ಮಸ್ಕಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಿಂದ ಹಿನ್ನಡೆ| ಕಳೆದ ಮೂರು ಸಲ ಶಾಸಕರಾಗಿ ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ದೆ, ಮತದಾರರು ತಮ್ಮ ವಿರುದ್ಧ ಮತ ಹಾಕಿರುವುದು ಆಡಳಿತ ವಿರೋಧಿ ಅಲೆಯಿಂದ ಸ್ಪಷ್ಟ| ಬಹುತೇಕ ಕಡೆ ನಿರೀಕ್ಷೆಯಂತೆ ಮತ ಬಂದಿಲ್ಲ| ನಮ್ಮ ಪಕ್ಷದವರೇ ನಮ್ಮ ವಿರುದ್ಧ ಕೆಲಸ ಮಾಡಿರುವುದು ಸ್ಪಷ್ಟ: ಪಾಟೀಲ್‌| 

ರಾಯಚೂರು(ಮೇ.02): ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ತುರ್ವಿಹಾಳ್‌ ಅವರು ಭಾರಿ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಮತ ಎಣಿಕೆ ಕೇಂದ್ರದಿಂದ ಹೊರಬಂದಿದ್ದಾರೆ. 

Add Asianetnews Kannada as a Preferred SourcegooglePreferred

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯಿಂದ ಹಿನ್ನಡೆಯಾಗಿದೆ. ಕಳೆದ ಮೂರು ಸಲ ಶಾಸಕರಾಗಿ ಕ್ಷೇತ್ರವನ್ನ ಅಭಿವೃದ್ಧಿ ಮಾಡಿದ್ದೆ, ಮತದಾರರು ತಮ್ಮ ವಿರುದ್ಧ ಮತ ಹಾಕಿರುವುದು ಆಡಳಿತ ವಿರೋಧಿ ಅಲೆಯಿಂದ ಸ್ಪಷ್ಟವಾಗಿದೆ. ಬಹುತೇಕ ಕಡೆ ನಿರೀಕ್ಷೆಯಂತೆ ಮತ ಬಂದಿಲ್ಲ. ಈ ಮೂಲಕ ನಮ್ಮ ಪಕ್ಷದವರೇ ನಮ್ಮ ವಿರುದ್ಧ ಕೆಲಸ ಮಾಡಿರುವುದು ಸ್ಪಷ್ಟವಾಗಿ ತಿಳಿದು ಬಂದಿದೆ. ಕಾಂಗ್ರೆಸ್‌ಗೆ ಮುಖಂಡರಿಲ್ಲದ ಕಡೆಯೂ ಕಾಂಗ್ರೆಸ್‌ಗೆ ಹೆಚ್ಚಿನ‌ ಮತಗಳು ಬಂದಿವೆ ಎಂದು ಹೇಳಿದ್ದಾರೆ. 

ಬದಲಾಯ್ತು ಟ್ರೆಂಡ್‌, ಉಪ ಚುನಾವಣೆಯ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ!

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಮಸ್ಕಿ ಹೊಣೆಗಾರಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಗೌಡ ಪಾಟೀಲ್ ಅವರು, ನನ್ನ ಸೋಲಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಮಸ್ಕಿ ಮತದಾರರೇ ತಮ್ಮ ಆಡಳಿತಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು ಸ್ಪಷ್ಟವಾಗಿದೆ. ಮಸ್ಕಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೆ, ಆದರೂ ಮತದಾರರು ತಮ್ಮ ಕೈಹಿಡಿಯಲಿಲ್ಲ. ಮುಂದಿನ ಎರಡು ವರ್ಷ ಮಸ್ಕಿಯ ಮತದಾರರ ಪರ ಕೆಲಸ ಮಾಡುವೆ. ಸರ್ಕಾರ ಬಿಜೆಪಿಯದ್ದೇ ಇರುವುದರಿಂದ ಮತದಾರರ ಬೇಕು ಬೇಡಗಳ ಅರಿತು ಕಾರ್ಯನಿರ್ವಹಿಸುತ್ತೇನೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಕ್ಕೆ ಹಿನ್ನಡೆಯಾಗಿದೆ ಎಂದು ಅನಿಸಿಲ್ಲ. ಮತದಾರರು ತಮ್ಮ ಮೂರು ಅವಧಿಗೆ ಬೆಂಬಲಿಸಿದ್ದು ಬದಲಾವಣೆ ಬಯಸಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ತಿಳಿಸಿದ್ದಾರೆ.

"