ಆನೆ ದಾಳಿ ಮುಂದಿಟ್ಟುಕೊಂಡು ಆನೆ ದಾಳಿಯ ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಿರಾಜಪೇಟೆ ಶಾಸಕ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಕೊಡಗು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.21): ಕೊಡಗು ಜಿಲ್ಲೆಯಲ್ಲಿ ಆನೆ ಮಾನ ಸಂಘರ್ಷ ಮಿತಿ ಮೀರಿದ್ದು, ಆನೆ ದಾಳಿಯಿಂದ ಸಾವನ್ನಪ್ಪುತ್ತಿರುವುದು ಬಹಳ ನೋವು ತಂದಿದೆ. ಆದರೆ ಆನೆ ದಾಳಿ ಮುಂದಿಟ್ಟುಕೊಂಡು ಆನೆ ದಾಳಿಯ ಸಾವಿನಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ವಿರಾಜಪೇಟೆ ಶಾಸಕ, ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕೊಡಗು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮಾಧ್ಯಮಗಳಿಗೆ ಪ್ರಕಟಿಸಿರುವ ಮಾಹಿತಿ ಸುಳ್ಳು.

ಸಾವಿನಲ್ಲೂ ಪ್ರತಿಭಟನೆ ಮಾಡಿ ರಾಜಕೀಯ ಮಾಡುವುದು ಬಿಜೆಪಿಗೆ ಹೊಸದೇನಲ್ಲ, ಹಿಂದಿನಿಂದಲೂ ಇದನ್ನೇ ಮಾಡಿದೆ. ಬಿಜೆಪಿ ಬಹಳ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೋವಿನಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಬೇಕಾಗಿತ್ತು. ಆನೆ ದಾಳಿ ಬಳಿಕ ಕಲಾಪದಲ್ಲೂ ಕೂಡ ನಾನು ಸ್ಪೀಕರ್ ಗಮನಕ್ಕೆ ತಂದಿದ್ದೇನೆ. ನಾವು ಕೂಡ ಆನೆ ಮಾನವ ಸಂಘರ್ಷ ತಡೆಗೆ ಕ್ರಮಕ್ಕೆ ಮುಂದಾಗಿದ್ದೇವೆ. ಕಳೆದ ಇಪ್ಪತ್ತೈದು ವರ್ಷದಿಂದ ಬಿಜೆಪಿ ಶಾಸಕರು ಇಲ್ಲಿ ಅಧಿಕಾರದಲ್ಲಿದ್ದರು.

ಇಪ್ಪತ್ತೈದು ವರ್ಷದಲ್ಲಿ ಆನೆ ದಾಳಿಯಿಂದ ಯಾರು ಸತ್ತೆ ಇಲ್ವಾ? ಎಂದ ಅವರು ವಾರ್ಷಿಕವಾರು ಅಂಕಿ ಅಂಶಗಳನ್ನು ತೆರೆದಿಟ್ಟರು. 2019- 20 ರಲ್ಲಿ 6 ಜನ, 2020-21 13 ಜನ, 2021-22 ರಲ್ಲಿ 15 ಜನ, 2023-2024ರಲ್ಲಿ 10 ಜನ, 2024-25 ರಲ್ಲಿ 8 ಜನ ಸಾವಿಗಿಡಾಗಿದ್ರೆ 2025-26 ರಲ್ಲಿ ಇಲ್ಲಿಯವರೆಗೆ 12 ಮಂದಿ ಸಾವಿಗೀಡಾಗಿದ್ದಾರೆ. ಅಷ್ಟೊಂದು ಜನರು ಆನೆ ದಾಳಿಯಿಂದ ಸತ್ತಾಗ ಯಾರು ಸಚಿವರು ಇದ್ರು. ಅವರನ್ನ ಎಲ್ಲಿಗೆ ಕಳುಹಿಸ ಬೇಕೆಂದು ಪೊನ್ನಣ್ಣ ಪ್ರಶ್ನಿಸಿದರು. ಹಿಂದೆ ಬಿಜೆಪಿ ಶಾಸಕರು ಇದ್ದ ಸಮಯದಲ್ಲೇ ಅತಿ ಹೆಚ್ಚು ಆನೆ ದಾಳಿ ಆಗಿರೋದು.

ಪ್ರತಿ ವರ್ಷ ಆನೆ ದಾಳಿಯಾದಾಗ ಹಿಂದೆ ಇದ್ದ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಬಿಜೆಪಿ ನಾಯಕರಿಗೆ ಶಾಸಕ ಪೊನ್ನಣ್ಣ ನೇರ ಪ್ರಶ್ನೆ ಮಾಡಿದರು. ಪ್ರತಿಭಟನೆ ಹೋರಾಟದಿಂದ ಓಟು ಹೆಚ್ಚಾಗಲು ಸಾಧ್ಯವಿಲ್ಲ. ಎಲ್ಲಿ ಸಾವಾಗುತ್ತೆ ಅನ್ನೋದನ್ನ ಕಾಯುವ ಸ್ಥಿತಿ ಸದ್ಯ ಬಿಜೆಪಿ ಬಂದಿದೆ ಎಂದು ಟೀಕಿಸಿದರು. 15 ಲಕ್ಷ ದಿಂದ 20 ಲಕ್ಷಕ್ಕೆ ಪರಿಹಾರ ಏರಿಸಿರೋದು ನಮ್ಮ ಸರ್ಕಾರ. ಅರಣ್ಯ ವಿಚಾರದಲ್ಲಿ ರಾಜ್ಯದ ಜೊತೆಗೆ ಕೇಂದ್ರದ ಮೇಲು ಹೆಚ್ಚು ಜವಾಬ್ದಾರಿ ಇದೆ. ಪ್ರಾಜೆಕ್ಟ್ ಎಲಿಫೆಂಟ್, ಪ್ರಾಜೆಕ್ಟ್ ಟೈಗರ್ ಸ್ಕೀಮ್ ಕೂಡ ಇದೆ.

ಸಚಿವರಿಗೆ ಏನು ಹೇಳ್ತಿರಾ?

12 ವರ್ಷದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಿದೆ. ಬಹುಪಾಲು ಪರಿಹಾರದ ಹಣವನ್ನ ಕೇರಳಕ್ಕೆ ಕಳುಹಿಸಿದ್ದಾರೆ. ರಾಜ್ಯಕ್ಕೆ ಒಂದು ನಯಾ ಪೈಸೆಯನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. ಇದಕ್ಕೆ ನಿಮ್ಮ ಕೇಂದ್ರ ಸರ್ಕಾರ, ಸಚಿವರಿಗೆ ಏನು ಹೇಳ್ತಿರಾ? ಎಂದು ಬಿಜೆಪಿ ನಾಯಕರನ್ನ ಶಾಸಕ ಪೊನ್ನಣ್ಣ ಪಶ್ನಿಸಿದ್ದಾರೆ. ಕೇಂದ್ರದಲ್ಲಿ ಮ್ಯಾನ್ ಅನಿಮಲ್ ಕಾನ್ ಫ್ಲಿಕ್ಟ್ ಕಾಯ್ದೆಯಲ್ಲಿ 290 ಕೋಟಿ ಅನುದಾನ ಇದೆ, ಇದರಲ್ಲಿ ಕೇಂದ್ರದ ಅನುದಾನ ಕರ್ನಾಟಕ ರಾಜ್ಯಕ್ಕೆ ಬರಲಿಲ್ಲ ಅಂತ ಪೊನ್ನಣ್ಣ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ.

ಬೇರೆ ರಾಜ್ಯಕ್ಕೆ ಕೊಡಲು ಹಣ ಇದೆ ನಮ್ಮ ರಾಜ್ಯಕ್ಕೆ ಕೊಡಲು ಹಣ ಇಲ್ಲವೇ. ಜನಪರ ಕೆಲಸ ಮಾಡದೆ ರಾಜಕೀಯ ಮಾಡ್ತಾರೆಂದ ಪೊನ್ನಣ್ಣ ಆನೆ ಮಾನವ ಸಂಘರ್ಷಕ್ಕೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ. ಕೇಂದ್ರದಿಂದ ಹಣ ತಂದು ವನ್ಯಜೀವಿ ಸಮಸ್ಯೆ ಬಗೆಹರಿಸಿ. ರಾಜ್ಯದ ಹೊಣೆಗಾರಿಕೆ ಜೊತೆಗೆ ಕೇಂದ್ರದ ಹೊಣೆಗಾರಿಕೆ ಬಹಳ ಇದೆ. ಕೇಂದ್ರದ ನಾಯಕರು ಇದರ ಬಗ್ಗೆ ಸಂಸತ್ ನಲ್ಲಿ ಯಾವುದೇ ಪ್ರಶ್ನೆ ಮಾಡಿಲ್ಲ ಎಂದು ಮಡಿಕೇರಿಯಲ್ಲಿ ನಡೆದ ಸುದ್ದಿ ಗೋಷ್ಟಿಯಲ್ಲಿ ಶಾಸಕ ಪೊನ್ನಣ್ಣ ಆಗ್ರಹಿಸಿದ್ದಾರೆ.