ರಾಜು ಕಾಗೆ ಆಪರೇಷನ್ ಸಕ್ಸಸ್ ಬೆನ್ನಲ್ಲೇ 'ಕೈ' ಬುಟ್ಟಿಯಲ್ಲಿ ಮತ್ತೋರ್ವ ಬಿಜೆಪಿ ನಾಯಕ
ಕಾಗವಾಡ ಮಾಜಿ ಶಾಸಕ, ಬಿಜೆಪಿ ನಾಯಕ ರಾಜು ಕಾಗೆ ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು, ನಾಮಪತ್ರ ಸಲ್ಲಿಕೆಗೂ ಮುಹೂರ್ತ ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ನಾಯಕ ಕಾಂಗ್ರೆಸ್ ಸೇರುವ ಸರದಿಯಲ್ಲಿದ್ದಾರೆ. ಯಾರವರು..? ಮುಂದೆ ಓದಿ...
ಬೆಂಗಳೂರು/ಬೆಳಗಾವಿ, [ನ.11]: ಬೆಳಗಾವಿಯ ಕಾಗವಾಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಕಾಂಗ್ರೆಸ್ ಸೇರುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಮತ್ತೋರ್ವ ಬಿಜೆಪಿ ನಾಯಕ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರುವ ಸರದಿಯಲ್ಲಿ ನಿಂತಿದ್ದಾರೆ.
ಆದ್ರೆ ಕಾಂಗ್ರೆಸ್ ನಿಂದ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಸಿಕ್ಕಿಲ್ಲದಿರುವುದರಿಂದ ಅಶೋಕ್ ಪೂಜಾರಿ ಕೈ ಬಾಗಿಲಲ್ಲಿ ಕಾದು ನಿಂತಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಗೋಕಾಕ್ ನಿಂದ ಕಣಕ್ಕಿಳಿಯವುದು ಪಕ್ಕಾ ಆಗಿದ್ದು, ಇದೇ ಬುಧವಾರ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಪ್ರಕಟವಾದ ಬಳಿಕ ಅಂತಿಮ ಚಿತ್ರಣ ಸಿಗಲಿದೆ.
ಸಿದ್ದು ತಂತ್ರ ಸಕ್ಸಸ್: ಕಾಂಗ್ರೆಸ್ಗೆ ಹಾರಿದ ಕಾಗೆ, ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್
ಇತ್ತ ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಗೋಕಾಕ್ ನಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ಗೆ ಲಾಭಿ ನಡೆಸಿದ್ದು, ಕೊನೆ ಗಳಿಗೆಯಲ್ಲಿ ಹಲವು ಕಾಂಗ್ರೆಸ್ ನಾಯಕರು ಭೇಟಿಯಾಗುತ್ತಿದ್ದಾರೆ. ಭಾನುವಾರ ಡಿಕೆಶಿ ಅವರನ್ನು ಭೇಟಿ ಮಾಡಿದ್ರೆ, ಇಂದು [ಸೋಮವಾರ] ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೇಟ್ ನೀಡುವಂತೆ ಮನವಿ ಮಾಡಿಕೊಂಡರು.
ಆದ್ರೆ, ಮತ್ತೊಂದೆಡೆ ಗೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿಗೆ ಟಕ್ಕರ್ ನೀಡಲು ಸಹೋದರ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಒಂದು ವೇಳೆ ಕಾಂಗ್ರೆಸ್ ಕೈತಪ್ಪಿದ್ರೆ ಅಶೋಕ ಪೂಜಾರಿ ಪಕ್ಷೇತರರಾಗಿ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ.
ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬುಧವಾರ ಅನರ್ಹರ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬೀಳಲಿದೆ. ತೀರ್ಪು ಅನರ್ಹರ ಪರವಾಗಿ ಬಂದರೆ ರಮೇಶ್ ಜಾರಕಿಹೊಳಿ ಚುನಾವಣೆಯಲ್ಲಿ ಸ್ಫರ್ಧಿಸುವ ಸಾಧ್ಯತೆಗಳಿದೆ. ಇಲ್ಲವಾದಲ್ಲಿ ಪುತ್ರ ಅಮರನಾಥ ಜಾರಕಿಹೊಳಿ ಕಣಕ್ಕೆ ಇಳಿಸಲು ತಯಾರಿ ನಡೆದಿದೆ ಎಂದು ತಿಳಿದುಬಂದಿದೆ.
ಉಪ ಚುನಾವಣೆ ವೇಳಾಪಟ್ಟಿ
* ನವೆಂಬರ್ 11 : ನಾಮಪತ್ರ ಸಲ್ಲಿಕೆ ಆರಂಭ
* ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನ,
* ನವೆಂಬರ್ 19 ನಾಮಪತ್ರಗಳ ಪರಿಶೀಲನೆ
* ನವೆಂಬರ್ 21 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
* ಡಿಸೆಂಬರ್ 5 ಮತದಾನ (7 ಗಂಟೆಯಿಂದ 6)
* ಡಿಸೆಂಬರ್ 9 ಮತ ಎಣಿಕೆ.
ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳು
1) ಚಿಕ್ಕಬಳ್ಳಾಪುರ 2) ಮಹಾಲಕ್ಷ್ಮಿ ಲೇಔಟ್ 3) ಹೊಸಕೋಟೆ 4) ಹುಣಸೂರು 5) ಗೋಕಾಕ್, 6) ಯಶವಂತಪುರ 7) ಅಥಣಿ 8) ಕಾಗವಾಡ 9)ಶಿವಾಜಿನಗರ 10) ಕೆ.ಆರ್.ಪೇಟೆ 11) ಕೆ.ಆರ್.ಪುರಂ 12) ಹಿರೇಕೆರೂರು 13) ರಾಣೆಬೆನ್ನೂರು 14) ವಿಜಯನಗರ 15) ಯಲ್ಲಾಪುರ.