ಬಿಜೆಪಿಗೆ ಭಾರಿ ಹಿನ್ನಡೆ : ಕಾಂಗ್ರೆಸ್ ಸೇರಿದ ಶಾಸಕ
ಬಿಜೆಪಿಗೆ ಶಾಸಕರೋರ್ವರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದ ಚುನಾವಣೆ ಹೊಸ್ತಿಲಲ್ಲಿ ಪಕ್ಷಕ್ಕೆ ಬಿಗ್ ಶಾಕ್ ದೊರೆತಂತಾಗಿದೆ.
ಜೈಪುರ : ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದೆ. ಪಕ್ಷಗಳು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದು ಇದೇ ವೇಳೆ ಸದ್ಯ ಆಡಳಿತ ಪಕ್ಷವಾಗಿರುವ ಬಿಜೆಪಿಗೆ ಹಿನ್ನಡೆ ಎದುರಾಗಿದೆ.
ಈ ಬಾರಿ ವಿಧಾನಸಭಾ ಚುನಾವಣೆಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಶಾಸಕ ಹಬೀಬುರ್ ರೆಹ್ಮಾನ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಸಂಸದರಾಗಿದ್ದ ಹರೀಶ್ ಮೀನಾ ಅವರು ಬಿಜೆಪಿ ತೊರೆದು ಶಾಕ್ ನೀಡಿದ ಬೆನ್ನಲ್ಲೇ ಇದೀಗ ಶಾಸಕ ರೆಹ್ಮಾನ್ ಕಾಂಗ್ರೆಸ್ ಸೇರಿದ್ದು ಚುನಾವಣಾ ಹೊಸ್ತಿಲಲ್ಲೇ ಏಟು ಬಿದ್ದಂತಾಗಿದೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಜ್ಮೀರ್ ಕ್ಷೇತ್ರದ ಸಂಸದ ರಘು ಶರ್ಮ , ಬಿಜೆಪಿಯಲ್ಲಿರುವ ಮುಖಂಡರು ಅಲ್ಲಿ ಒಂದು ರೀತಿಯ ತಳಮಳವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನವರು ಕಾಂಗ್ರೆಸಿನತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳ ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದ ರೆಹ್ಮಾನ್ ಬಳಿಕ ಬಿಜೆಪಿ ಸೇರಿದ್ದರು. ಇದೀಗ ಮತ್ತೊಮ್ಮೆ ತಮ್ಮ ಹಳೆಯ ಪಕ್ಷಕ್ಕೆ ಮರಳಿದ್ದಾರೆ.
ಸ್ವತಃ ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ರೆಹ್ಮಾನ್ ಯಾವುದೇ ನಿಯಮಗಳನ್ನು ಹೇರದೆ ಇರುವ ಕಾಂಗ್ರೆಸ್ ಮೂಲಕ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಿಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಇದೇ ಡಿಸೆಂಬರ್ 7 ರಂದು ರಾಜಸ್ಥಾನದಲ್ಲಿ ಚುನಾವಣೆ ನಡೆಯುತ್ತಿದ್ದು, 11 ರಂದು ಫಲಿತಾಂಶ ಪ್ರಕಟವಾಗಲಿದೆ.