ಬಿಜೆಪಿ ಉಪಚುನಾವಣೆ ಎದುರಿಸಲಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದೆ. ಅಭ್ಯರ್ಥಿ ಯಾರು ಎಂಬುದಕ್ಕಿಂತ ಪಕ್ಷ ಮತ್ತು ಪಕ್ಷದ ಚಿಹ್ನೆ ಮುಖ್ಯ ಎಂಬ ಉದ್ದೇಶದಿಂದ ಆಯಾ ಕ್ಷೇತ್ರಗಳಲ್ಲಿ ಸಿದ್ಧತೆ ನಡೆಸುವಂತೆ ಸೂಚನೆ ರವಾನಿಸಲಾಗಿದೆ. 

ಬೆಂಗಳೂರು [ನ.09] : ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‌ನ ತೂಗುಯ್ಯಾಲೆಯಲ್ಲಿ ಮುಂದುವರೆದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಉಪಚುನಾವಣೆ ಎದುರಿಸಲಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಪ ಚುನಾವಣೆ ಮುಂದೂಡುವಂತೆ ಅನರ್ಹರು ನೀಡಿರುವ ಅರ್ಜಿಯನ್ನು ಚುನಾವಣಾ ಆಯೋಗ ಪರಿಗಣಿಸುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲದ ನಡುವೆಯೇ ಈ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಂಬಂಧ ಸೋಮವಾರ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ. ಹೀಗಾಗಿ, ಅಭ್ಯರ್ಥಿ ಯಾರು ಎಂಬುದಕ್ಕಿಂತ ಪಕ್ಷ ಮತ್ತು ಪಕ್ಷದ ಚಿಹ್ನೆ ಮುಖ್ಯ ಎಂಬ ಉದ್ದೇಶದಿಂದ ಆಯಾ ಕ್ಷೇತ್ರಗಳಲ್ಲಿ ಸಿದ್ಧತೆ ನಡೆಸುವಂತೆ ಸೂಚನೆ ರವಾನಿಸಲಾಗಿದೆ.

ಚಾಣಕ್ಷ್ಯತನದ ಮೂಲಕ ಮತ್ತೊಮ್ಮೆ ಬಿಜೆಪಿ ನಾಯಕರ ಗಮನ ಸೆಳೆಯ ಗೌಡರು

ಈಗಾಗಲೇ ಎಲ್ಲ ಬೂತ್‌ ಕಮಿಟಿಗಳನ್ನು ಹೊಸದಾಗಿ ರಚಿಸಿರುವುದರಿಂದ ಅವುಗಳು ಉಪ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಕಾರ್ಯಪ್ರವೃತ್ತವಾಗಿವೆ. ಪಕ್ಷ ಗೆಲ್ಲಬೇಕು ಎಂಬ ಏಕೈಕ ಗುರಿಯೊಂದಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ರಾಜ್ಯ ಘಟಕದಿಂದ ಸಂದೇಶ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫಿಟ್‌ ಆಗಿದ್ದವರಿಗೆ ಆದ್ಯತೆ

ಬರುವ ಡಿಸೆಂಬರ್‌ ತಿಂಗಳಲ್ಲಿ ಪಕ್ಷದ ಮಂಡಲ ಮತ್ತು ಜಿಲ್ಲಾ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿಸಲು ಉದ್ದೇಶಿಸಲಾಗಿದ್ದು, ದೈಹಿಕವಾಗಿ ಗಟ್ಟಿಯಾಗಿದ್ದವರಿಗೆ ಆದ್ಯತೆ ನೀಡಲು ಬಿಜೆಪಿಯಲ್ಲಿ ಗಂಭೀರ ಚಿಂತನೆ ನಡೆದಿದೆ. ಮಂಡಲ ಅಧ್ಯಕ್ಷರಾಗಲು ಸರಿಸುಮಾರು 50 ವರ್ಷದ ಆಸುಪಾಸಿನಲ್ಲಿರುವವರು ಹಾಗೂ ಜಿಲ್ಲಾಧ್ಯಕ್ಷರಾಗಲು 60ರ ಆಸುಪಾಸಿನಲ್ಲಿ ಇರುವವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚು ವಯಸ್ಸಾಗಿ ದೈಹಿಕವಾಗಿ ಗಟ್ಟಿಯಿಲ್ಲದವರಿಗೆ ಓಡಾಡಲು ಕಷ್ಟಎಂಬ ಕಾರಣಕ್ಕಾಗಿ ಅಂಥವರನ್ನು ಸಂಘಟನೆಯ ಅಧ್ಯಕ್ಷ ಹುದ್ದೆಗೆ ಪರಿಗಣಿಸುವುದು ಬೇಡ ಎಂಬ ಮಾತು ಕೇಳಿಬಂದಿದೆ.