ಕಣಿವೆಗೆ ಬಂದಿಳಿದರು ಎನ್ಎಸ್ಜಿ ಕಮಾಂಡೋಸ್, ಸ್ನೈಪರ್ ಪಡೆ..!
ಕಣಿವೆಗೆ ಕಾಲಿಟ್ಟ ಎನ್ಎಸ್ಜಿ, ಸ್ನೈಪರ್ ಪಡೆ
ಉಗ್ರರ ದಮನಕ್ಕೆ ನಡೆದಿದೆ ಸಕಲ ಸಿದ್ದತೆ
ಅತ್ಯಾಧುನಿಕ ರೆಡಾರ್ ತಂತ್ರಜ್ಞಾನ ಬಳಕೆ
ಉಗ್ರರ ಬೇಟೆಗೆ ಶುರುವಾಯ್ತು ಕ್ಷಣಗಣನೆ
ನವದೆಹಲಿ(ಜೂ.22): ಕಣಿವೆ ರಾಜ್ಯದಲ್ಲಿ ಉಗ್ರರ ಹಾವಳಿ ಮಿತಿ ಮೀರಿರುವಂತೆಯೇ ಇತ್ತ ಕೇಂದ್ರ ಸರ್ಕಾರ ರಾಜ್ಯಕ್ಕೆ ಎನ್ಎಸ್ಜಿ ಮತ್ತು ಸ್ನೈಪರ್ ಪಡೆಗಳನ್ನು ರವಾನೆ ಮಾಡಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಮೇರೆ ಮೀರಿರುವ ಉಗ್ರರನ್ನು ಮಟ್ಟ ಹಾಕಲು ವೇದಿಕೆ ಸಿದ್ಧವಾಗಿದೆ.
ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಎನ್ಎಸ್ಜಿ ಕಮಾಂಡೋ ಪಡೆ, ಸ್ನೈುಪರ್ ಪಡೆಗಳನ್ನು ರವಾನೆ ಮಾಡಿದೆ. ಅತ್ಯಾಧುನಿಕ ರೆಡಾರ್ಗಳನ್ನು ರವಾನೆ ಮಾಡಲಾಗಿದ್ದು, ಉಗ್ರರ ಬೇಟೆಗೆ ಕ್ಷಣಗಣನೆ ಶುರುವಾಗಿದೆ.
ಶ್ರೀನಗರದಲ್ಲಿರುವ ಬಿಎಸ್ಎಫ್ ಕ್ಯಾಂಪ್ ಕಚೇರಿ ಹುಮಾಹಾದಲ್ಲಿ ಎನ್ಎಸ್ಜಿ ಕಮಾಂಡೋ ಪಡೆಗೆ ಬಿರುಸಿನಿಂದ ತರಬೇತಿ ನೀಡಲಾಗುತ್ತಿದೆ. ಕೇಂದ್ರ ಗೃಹ ಖಾತೆ ಮೂಲಗಳ ಪ್ರಕಾರ 2 ವಾರಗಳ ಹಿಂದೆಯೇ ಎನ್ಎಸ್ಜಿಯ ಹೌಸ್ ಇಂಟರ್ವೆನ್ಶನ್ ಟೀಮ್ ಕೂಡ ಕಣಿವೆ ರಾಜ್ಯಕ್ಕೆ ತೆರಳಿದೆ. ಇದರ ಜತೆಗೆ ಶೀಘ್ರದಲ್ಲಿಯೇ ಎನ್ಎಸ್ಜಿಯ 100 ಸದಸ್ಯರು ಕಣಿವೆ ರಾಜ್ಯಕ್ಕೆ ತೆರಳಲಿದ್ದಾರೆ.
ಕೇಂದ್ರ ಸರ್ಕಾರದ ಈ ಕ್ರಮದಿಂದಾಗಿ ವಿವಿಧ ಭದ್ರತಾ ಪಡೆಗಳಲ್ಲಿ ಉಂಟಾಗಬಹುದಾದ ಸಾವು-ನೋವು ತಡೆಯಲು ನೆರವಾಗಲಿದೆ ಎನ್ನಲಾಗುತ್ತಿದೆ. ಎಂಪಿ 5 ಗನ್ಗಳು, ಸ್ನೈಪರ್ ರೈಫಲ್ಗಳು, ವಿಶೇಷ ರೆಡಾರ್ಗಳು ಹಾಗು ಸಿ 4 ಸ್ಫೋಟಕಗಳನ್ನು ಬಳಸುವ ಮೂಲಕ ಅವಿತುಕೊಂಡಿರುವ ಭಯೋತ್ಪಾದಕರ ಮಟ್ಟ ಹಾಕುವಲ್ಲಿಎನ್ಎಸ್ಜಿ ವಿಶೇಷತೆ ಹೊಂದಿದೆ.
ಇನ್ನು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ನೀಡಿದ ಅಂಕಿ ಅಂಶದ ಪ್ರಕಾರ, 2017ರಲ್ಲಿ ಕಟ್ಟಡದೊಳಕ್ಕೆ ಉಗ್ರರು ನುಗ್ಗಿ ಮಾಡಿದ ಅನಾಹುತಗಳಿಂದಲೇ 80 ಮಂದಿ ಭದ್ರತಾ ಸಿಬಂದಿ ಹುತಾತ್ಮರಾಗಿದ್ದರೆ, 70 ಮಂದಿ ನಾಗರಿಕರು ಜೀವ ಕಳೆದುಕೊಂಡಿದ್ದರು. ಈ ವರ್ಷದ ಮೇ ವರೆಗೆ 30 ಸೇನಾ ಸಿಬಂದಿ, 35 ನಾಗರಿಕರು ಜೀವ ಕಳೆದುಕೊಂಡಿದ್ದಾರೆ.