ಬೆಂಬಲಿಸುವ ಕೆಲಸ ಮಾಡಿಲ್ಲ. ಹೊರಗಿನವರು ಯಾರೂ ಪ್ರಧಾನಿಯಾಗಿರಬಾರದು ಎಂಬ ಅಸಹನೆ ಅವರದ್ದು. ಚಹಾ ಮಾರುವ ಹುಡುಗ ಪ್ರಧಾನಿಯಾಗಿದ್ದು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹಿಂದುಳಿದ ನಾಯಕ ಎಂದು ಬಿಂಬಿಸುವುದರಲ್ಲಿ ಮೋದಿಯವರಂತ ಹಿಂದುಳಿದ ನಾಯಕ ಬೇಕಾ? ಆದರೆ ಅವರು ಎಂದೂ ಜಾತಿ ರಾಜಕಾರಣ(Politics) ಮಾಡಲಿಲ್ಲ ಎಂದರು.

ಜಾತಿವಾದಿ, ಮಜಾವಾದಿ, ಸಮಾಜವಾದಿ, ಡಿಎನ್‌ಎ ಮೂಲಕ ನಾಯಕತ್ವ ಬರುವುದಿಲ್ಲ. ಕೆಲವರು ಡಿಎನ್‌ಎ ಮೂಲಕ ನಾಯಕತ್ವ ತೆಗೆದುಕೊಳ್ಳಲು ಮುಂದಾಗುತ್ತಿದ್ದಾರೆ. ಅವರು ಹೈಬ್ರೀಡ್‌ ನಾಯಕರು.
ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್‌ ನೇಪಥ್ಯಕ್ಕೆ ಸರಿದಿದೆ. ಈಗಿರುವ ಕಾಂಗ್ರೆಸ್‌, ಆಗಿನ ಕಾಂಗ್ರೆಸ್‌ಗೆ ಸಂಬಂಧವೇ ಇಲ್ಲ. ಈಗಿರುವ ಕಾಂಗ್ರೆಸ್‌ ತುಕಡೆ ಗ್ಯಾಂಗ್‌ಗಳ ನೇತಾರರನ್ನು ನಾಯಕರನ್ನಾಗಿ ಮಾಡಿದೆ. ಭಯೋತ್ಪಾದಕ ಬೆಂಬಲಿಸುವ ಪಕ್ಷ ಕಾಂಗ್ರೆಸ್‌ ಎಂದು ವಾಗ್ದಾಳಿ ನಡೆಸಿದರು.

ಪ್ರಜಾಪ್ರಭುತ್ವದ(Democracy) ಬಗ್ಗೆ ಮಾತನಾಡುವ ಯಾವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ತನ್ನ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಕೂಡ ಅವರಿಗೆ ಉಳಿದಿಲ್ಲ. ಕಾಂಗ್ರೆಸ್‌ ಅಧಿಕಾರ ಇರುವುದೇ ಒಂದು ಕುಟುಂಬದ ಕೈಯಲ್ಲಿ. ನಾನೇ ಪಕ್ಷದ ಅಧ್ಯಕ್ಷ ಎಂದು ಹೇಳುವ ಅಹಸ್ಯ ನಡೆದಿದೆ. ಪಕ್ಷದ ಒಳಗೆ ಪ್ರಜಾಪ್ರಭುತ್ವ ಇಲ್ಲದ ಪಕ್ಷಕ್ಕೆ ಜನತಂತ್ರದ ಯಾವ ನೈತಿಕತೆಯೂ ಇಲ್ಲದಂತಾಗಿದೆ ಎಂದರು.

'ಬಿಜೆಪಿಯಿಂದ ಜನ ಬೇಸತ್ತಿದ್ದಾರೆ : ಕಾಂಗ್ರೆಸ್‌ಗೆ ಜಯ ಖಚಿತವಾಗಿದೆ'

ದುರ್ದೈವ ಸಂಗತಿ ಎಂದರೆ ರೈತ ಪರ, ಜನಪರ ಇರುವ ಯೋಜನೆಗಳನ್ನು ಕಾಂಗ್ರೆಸ್‌ ಜನ ವಿರೋಧಿ ಎಂದು ಬಿಂಬಿಸುತ್ತಿದೆ. ತಾವು ಒಳ್ಳೆಯ ಕಾರ್ಯ ಮಾಡಲಿಲ್ಲ. ನಮಗೂ ಮಾಡಲು ಬಿಡುತ್ತಿಲ್ಲ. ಕೃಷಿ ಮಸೂದೆ ತಿದ್ದುಪಡಿಯಲ್ಲಿ ಯಾವ ಅಂಶ ತಪ್ಪಾಗಿದೆ ಹೇಳಲಿ ನೋಡೋಣ ಎಂದು ಸಿ.ಟಿ. ರವಿ ಸವಾಲೆಸೆದರು.

ಆರ್‌ಎಸ್‌ಎಸ್‌(RSS) ಬಗ್ಗೆ ಮಾತನಾಡಲು ನೈತಿಕತೆ ಬೇಕು. ಆರ್‌ಎಸ್‌ಎಸ್‌ ಸೂರ್ಯ ಇದ್ದಂತೆ. ಮೇಲಕ್ಕೆ ಉಗಿದರೆ ಅದು ವಾಪಸ್‌ ಅವರ ಮುಖಕ್ಕೆ ಬೀಬಿಳುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ತಿರುಗೇಟು ನೀಡಿದರು.

ಬಿಜೆಪಿ(BJP) ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಶಾಸಕ ಅರುಣಕುಮಾರ ಪೂಜಾರ, ಪರಣ್ಣ ಮುನವಳ್ಳಿ, ಬಸವರಾಜ ದಡೆಸೂಗೂರ ಇತರರು ಇದ್ದರು.

ಎಚ್‌ಡಿಕೆ, ಜಮೀರ್‌ ಸಂಬಂಧ ಹೊರಬಿದ್ದರೆ ಮಾನಗೇಡಿ

ಎಚ್‌.ಡಿ. ಕುಮಾರಸ್ವಾಮಿ ಮತ್ತು ಜಮೀರ್‌ ಅಹ್ಮದ್‌(Zameer Ahmed Khan) ಅವರ ಸಂಬಂಧ ಹೊರಬಿದ್ದರೆ ಎರಡೂ ಪಕ್ಷಗಳಿಗೆ ಗೌರವ ಇರಲ್ಲ ಎಂದು ಸಿ.ಟಿ.ರವಿ ಹೊಸ ಬಾಂಬ್‌ ಸಿಡಿಸಿದರು. ತಮಗಿರುವ ಮಾಹಿತಿ ಪ್ರಕಾರ ಅವರಿಬ್ಬರ ಸಂಬಂಧ ಬಹಿರಂಗವಾದರೆ ಯಾರೂ ಸಮರ್ಥಿಸುವ ರೀತಿ ಇಲ್ಲ. ಬಾಯಿ ಬಿಟ್ಟರೆ ಬಣ್ಣಗೇಡಾಗುತ್ತದೆ ಎಂದು ಹೇಳಿದರು.