ನಮಗೆ ಕಾಂಗ್ರೆಸ್‌ ಏನು ಸಹಾಯ ಮಾಡಿದೆ, ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದವರಿಗೆ ನಾವೇನು ಸಹಾಯ ಮಾಡಿದ್ದೇವೆ ಎಂಬ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡಿ ಎಂದು ಸ್ಪೀಕರ್‌ ಬಳಿ ಕೋರಿದ ಎಚ್‌.ಡಿ.ಕುಮಾರಸ್ವಾಮಿ. 

ವಿಧಾನಸಭೆ(ಜು.07): ಎಚ್‌.ಡಿ.ದೇವೇಗೌಡ ಯಾರ ಬೆಂಬಲದಿಂದ ಪ್ರಧಾನಿಯಾದರು? ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮೊದಲ ಬಾರಿ ಮುಖ್ಯಮಂತ್ರಿ ಮಾಡಿದ್ದು ಯಾರು ಎಂಬ ವಿಚಾರ ಸದನದಲ್ಲಿ ಚರ್ಚೆ ನಡೆದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ಸಚಿವ ಚೆಲುವರಾಯಸ್ವಾಮಿ ಮಾತನಾಡುತ್ತಾ, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಸಾಕಷ್ಟು ಕಷ್ಟಪಟ್ಟೆವು. ಸಿದ್ದರಾಮಯ್ಯ ಅವರಿಗೂ ಮೋಸ ಮಾಡಿದೆವು ಎಂಬರ್ಥದಲ್ಲಿ ಮಾತನಾಡಿದರು.

Add Asianetnews Kannada as a Preferred SourcegooglePreferred

ಅದಕ್ಕೆ ಎಚ್‌.ಡಿ.ಕುಮಾರಸ್ವಾಮಿ, ನಾನು ಇವರನ್ನೆಲ್ಲ ಸಚಿವರನ್ನಾಗಿ ಮಾಡಲು ಕಷ್ಟಪಟ್ಟಿದ್ದೇನೆ. ಹಾಗೆಯೇ ಎಚ್‌.ಡಿ.ದೇವೇಗೌಡ ಅವರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್‌ ಎಂದು ಹೇಳುತ್ತಾರೆ. ಆದರೆ, ಅವರನ್ನು ಕೆಳಗಿಸಿದ್ದೇ ಕಾಂಗ್ರೆಸ್‌ ಪಕ್ಷ. ದೇವೇಗೌಡ ಅವರು ಪ್ರಧಾನಿ ಆಗಲು ವಿವಿಧ ಪಕ್ಷಗಳ 190 ಸಂಸದರು ಕಾರಣ. ಆದರೆ, ಕಾಂಗ್ರೆಸ್‌ ಪಕ್ಷ ಅವರನ್ನು ಅಧಿಕಾರದಿಂದ ಕೆಳಗಿಳಿಸಿದೆ. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ದೇವೇಗೌಡರಿಗೆ ಬೆಂಬಲ ನೀಡುವುದಾಗಿ ತಿಳಿಸಿದರೂ, ಅದನ್ನೊಪ್ಪದೆ ರಾಜೀನಾಮೆ ನೀಡಿದರು ಎಂದು ಹೇಳಿದರು.

Party Rounds: ಸಿದ್ದು ಬೆಂಕಿ, ಎಚ್‌ಡಿಕೆ ಬಿರುಗಾಳಿ, ಸದನದಲ್ಲಿ ಬೈದಾಡಿಕೊಂಡ ಸಿಎಂ-ಮಾಜಿ ಸಿಎಂ!

ಅದರಿಂದ ಸಿಟ್ಟಾದ ಕಾಂಗ್ರೆಸ್‌ನ ನರೇಂದ್ರ ಸ್ವಾಮಿ, ಕಾಂಗ್ರೆಸ್‌ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ಮಾತನಾಡಿ. ಕಾಂಗ್ರೆಸ್‌ ಪಕ್ಷದ ಬೆಂಬಲದಿಂದಲೇ ನೀವು ಮುಖ್ಯಮಂತ್ರಿಯಾಗಿದ್ದು, ದೇವೇಗೌಡ ಅವರು ಪ್ರಧಾನಿಯಾಗಿದ್ದು ಎಂದರು.

ಕೊನೆಗೆ ಎಚ್‌.ಡಿ.ಕುಮಾರಸ್ವಾಮಿ, ನಮಗೆ ಕಾಂಗ್ರೆಸ್‌ ಏನು ಸಹಾಯ ಮಾಡಿದೆ, ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದವರಿಗೆ ನಾವೇನು ಸಹಾಯ ಮಾಡಿದ್ದೇವೆ ಎಂಬ ಬಗ್ಗೆ ಚರ್ಚೆಗೆ ಸಮಯ ನಿಗದಿ ಮಾಡಿ ಎಂದು ಸ್ಪೀಕರ್‌ ಬಳಿ ಕೋರಿದರು.

ನಾವು ಆಜನ್ಮ ಶತ್ರುಗಳು!

ಚರ್ಚೆ ವೇಳೆ ಎಚ್‌.ಡಿ.ಕುಮಾರಸ್ವಾಮಿ ಅವರು ನಮಗೆ ಶತ್ರುಗಳು ಎಂದ ಸಚಿವ ಚೆಲುವರಾಯಸ್ವಾಮಿ, ನಾವು ಕುಮಾರಸ್ವಾಮಿ ಅವರನ್ನು ಈಗಲೂ ಸ್ನೇಹಿತರು ಎಂದೇ ತಿಳಿದಿದ್ದೇವೆ. ಆದರೆ, ಅವರು ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ಆಜನ್ಮ ಶತ್ರುಗಳು ಎಂದು ಕರೆದಿದ್ದಾರೆ. ಹೀಗಾಗಿ ನಾವು ಕುಮಾರಸ್ವಾಮಿ ಅವರನ್ನು ಶತ್ರು ಎಂದೇ ಕರೆಯ್ತುತೇವೆ ಎಂದರು.