ಸಿಎಂ ಸಿದ್ದುಗೆ ಯದುವೀರ್ ತಿರುಗೇಟು : ರಾಜರ ನಂತರ ಹೆಚ್ಚು ಕೆಲಸ ಮಾಡಿದ್ದು ನಾನು ಎಂದಿದ್ದ ಸಿದ್ದು
‘ಮಹಾರಾಜರ ನಂತರ ಮೈಸೂರಿಗೆ ಅತಿ ಹೆಚ್ಚು ಕಾರ್ಯಕ್ರಮಗಳನ್ನು ನಾನು ನೀಡಿದ್ದೇನೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ನೀಡಿದ್ದಾರೆ. ಅಂದಿನ ಕಾಲಘಟ್ಟವೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ ಎಂದು ಮಾರುತ್ತರ ನೀಡಿದ್ದಾರೆ.
ಮೈಸೂರು: ‘ಮಹಾರಾಜರ ನಂತರ ಮೈಸೂರಿಗೆ ಅತಿ ಹೆಚ್ಚು ಕಾರ್ಯಕ್ರಮಗಳನ್ನು ನಾನು ನೀಡಿದ್ದೇನೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ನೀಡಿದ್ದಾರೆ. ಅಂದಿನ ಕಾಲಘಟ್ಟವೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ ಎಂದು ಮಾರುತ್ತರ ನೀಡಿದ್ದಾರೆ.
ನಗರದ ಖಾಸಗಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಮೈಸೂರು ಅರಸರ ಕೊಡುಗೆ ಏನು ಎಂಬುದು ಜನರಿಗೆ ಗೊತ್ತಿದೆ. ಕೃಷ್ಣರಾಜ ಜಲಾಶಯ ನಿರ್ಮಾಣ ಸೇರಿದಂತೆ ಸಾಕಷ್ಟುಶಾಶ್ವತ ಯೋಜನೆಯನ್ನು ಈ ರಾಜ್ಯಕ್ಕೆ ನೀಡಿದ್ದಾರೆ. ಇದೆಲ್ಲದರ ಪರಿಚಯ ಜನರಿಗಿದೆ. ನಾವು ಮಾಡಿದ ಸಾಧನೆ ಮತ್ತು ಕೆಲಸವನ್ನು ಜನ ಹೇಳಬೇಕು. ಅಂದಿನ ಕಾಲಘಟ್ಟವೇ ಬೇರೆ, ಇಂದಿನ ಪರಿಸ್ಥಿತಿಯೇ ಬೇರೆ ಎಂದು ಅವರು ಪರೋಕ್ಷವಾಗಿ ಟಾಂಗ್ ನೀಡಿದರು.
‘ಸರ್ಕಾರ ರೂಪಿಸಿರುವ ರಾಜ್ಯಧ್ವಜವು ಸುಂದರವಾಗಿದೆ. ವೈಯಕ್ತಿಕವಾಗಿ ನನಗೆ ಇಷ್ಟವಾಗಿದೆ’ ಎಂದ ಅವರು, ‘ಸದ್ಯಕ್ಕೆ ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲಿಯೇ ಖುಷಿ ಪಡುತ್ತಿದ್ದೇನೆ’ ಎಂದು ಅವರು ಹೇಳಿದರು.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ‘ಮೈಸೂರು ಮಹಾರಾಜರ ನಂತರ ಅತಿ ಹೆಚ್ಚು ಕೆಲಸ ಮಾಡಿದವ ನಾನೇ’ ಎಂದು ಹೇಳಿದ್ದರು.