Asianet Suvarna News Asianet Suvarna News

ಪಂಚಾಯ್ತಿ ಚುನಾವಣೆಗೆ ಬಿಜೆಪಿ ಪಂಚತಂತ್ರ : ಸಿದ್ಧವಾಗ್ತಿದೆ ಮಾಸ್ಟರ್ ಪ್ಲಾನ್

ರಾಜ್ಯದಲ್ಲಿ ಇನ್ನೇನು ಶೀಘ್ರದಲ್ಲೇ ಗ್ರಾಮ ಪಮಚಾಯತ್ ಚುನಾವಣೆ ಆರಂಭವಾಗುತ್ತಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಮಾಸ್ಟರ್ ಪ್ಲಾನ್ ಸಿದ್ಧವಾಗ್ತಿದೆ 

BJP Master plan for Next Grama Panchayat Election snr
Author
Bengaluru, First Published Nov 24, 2020, 8:11 AM IST

 ಬೆಂಗಳೂರು (ನ.24):  ರಾಜ್ಯದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದ್ದು, ಚುನಾವಣಾ ಸಿದ್ಧತೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ. ಜತೆಗೆ ಚುನಾವಣೆಗಳನ್ನು ಗೆಲ್ಲಲು ಸ್ಥಳೀಯ ಮಟ್ಟದಲ್ಲಿ ‘ಪಂಚರತ್ನ ಸಮಿತಿ’ ರಚನೆ ಮತ್ತು ‘ಪಂಚಸೂತ್ರ ಯೋಜನೆ’ಗಳನ್ನು ಸೇರ್ಪಡೆ ಮಾಡಲಾಗಿದೆ

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ್‌ ಸವದಿ, ಸಚಿವರಾದ ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಹಾಗೂ ಆರ್‌.ಅಶೋಕ್‌ ನೇತೃತ್ವದಲ್ಲಿ ಆರು ಸಮಾವೇಶ ತಂಡಗಳನ್ನು ರಚಿಸಲಾಗಿದೆ.

ಮುಂದಿನ ದಿನಗಳಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತರು ನಾಯಕತ್ವ ವಹಿಸುವಂತಾಗಬೇಕು ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಪ್ರತಿ ಎರಡು ಜಿಲ್ಲೆಗೆ ಒಂದರಂತೆ ‘ಗ್ರಾಮ ಸ್ವರಾಜ್‌’ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನ.27ರಿಂದ ಡಿ.3ರವರೆಗೆ ಸಮಾವೇಶಗಳು ನಡೆಯಲಿವೆ.

ಇಲ್ಲಿಯೂ ಬಿಜೆಪಿಗೆ ಸಿಗಲಿದೆ ಆಶೀರ್ವಾದ : ತೇಜಸ್ವಿ ಸೂರ್ಯ ಭರವಸೆ .

ಸೋಮವಾರ ಹೋಟೆಲ್‌ವೊಂದರಲ್ಲಿ ಪಕ್ಷದ ಪ್ರಮುಖರನ್ನು ಒಳಗೊಂಡ ಸಂಘಟನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಾಧ್ಯಕ್ಷ ಕಟೀಲ್‌ ಈ ವಿವರ ನೀಡಿದರು.

ಉಪ ಚುನಾವಣೆಗಳ ಸಮಯದಲ್ಲಿಯೇ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸೂಚನೆ ಮೇರೆಗೆ ‘ಪೇಜ್‌ ಪ್ರಮುಖ್‌’ ಅನ್ನು ನೇಮಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ ‘ಪಂಚರತ್ನ ಸಮಿತಿ’ ಮತ್ತು ‘ಪಂಚಸೂತ್ರ ಯೋಜನೆ’ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪಂಚಸೂತ್ರದಲ್ಲೇನಿದೆ?:  ಪಂಚಸೂತ್ರದ ಅಡಿಯಲ್ಲಿ ವಾರ್‌ ರೂಂಗಳು ಕಾರ್ಯ ನಿರ್ವಹಿಸಲಿವೆ. ಇದರ ಜೊತೆಗೆ ‘ಕುಟುಂಬ ಮಿಲನ’ ಕಾರ್ಯಕ್ರಮವನ್ನೂ ಜಾರಿಗೊಳಿಸಲಾಗುತ್ತಿದೆ. ಇವೆಲ್ಲವುಗಳ ನೆರವಿನಿಂದ ಶೇ.80ಕ್ಕೂ ಹೆಚ್ಚಿನ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿ ಪಂಚಾಯಿತಿಗಳಲ್ಲಿಯೂ ಎಲ್ಲಾ ಜಾತಿಯವರಿಗೆ ಸ್ಪರ್ಧಿಸಲು ಪಕ್ಷ ಆದ್ಯತೆ ನೀಡಲಿದೆ. ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರು ಪಂಚಾಯತಿಗಳಿಗೆ ಗರಿಷ್ಠ ಅನುದಾನ ನೀಡಿರುವುದು ಅಭೂತಪೂರ್ವ ಗೆಲವಿಗೆ ಸಹಕಾರಿಯಾಗಲಿದೆ ಎಂದರು.

ಸಭೆಯಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌, ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್‌.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಆರ್‌. ಅಶೋಕ್‌ ಮತ್ತು ಬಿ.ಶ್ರೀರಾಮುಲು ಭಾಗವಹಿಸಿದ್ದರು

Follow Us:
Download App:
  • android
  • ios