* ಬೆಂಗಳೂರು ಬುಲ್ಸ್‌ ತಂಡಕ್ಕಿಂದು ಜೈಪುರ ಪಿಂಕ್ ಪ್ಯಾಥರ್ಸ್‌ ಸವಾಲು*ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾದ ಪವನ್‌ ಕುಮಾರ್ ಶೆರಾವತ್ ಪಡೆ* ಪ್ಲೇ ಆಫ್‌ ಕನಸು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಬುಲ್ಸ್ ಪಡೆಗೆ ಗೆಲುವು ಅನಿವಾರ್ಯ

ಬೆಂಗಳೂರು(ಫೆ.13): ಪ್ರೊ ಕಬಡ್ಡಿ 8ನೇ ಆವೃತ್ತಿಯಲ್ಲಿ (Pro Kabaddi League) ಪ್ಲೇ-ಆಫ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಬೆಂಗಳೂರು ಬುಲ್ಸ್‌ (Bengaluru Bulls) ಬಾಕಿ ಇರುವ ಮೂರೂ ಪಂದ್ಯಗಳಲ್ಲಿ ಗೆಲ್ಲಬೇಕಿದೆ. ಭಾನುವಾರ ಜೈಪುರ ಪಿಂಕ್‌ ಪ್ಯಾಂಥ​ರ್ಸ್‌ ತಂಡವನ್ನು ಎದುರಿಸಲಿರುವ ಬುಲ್ಸ್‌ಗೆ ಮುಂದಿನ ಪಂದ್ಯಗಳಲ್ಲಿ ಪಾಟ್ನಾ ಪೈರೇಟ್ಸ್‌(ಫೆ.15) ಹಾಗೂ ಹರ್ಯಾಣ ಸ್ಟೀಲ​ರ್ಸ್‌(ಫೆ.17) ಎದುರಾಗಲಿದೆ. 

Add Asianetnews Kannada as a Preferred SourcegooglePreferred

ಈಗಾಗಲೇ 19 ಪಂದ್ಯಗಳನ್ನು ಆಡಿರುವ ಬುಲ್ಸ್‌ 9 ಗೆಲುವುಗಳೊಂದಿಗೆ ಒಟ್ಟು 55 ಅಂಕ ಕಲೆಹಾಕಿದೆ. ಇತರೆ ತಂಡಗಳು ಬುಲ್ಸ್‌ಗಿಂತ ಕಡಿಮೆ ಪಂದ್ಯಗಳನ್ನಾಡಿದ್ದು, ಅಂಕಗಳ ಅಂತರವೂ ಹೆಚ್ಚಿಲ್ಲ. ಹೀಗಾಗಿ, ಕೊನೆ ಮೂರೂ ಪಂದ್ಯಗಳನ್ನು ಬುಲ್ಸ್‌ ಗೆಲ್ಲದಿದ್ದರೆ ಲೀಗ್‌ ಹಂತದಲ್ಲೇ ಹೊರಬೀಳುವ ಆತಂಕ ಎದುರಾಗಿದೆ.

ಇಂದಿನ ಪಂದ್ಯಗಳು: 
ಹರ್ಯಾಣ-ಯು ಮುಂಬಾ, ಸಂಜೆ 7.30ಕ್ಕೆ
ಬುಲ್ಸ್‌-ಜೈಪುರ, ರಾತ್ರಿ 8.30ಕ್ಕೆ
ಗುಜರಾತ್‌- ಯೋಧಾ, ರಾತ್ರಿ 9.30ಕ್ಕೆ

ಚೆಸ್‌ ತಾರೆ ಹರಿಕಾಗೆ ಲೈಂಗಿಕ ಕಿರುಕುಳದ ಪತ್ರ!

ನವದೆಹಲಿ: ಕಳೆದ ವರ್ಷ ನವೆಂಬರ್‌ನಲ್ಲಿ ಲಾತ್ವಿಯಾದಲ್ಲಿ ನಡೆದಿದ್ದ ಗ್ರ್ಯಾಂಡ್‌ ಸ್ವಿಸ್‌ ಚೆಸ್‌ ಟೂರ್ನಿಯಲ್ಲಿ ಭಾಗವಹಿಸಿದ್ದ ವೇಳೆ ಭಾರತದ ತಾರಾ ಚೆಸ್‌ (Chess) ಪಟು ಹರಿಕಾ ದ್ರೋಣವಲ್ಲಿ ಸೇರಿದಂತೆ ಬೇರೆ ಬೇರೆ ದೇಶಗಳ ಒಟ್ಟು 15 ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳದ ಪತ್ರ ಕಳುಹಿಸಲಾಗಿತ್ತು ಎನ್ನುವ ವಿಷಯ ಬಹಿರಂಗಗೊಂಡಿದೆ.

ರಷ್ಯಾದ ಮಾಧ್ಯಮಗಳ ವರದಿ ಪ್ರಕಾರ, ಟೂರ್ನಿಯಲ್ಲಿ ಪಾಲ್ಗೊಂಡಿದ್ದ 15 ಆಟಗಾರ್ತಿಯರನ್ನು ಗುರಿಯಾಗಿಸಿ ಈ ಪತ್ರಗಳನ್ನು ಬರೆಯಲಾಗಿತ್ತು ಎಂದು ಗೊತ್ತಾಗಿದೆ. ಆದರೆ ಅಂತಾರಾಷ್ಟ್ರೀಯ ಚೆಸ್‌ ಫೆಡರೇಶನ್‌ ಈ ಬಗ್ಗೆ ಟೂರ್ನಿಯ ಕೊನೆ ದಿನದವರೆಗೂ ಯಾರಿಗೂ ಮಾಹಿತಿ ನೀಡಿರಲಿಲ್ಲ ಹಾಗೂ ಬಳಿಕ ಪೊಲೀಸರಿಗೆ ದೂರು ನೀಡಿತ್ತು ಎಂದು ತಿಳಿದುಬಂದಿದೆ. 

Tokyo 2020: ಒಲಿಂಪಿಕ್ಸ್‌ನಲ್ಲಿ ಟಿಟಿ ಕೋಚ್ ಫಿಕ್ಸಿಂಗ್ ನಿಜ: ಡೆಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು

‘ನನ್ನ ಹೆಸರಲ್ಲಿ ಪತ್ರ ಕಳುಹಿಸಿದ್ದ ಬಗ್ಗೆ ನನಗೆ ತಡವಾಗಿ ಗೊತ್ತಾಯಿತು. ಆಯೋಜಕರು ಇದನ್ನು ಸಮರ್ಥವಾಗಿ ನಿಭಾಯಿಸಿದರು. ನಮಗೆ ಯಾವುದೇ ಸಮಸ್ಯೆಯಾಗಿಲ್ಲ’ ಎಂದು ಭಾರತದ ಗ್ರ್ಯಾಂಡ್‌ಮಾಸ್ಟರ್‌, ವಿಶ್ವ ನಂ.11 ಹರಿಕಾ ತಿಳಿಸಿದ್ದಾರೆ.

ಬೆಂಗಳೂರು ಓಪನ್‌: ಸಾಕೇತ್‌-ರಾಮ್‌ಗೆ ಪ್ರಶಸ್ತಿ

ಬೆಂಗಳೂರು: ಭಾರತದ ಸಾಕೇತ್‌ ಮೈನೇನಿ ಹಾಗೂ ರಾಮ್‌ಕುಮಾರ್‌ ರಾಮನಾಥನ್‌ ಬೆಂಗಳೂರು ಓಪನ್‌ (Bengaluru Open) ಎಟಿಪಿ ಟೆನಿಸ್‌ ಟೂರ್ನಿಯ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಭಾರತೀಯ ಜೋಡಿಯು ಫ್ರಾನ್ಸ್‌ನ ಹ್ಯುಗೊ ಗ್ರೀನಿಯರ್‌ ಹಾಗೂ ಅಲೆಕ್ಸಾಂಡರ್‌ ಮುಲ್ಲರ್‌ ವಿರುದ್ಧ 6-3, 6-2 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ದಾಖಲಿಸಿತು.

ಚಾಲೆಂಜರ್‌ ಹಂತದಲ್ಲಿ ಇದು ಸಾಕೇತ್‌ ಗೆದ್ದ 9ನೇ ಡಬಲ್ಸ್‌ ಪ್ರಶಸ್ತಿಯಾಗಿದ್ದು, ರಾಮ್‌ಕುಮಾರ್‌ಗೆ 3ನೇ ಪ್ರಶಸ್ತಿ ಎನಿಸಿದೆ. ಇನ್ನು ಸಿಂಗಲ್ಸ್‌ನಲ್ಲಿ ಕ್ರೊವೇಷಿಯಾದ ಬೊರ್ನಾ ಗೊಜೊ ಹಾಗೂ ತೈಪೆಯ ಚುನ್‌-ಸಿನ್‌ ಸೆಂಗ್‌ ಫೈನಲ್‌ ಪ್ರವೇಶಿಸಿದ್ದು, ಭಾನುವಾರ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ವಾಲಿಬಾಲ್‌: ಬೆಂಗಳೂರು ತಂಡಕ್ಕೆ ಮೊದಲ ಸೋಲು

ಹೈದರಾಬಾದ್‌: ಚೊಚ್ಚಲ ಆವೃತ್ತಿಯ ಪ್ರೈಮ್‌ ವಾಲಿಬಾಲ್‌ ಲೀಗ್‌(ಪಿವಿಎಲ್‌)ನಲ್ಲಿ ಬೆಂಗಳೂರು ಟಾರ್ಪೆಡೊಸ್‌ ಮೊದಲ ಸೋಲು ಅನುಭವಿಸಿದೆ. ಮೊದಲೆರಡು ಪಂದ್ಯಗಳಲ್ಲಿ ರೋಚಕ ಗೆಲುವು ಸಾಧಿಸಿದ್ದ ಬೆಂಗಳೂರು ತಂಡ, ಶನಿವಾರ ಕೋಲ್ಕತಾ ಥಂಡರ್‌ಬೋಲ್ಟ್ಸ್‌ ವಿರುದ್ಧ 13-15, 8-15, 15-9, 12-15, 10-15 ಸೆಟ್‌ಗಳಲ್ಲಿ ಸೋಲುಂಡಿತು. 

ಈ ಸೋಲಿನೊಂದಿಗೆ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಕೋಲ್ಕತಾ ಪರ ಕರ್ನಾಟಕದ ಅಶ್ವಲ್‌ ರೈ 15 ಅಂಕ ಗಳಿಸಿದರು. ಬೆಂಗಳೂರು ಪರ ಪಂಕಜ್‌ ಶರ್ಮಾ 9 ಅಂಕ ಕಲೆಹಾಕಿದರು. ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 14ರಂದು ಕ್ಯಾಲಿಕಟ್‌ ಹೀರೋಸ್‌ ವಿರುದ್ಧ ಆಡಲಿದೆ.