ವಯಸ್ಸು 72 ರ ಆಸುಪಾಸು. ಐದು ಬಾರಿ ಶಾಸಕ. ಎರಡು ಬಾರಿ ಸಚಿವ. ಈಗ ಮತ್ತೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಾಬು ರಾವ್ ಚಿಂಚನಸೂರು ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು (ಆ.1): ವಯಸ್ಸು 72 ರ ಆಸುಪಾಸು. ಐದು ಬಾರಿ ಶಾಸಕ. ಎರಡು ಬಾರಿ ಸಚಿವ. ಈಗ ಮತ್ತೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆಗಿ ನಾಮಪತ್ರ ಸಲ್ಲಿಕೆ. ಇವರ ಹೆಸರು ಬಾಬು ರಾವ್ ಚಿಂಚನಸೂರು. ಎಸ್ ಎಂ ಕೃಷ್ಣ ಸಂಪುಟದಲ್ಲಿ ಸಚಿವರಾಗಿ, ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಜವಳಿ ಖಾತೆ ಮಿನಿಸ್ಟರ್ ಆಗಿ ಮೂರು ವರ್ಷ ಅಧಿಕಾರ ನಡೆಸಿದ ಚಿಂಚನಸೂರು ಸಿದ್ದರಾಮಯ್ಯ ಸಂಪುಟದಿಂದ ಕೈಬಿಟ್ಟಿದ್ದಕ್ಕೆ ಕೋಪ ಮಾಡಿಕೊಂಡು, 2018 ರಲ್ಲಿ ಬಿಜೆಪಿ ಸೇರಿದ್ರು. ಬಿಜೆಪಿಯಿಂದ 2018 ರಿಂದ ಗುರುಮಿಟ್ಕಲ್ ಕ್ಷೆತ್ರದಿಂದ ಸ್ಪರ್ಧೆ ಮಾಡಿ ಸೋತರು. ಈಗ ಸಿಎಂ ಇಬ್ರಾಹಿಂ ರಾಜೀನಾಮೆ ಇಂದ ತೆರವಾಗಿರುವ ಮೇಲ್ಮನೆ ಸ್ಥಾನಕ್ಕೆ ಚಿಂಚನಸೂರಿಗೆ ಬಿಜೆಪಿ ಅಭ್ಯರ್ಥಿ ಮಾಡಿದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಮಾತನಾಡಿದ ಬಾಬುರಾವ್ ನನಗೆ ಪಕ್ಷ ಅಭ್ಯರ್ಥಿ ಮಾಡಿದೆ. ಆ ಭಾಗದಲ್ಲಿ ಬಿಜೆಪಿ ಬೆಳೆಸೋಕೆ ಪ್ರಯತ್ನ ಮಾಡ್ತೇನೆ ಎಂದರು. ಅದರ ಜೊತಗೆ ನಾನು ಗುರುಮಿಠ್ಕಲ್ ಕ್ಷೇತ್ರದಿಂದ 2023 ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡ್ತೆನೆ ಎನ್ನುವ ಮೂಲಕ ನಾನು ಆಕಾಂಕ್ಷಿ ಎನ್ನೋದನ್ನ ನೇರವಾಗಿ ಹೇಳಿದ್ರು. 75 ವರ್ಷ ಆದವರಿಗೆ ಪಕ್ಷ ಟಿಕೆಟ್ ಕೊಡಬಾರು ಎಂಬ ನಿಯಮ ಮಾಡಿದ್ಯಲ್ಲ ಎಂದು ಪತ್ರಕರ್ತರು ಕೇಳಿದ್ದಕ್ಕೆ, ರೀ ನನಗೆ ಏನ್ ವಯಸ್ಸಾಗಿದೆ. ನಾನು ಮದುವೆ ಗಂಡಿನ ತರ ಇದ್ದೇನೆ ಎಂದು ನಗೆ ಚಟಾಕಿ ಹಾರಿಸಿದ್ರು. ಗುರುಮಿಟ್ಕಲ್ ಕ್ಷೇತ್ರದಲ್ಲಿ 45 ಸಾವಿರ ಮತಗಳಿಂದ ಗೆಲ್ತೇನೆ ಎನ್ನುವ ವಿಶ್ವಾಸ ಕೂಡ ವ್ಯಕ್ತಪಡಿಸಿದ್ರು.

Add Asianetnews Kannada as a Preferred SourcegooglePreferred

ಪ್ರಿಯಾಂಕ ಖರ್ಗೆಗೆ ಮಿನಿಸ್ಟರ್ ಮಾಡಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಸೋಲಿಸಿದ್ರು
ಸಿದ್ದರಾಮಯ್ಯ ಸಿಎಂ ಆಗಿದ್ದ ಸಮಯದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಬಹುತೇಕ ಹಿರಿಯ ಕೈ ನಾಯಕರು ಬಿಜೆಪಿ ಸೇರಿದ್ರು. ಅದಕ್ಕೆ ಪ್ರಮುಖ ಕಾರಣ ಮಲ್ಲಿಕಾರ್ಜುನ ಖರ್ಗೆ ಮೇಲಿನ ಸಿಟ್ಟು, ಪ್ರಿಯಾಂಕ ಖರ್ಗೆಗೆ ಮಂತ್ರಿ ಮಾಡಿದಕ್ಕೆ ಬೇಸರ. ಹೌದು, ಸಿದ್ದರಾಮಯ್ಯ ಸಂಪುಟದಿಂದ ಬಾಬುರಾವ್ ಚಿಂಚನಸೂರುನ್ನು ಅಂದು ಸಿದ್ದರಾಮಯ್ಯ ಕೈ ಬಿಟ್ಟು ಪ್ರಿಯಾಂಕ ಖರ್ಗೆಯನ್ನು ಸಂಪುಟಕ್ಕೆ ಸೇರಿಸಿಕೊಂಡ್ರು. ಇದ್ರಿಂದ ಆ ಭಾಗದ ಹಿರಿಯ ನಾಯಕರು ಸಿಟ್ಟಾದ್ರು. ಅದು ಎಷ್ಟರ ಮಟ್ಟಿಗಿನ ರಾಜಕೀಯ ಮೇಲಾಟ ಅಂದ್ರೆ ಮಲ್ಲಿಕಾರ್ಜುನ ಖರ್ಗೆಯನ್ನು ಸೋಲಿಸುವಷ್ಟರ ತನಕ.

ಸಾಲು ಸಾಲು ಕೈ ನಾಯಕರ ಪಕ್ಷಾಂತರ
ಸಿದ್ದರಾಮಯ್ಯ ಮೇಲಿನ ಕೋಪ ಒಂದು ಕಡೆ ಆದರೆ, ಮಲ್ಲಿಕಾರ್ಜುನ ಖರ್ಗೆಯವರು ತಮ್ಮನ್ನು ರಾಜಕೀಯವಾಗಿ ಬೆಳೆಸಲ್ಲ, ಕೇವಲ ತಾವು ತಮ್ಮ ಮಗನಿಗೆ ಅವಕಾಶ ನೀಡ್ತಾರೆ ಎನ್ನುವ ಸಿಟ್ಟಿನಿಂದ ಕೈ ನಾಯಕರಾದ ಮಾಲೇಕಯ್ಯ ಗುತ್ತೇದಾರ್, ಬಾಬು ರಾವ್ ಚಿಂಚನಸೂರು, ಡಾ. ಎಬಿ ಮಾಲಕರೆಡ್ಡಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ರು. ಆದ್ರೆ ಕಾಂಗ್ರೆಸ್ ಬಿಟ್ಟ ಈ ಮೂವರು 2018ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಸೋತಿದ್ರು ಎನ್ನೋದು ಗಮನಾರ್ಹ.

ರಾಜ್ಯಸಭೆ ಟಿಕೆಟ್: ಪ್ರಭಾವಿಗಳಿಗೂ ಮೋದಿ ಅರ್ಧಚಂದ್ರ

ವಿಧಾನಸಭೆ ಚುನಾವಣೆ ತರುವಾಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಗಿ ಕಲಬುರಗಿ ಲೋಕಸಭೆಗೆ ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ರು. ಆದ್ರೆ ಖರ್ಗೆ ಸೋಲಿಸುವ ಪಣ ತೊಟ್ಟ ಆ ಭಾಗದ ಈ ಪ್ರಮುಖ ಮೂವರು ಲೀಡರ್ಸ್, ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದ ಉಮೇಶ್ ಜಾದವ್ ಗೆ ಮನವೋಲಿಸಿ ಲೋಕಸಭಾಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿಸುವಲ್ಲಿ ಯಶಸ್ವಿ ಆದ್ರು. ಮಾತ್ರವಲ್ಲ ಸೋಲಿಲ್ಲದ ಸರದಾರ ಎಂಬ ಬಿರುದಾಂಕಿತ ಮಲ್ಲಿಕಾರ್ಜುನ ಖರ್ಗೆಯಿಂದ ಕೈ ತಪ್ಪಿತು. ಉಮೇಶ್ ಜಾದವ್ ಸಂಸದರಾಗಿ ಆಯ್ಕೆಯಾದರು.

ಸಿ.ಎಂ.ಇಬ್ರಾಹಿಂ ಸ್ಥಾನಕ್ಕೆ ಬೈ ಎಲೆಕ್ಷನ್, ಹಿಂದೂಳಿದ ವರ್ಗಕ್ಕೆ ಮಣೆ ಹಾಕಿದ ಬಿಜೆಪಿ

ಗುರುಮಿಟ್ಕಲ್ ಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ
ಸಹಜವಾಗಿ ಬಾಬುರಾವ್ ಚಿಂಚನಸೂರು ನಾನು ಕೂಡ ಆಕಾಂಕ್ಷಿ ಎನ್ನೋದನ್ನ ಅವರೇ ಇಂದು ಹೇಳಿಕೊಂಡಿದ್ದಾರೆ. ಆದ್ರೆ ಪಕ್ಷ ಈ ಬಾರಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಕಡಿಮೆ ಇದೆ‌. ವಯಸ್ಸಿನ ಕಾರಣ ಇತ್ಯಾದಿ. ಹೀಗಾಗಿ ಅವರಿಗೆ ಮೇಲ್ಮನೆಗೆ ಕಳಿಸುವ ಪ್ಲಾನ್ ಪಕ್ಷದಾಗಿದೆ ಎನ್ನೋದು ರಾಜಕೀಯ ಲೆಕ್ಕಾಚಾರದ ಮಾತುಗಳು. ಗುರುಮಿಟ್ಕಲ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಭೋವಿ ಸಮುದಾಯದ ಉದ್ಯಮಿಯಾಗಿರುವ ಡಾ. ಯೋಗೇಶ್ ಎನ್ನೋರು ಕೂಡ ಪ್ರಯತ್ನ ಮಾಡ್ತಾ ಇದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ಓಡಾಡ ಶುರು ಮಾಡಿದ್ದು ಬಿಜೆಪಿಯಿಂದ ಟಿಕೆಟ್ ಪಡೆಯುವ ಕಸರತ್ತು ಕೂಡ ನಡೆಸಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 25 ಸ್ಥಾನ ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ಈಗಾಗಲೇ ಚುನಾವಣೆ ತಯಾರಿ ಆರಂಭ ಮಾಡಿದೆ.