Asianet Suvarna News Asianet Suvarna News

ಕೋಮುವಾದಿ ಬಿಜೆಪಿ ದೂರವಿಡಲು 8 ಪಕ್ಷದೊಂದಿಗೆ ಮೈತ್ರಿಕೂಟ: ಬಿ.ಟಿ. ಲಲಿತಾ ನಾಯಕ್‌

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 8 ಪಕ್ಷಗಳ ಸಹಯೋಗದೊಂದಿಗೆ ಮೈತ್ರಿಕೂಟ ರಚಿಸಿಕೊಂಡು ಸ್ಪರ್ಧಿಸಲು ನಿರ್ಧರಿಸಲಾಗಿದ್ದು, ಈಗಾಗಲೇ 3 ಪಕ್ಷಗಳ ಜತೆ ಮಾತುಕತೆ ನಡೆಯುತ್ತಿದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಗುರಿಯಾಗಿದೆ ಎಂದು ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಬಿ.ಟಿ. ಲಲಿತಾನಾಯಕ್‌ ತಿಳಿಸಿದರು.

An alliance to fend off the communal BJP says bt lalita nayak tumakuru rav
Author
First Published Feb 25, 2023, 11:41 AM IST

ಹಾವೇರಿ (ಫೆ.25) : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 8 ಪಕ್ಷಗಳ ಸಹಯೋಗದೊಂದಿಗೆ ಮೈತ್ರಿಕೂಟ ರಚಿಸಿಕೊಂಡು ಸ್ಪರ್ಧಿಸಲು ನಿರ್ಧರಿಸಲಾಗಿದ್ದು, ಈಗಾಗಲೇ 3 ಪಕ್ಷಗಳ ಜತೆ ಮಾತುಕತೆ ನಡೆಯುತ್ತಿದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದು ನಮ್ಮ ಗುರಿಯಾಗಿದೆ ಎಂದು ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಬಿ.ಟಿ. ಲಲಿತಾನಾಯಕ್‌(BT Lalita Nayak) ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ವಿಧಾನಸಭಾ ಚುನಾವಣೆ(Assembly elecction)ಯಲ್ಲಿ ಸ್ಪರ್ಧಿಸಲು ಜನತಾ ಪಕ್ಷದಿಂದ 25 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಒಂದು ವಾರದೊಳಗೆ ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ನನ್ನ ಸ್ಪರ್ಧೆ ತೀರ್ಮಾನಿಸಲು ಯಡಿಯೂರಪ್ಪ ಯಾರು?: ಸಿದ್ದರಾಮಯ್ಯ

ಜಿಲ್ಲೆಯಲ್ಲಿ ವರದಾ ಮತ್ತು ತುಂಗಭದ್ರಾ ನದಿಗಳು ಹರಿದರೂ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಕೃಷಿ ಚಟುವಟಿಕೆಗೆ ಉತ್ತಮ ನೀರಾವರಿ ವ್ಯವಸ್ಥೆ ಇಲ್ಲ. ಇದೇ ಜಿಲ್ಲೆಯವರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಗಮನ ನೀಡಿಲ್ಲ. ನಾವು ನೀರಾವರಿ ಸೌಲಭ್ಯ ಕಲ್ಪಿಸಿ ರೈತರನ್ನು ಸಬಲೀಕರಣ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಇದಾವುದನ್ನೂ ಈಡೇರಿಸಿಲ್ಲ. ಅದಕ್ಕಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜನರು ಮುಂದಾಗಬೇಕು ಎಂದು ಹೇಳಿದರು.

ಬೆಲೆ ಏರಿಕೆಯೆ ಭ್ರಷ್ಟಾಚಾರಕ್ಕೆ ಮುಖ್ಯ ಕಾರಣವಾಗಿದೆ. ಬಿಜೆಪಿ ಸರ್ಕಾರ ಸಾಲ ಮಾಡಿ ದೇಶವನ್ನು ಮುಳುಗಿಸುತ್ತಿದೆ. ಉಚಿತ ಘೋಷಣೆಗಳ ಆಮಿಷವೊಡ್ಡಿ, ಜನರನ್ನು ಸದಾ ಬೇಡುವ ಸ್ಥಿತಿಯಲ್ಲಿ ಇಡುತ್ತಿದ್ದಾರೆ. ಅದರ ಬದಲು ದುಡಿಯುವ ಕೈಗಳಿಗೆ ಉದ್ಯೋಗ ನೀಡಿ, ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ತುರ್ತು ಇದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಕೈಗಾರಿಕಾ ವಲಯ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಹೇಳಿದರು. ಸಂದರ್ಭ ಬಂದರೆ ಕಾಂಗ್ರೆಸ್‌(Congress) ಜತೆ ಕೈ ಜೋಡಿಸುತ್ತೇವೆ. ಸದ್ಯಕ್ಕೆ ಅದರ ಬಗ್ಗೆ ಯೋಚಿಸಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಅವರು ಉತ್ತರಿಸಿದರು.

ಮಕ್ಕಳು ಮತ್ತು ಮಹಿಳೆಯರ ಅಕ್ರಮ ಸಾಗಾಣಿಕೆ ಕೃತ್ಯಕ್ಕೆ ಕಡಿವಾಣ ಬಿದ್ದಿಲ್ಲ. ಬಿಜೆಪಿ(BJP)ಯವರು ಗೋ ಹತ್ಯೆ ನಿಷೇಧ ಮಸೂದೆ ಜಾರಿಗೆ ತಂದಿದ್ದಾರೆ. ಆದರೆ, ಸರ್ಕಾರವೇ ದೊಡ್ಡ ಮಟ್ಟದಲ್ಲಿ ಗೋ ಮಾಂಸ ಮಾರಾಟ ಮಾಡುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸೌಲಭ್ಯಗಳನ್ನು ಕೊಡುವಾಗ ಹೆಣ್ಣು ಮತ್ತು ಗಂಡು ಎಂದು ಭೇದ ಭಾವ ಮಾಡುವುದು ಸರಿಯಲ್ಲ ಎಂದು ಲಲಿತಾ ನಾಯಕ ಹೇಳಿದರು.

ರಾಜ್ಯ ಕಾರ್ಯದರ್ಶಿ ಪ್ರದೀಪ ಹೆಗಡೆ ಮಾತನಾಡಿ, ಬ್ಯಾಂಕ್‌ನಲ್ಲಿ ಇಟ್ಟಬಡವರ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಅಧಿಕ ಶುಲ್ಕ ಹಾಕಿ ಜನರಿಗೆ ಬರೆ ಎಳೆಯಲಾಗುತ್ತಿದೆ. ವಹಿವಾಟುಗಳ ಮೇಲೆ ನಿರ್ಬಂಧ ಹಾಕಲಾಗುತ್ತಿದೆ. ಜಿಎಸ್‌ಟಿ ಬಂದ ಮೇಲೆ ಎಷ್ಟೋ ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದವು ಎಂದು ಆರೋಪಿಸಿದರು.

ಸಿದ್ದರಾಮಯ್ಯ ಜಾತಿ ರಾಜಕಾರಣಿ: ಕೇಂದ್ರ ಸಚಿವೆ ಕರಂದ್ಲಾಜೆ ಟೀಕೆ

ಬಿಹಾರದ ರಾಜ್ಯ ಘಟಕದ ಅಧ್ಯಕ್ಷ ವಿನೋದ್‌ ಕುಮಾರ್‌ ಸಿನ್ಹ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ. ಗುಡಗೇರಿ, ರಾಜ್ಯ ಮುಖಂಡ ಶಿವಕುಮಾರ ತಳವಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೊ. ಅಂಜನಮೂರ್ತಿ, ಈರಣ್ಣ ಬಾಳಿಕಾಯಿ, ಮಹಾದೇವ ಬಾಬು, ನಾಗಪ್ಪ ಹರಿಜನ, ಸೋಮಣ್ಣ ಪಾಟೀಲ ಇದ್ದರು.

Follow Us:
Download App:
  • android
  • ios