ಮನೆ ಬಾಗಿಲಿಗೆ ಹೋದ್ರೂ ಸಿಎಂ ದರ್ಶನ ಸಿಗದೇ ಎಂಟಿಬಿ ವಾಪಸ್...!
ಮೈತ್ರಿ ಸರ್ಕಾರ ಪತನದ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೇರಿ ಇಂದಿಗೆ ಒಂದು ವರ್ಷ ಪೂರೈಸಿದೆ. ಇದರಿಂದ ವಿಧಾನಪರಿಷತ್ ಸದಸ್ಯ ಸಿಎಂಗೆ ಶುಭಾಶಯ ತಿಳಿಸಲು ಹೋಗಿ ಬರಿಗೈಯಿಂದ ವಾಪಸ್ ಆಗಿರುವ ಪ್ರಸಂಗ ನಡೆದಿದೆ.
ಬೆಂಗಳೂರು, (ಜುಲೈ.26): ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಸಿಎಂ ಮನೆ ಬಾಗಿಲಿಗೆ ಹೋದ್ರೂ ಯಡಿಯೂರಪ್ಪ ಅವರನ್ನ ಭೇಟಿಯಾಗದೇ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಆಗಿದ್ದಾರೆ. ಈ ಬಗ್ಗೆ ಎಂಟಿಬಿ ಅವರೇ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ನಿವಾಸ ಕಾವೇರಿ ಮುಂಭಾಗದಲ್ಲಿ ನಿಂತು ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ, ಸಿಎಂಗೆ ಬೊಕ್ಕೆ ಕೊಟ್ಟು ವಿಶ್ ಮಾಡೋಣ ಅಂತಾ ಬಂದಿದ್ದೆ. ಆದರೆ ಮುಖ್ಯಮಂತ್ರಿ ಮನೆಯೊಳಗೆ ಹೋಗ್ಬಿಟ್ಟಿದ್ರು. ಇದರಿಂದ ಭೇಟಿ ಸಾಧ್ಯ ವಾಗಿಲ್ಲ. ಮತ್ತೆ ಅವರನ್ನು ಸಂಜೆ ಭೇಟಿ ಮಾಡಿ ವಿಶ್ ಮಾಡ್ತೇನೆ ಎಂದು ಹೇಳಿದರು.
1224 ಕೋಟಿ ರು. ಆಸ್ತಿ ಒಡೆಯ MTB ನಾಗರಾಜ್!
ಸಿಎಂ ಯಡಿಯೂರಪ್ಪ ನನಗೆ ಪರಿಷತ್ ಸ್ಥಾನ ಕೊಟ್ಟಿದ್ದಾರೆ. ಮುಂದೆ ಮಂತ್ರಿ ಸ್ಥಾನದ ಬಗ್ಗೆ ಸಿಎಂ, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದನಿದ್ದೇನೆ. ಸದ್ಯ ಪರಿಷತ್ ಸ್ಥಾನ ಸಿಕ್ಕಿರುವುದರಿಂದ ನಾನು ತೃಪ್ತಿಯಾಗಿದ್ದೇನೆ ಎಂದರು.
ನಾನು 1978ರಿಂದಲೂ ಕಾಂಗ್ರೆಸ್ನಲ್ಲಿ ಇದ್ದವನು. ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಬಂದವರು. ನನಗೆ ಟಿಕೆಟ್ ಕೊಟ್ಟವರು ಎಸ್.ಎಂ.ಕೃಷ್ಣ . ಕಾಂಗ್ರೆಸ್ನಲ್ಲಿದ್ದಾಗ ಸಿದ್ದರಾಮಯ್ಯ ನಾಯಕತ್ವದಲ್ಲಿ ಇದ್ದರು. ಆದ್ದರಿಂದ ಅವರ ನಾಯಕತ್ವದಲ್ಲಿ ಕೆಲಸ ಮಾಡಿದ್ದೆವು. ನಾನು ಈಗ ಬಿಜೆಪಿಗೆ ಬಂದಿದ್ದೇನೆ, ಬಿಜೆಪಿಗೆ ನಿಷ್ಠನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು..
ನನ್ನನ್ನು ಸಚಿವನನ್ನಾಗಿ ಮಾಡುವ ಬಗ್ಗೆ ಪಕ್ಷದಿಂದ ನನಗೆ ಯಾವುದೇ ಭರವಸೆ ಕೊಟ್ಟಿಲ್ಲ. ಸಿಎಂ, ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ದನಾಗಿರುತ್ತೇನೆ. ನನಗೆ ಆಗಿರುವ ಅನ್ಯಾಯವನ್ನು ಸಿಎಂ ಯಡಿಯೂರಪ್ಪ ಸರಿಪಡಿಸಿದ್ದಾರೆ ಎಂದು ತಿಳಿಸಿದರು.