ಸುಪ್ರೀಂ ಆದೇಶಕ್ಕೂ 2 ದಶಕ ಮೊದಲೇ ಶಬರಿಮಲೆಗೆ ಐಎಎಸ್ ಅಧಿಕಾರಿ!
ಮಹಿಳೆಯರು ದೇಗುಲಕ್ಕೆ ಬರುವಂತಿಲ್ಲ ಎಂಬ 800 ವರ್ಷಗಳ ಸಂಪ್ರದಾಯವನ್ನು ಸುಪ್ರೀಂಕೋರ್ಟ್ನ ಆದೇಶಕ್ಕೂ 2 ದಶಕಗಳ ಮೊದಲೇ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮುರಿದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ತಿರುವನಂತಪುರ: ಸುಪ್ರೀಂಕೋರ್ಟ್ ತನ್ನ ಇತ್ತೀಚಿನ ಐತಿಹಾಸಿಕ ತೀರ್ಪಿನಲ್ಲಿ ಎಲ್ಲಾ ವಯೋಮಾನದ ಮಹಿಳೆಯರಿಗೂ ಶಬರಿಮಲೆ ದೇಗುಲದ ಪ್ರವೇಶಕ್ಕೆ ಅನುಮತಿ ಮಾಡಿಕೊಟ್ಟಿತ್ತು. ಅಚ್ಚರಿ ವಿಷಯವೆಂದರೆ 10-50ರ ವಯೋಮಾನದ ಮಹಿಳೆಯರು ದೇಗುಲಕ್ಕೆ ಬರುವಂತಿಲ್ಲ ಎಂಬ 800 ವರ್ಷಗಳ ಸಂಪ್ರದಾಯವನ್ನು ಸುಪ್ರೀಂಕೋರ್ಟ್ನ ಆದೇಶಕ್ಕೂ 2 ದಶಕಗಳ ಮೊದಲೇ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಮುರಿದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
1994-95ನೇ ಇಸವಿಯಲ್ಲಿ ಪಟ್ಟಣಂತಿಟ್ಟಜಿಲ್ಲಾಧಿಕಾರಿಯಾಗಿದ್ದ ಕೆ.ಬಿ.ವತ್ಸಲಾ ಕುಮಾರಿ ಅವರಿಗೆ, ದೇಗುಲಕ್ಕೆ ತೆರಳಿ, ವಾರ್ಷಿಕ ಶಬರಿಮಲೆ ಯಾತ್ರೆಗೆ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿತ್ತು. ಜೊತೆಗೆ ಸಂಪ್ರದಾಯ ಮೀರಿ ಮಹಿಳಾ ಅಧಿಕಾರಿಗೆ ದೇಗುಲಕ್ಕೆ ತೆರಳಲು ಅನುಮತಿ ಕಲ್ಪಿಸಿತ್ತು. ಆದರೆ ಹೈಕೋರ್ಟ್ನ ಆದೇಶ ಪಾಲಿಸಿ ದೇಗುಲಕ್ಕೆ ಹೋದರೆ ಎಚ್ಚರ ಎಂದೆಲ್ಲಾ ಜಿಲ್ಲಾಧಿಕಾರಿಯಾಗಿದ್ದ ವತ್ಸಲಾ ಅವರಿಗೆ ಬೆದರಿಕೆ ಪತ್ರಗಳು ರವಾನೆಯಾಗಿದ್ದವು.
ಆದರೆ ಇದ್ಯಾವುದನ್ನೂ ಲೆಕ್ಕಿಸದ ವತ್ಸಲಾ ದೇಗುಲಕ್ಕೆ ತೆರಳಿ ಕಾರ್ಯಕ್ರಮದ ಮೇಲುಸ್ತುವಾರಿ ವಹಿಸಿಕೊಂಡಿದ್ದರು. ಆದರೆ ಕೋರ್ಟ್ ಸೂಚನೆಯಂತೆ ಅವರು ಅಯ್ಯಪ್ಪ ದೇಗುಲದಲ್ಲಿನ 18 ಪವಿತ್ರ ಮೆಟ್ಟಿಲುಗಳನ್ನು ಹತ್ತಿರಲಿಲ್ಲ. ಈ ಘಟನೆ ನಡೆದಾಗ ವತ್ಸಲಾಗೆ 41 ವರ್ಷ ವಯಸ್ಸಾಗಿತ್ತು.
ಆಗ ನನಗೆ ಮೆಟ್ಟಿಲು ಹತ್ತಲಾಗಿರಲಿಲ್ಲ. ಆದರೆ ನನಗೆ 50 ವರ್ಷ ಆದ ಮೇಲೆ ಭಕ್ತೆ ರೂಪದಲ್ಲಿ ದೇಗುಲಕ್ಕೆ ತೆರಳಿ ನಮಿಸಿ, ಪ್ರಾರ್ಥಿಸಿ ಬಂದಿದ್ದೆ. ಇತ್ತೀಚಿನ ಸುಪ್ರೀಂಕೋರ್ಟ್ ಅತ್ಯಂತ ಸ್ವಾಗತಾರ್ಹ ಎಂದು ವತ್ಸಲಾ ಹೇಳಿದ್ದಾರೆ.