ನಿವೃತ್ತಿ ಸಮಯ ಘೋಷಿಸಿದ ಸಚಿವೆ ಸ್ಮೃತಿ ಇರಾನಿ
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ತಮ್ಮ ನಿವೃತ್ತಿ ಸಮಯ ಘೋಷಿಸಿದ್ದಾರೆ. NDA ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿರುವ ಸ್ಮೃತಿ ಪ್ರಧಾನಿ ಮೋದಿ ನಿವೃತ್ತಿಯಾದಾಗಲೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.
ಪುಣೆ : ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅತ್ಯಂತ ದೀರ್ಘ ಸಮಯದವರೆಗೆ ತಾವು ರಾಜಕೀಯದಲ್ಲಿ ಉಳಿಯುವುದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಎಂದು ನಿವೃತ್ತಿಯಾಗುತ್ತಾರೋ ಅಂದೇ ತಾವು ಕೂಡ ರಾಜಕೀಯ ತೊರೆಯುತ್ತೇವೆ ಎಂದು ಪುಣೆಯಲ್ಲಿ ನಡೆದ ಕೌಂಟ್ ಫೆಸ್ಟಿವಲ್ ನಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರ ವೇಳೆ ಈ ವಿಚಾರ ತಿಳಿಸಿದ್ದಾರೆ.
ಅಲ್ಲದೇ ದಿವಂಗತ ನಾಯಕ ಅಟಲ್ ಬಿಹಾರಿ ವಾಜಪೆಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಾಜಕೀಯದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ. ಚೈತನ್ಯಶೀಲ ರಾಜಕಾರಣಿಗಳೊಂದಿಗೆ ಇರುವುದು ನಮ್ಮ ಪುಣ್ಯ ಎಂದು ಈ ವೇಳೆ ಸ್ಮೃತಿ ಹೇಳಿದ್ದಾರೆ.
ಯಾವಾಗ ಪ್ರಧಾನಿ ನರೇಂದ್ರ ಮೋದಿ ರಾಜಕೀಯ ನಿವೃತ್ತಿ ಘೋಷಿಸುತ್ತಾರೋ ಅಂದೇ ತಾವು ರಾಜಕೀಯ ಜೀವನದಿಂದ ದೂರ ಸರಿಯುತ್ತೇನೆ. ನರೇಂದ್ರ ಮೋದಿಯವರಂತಹ ರಾಜಕಾರಣಿಗಳನ್ನು ಹೊರತುಪಡಿಸಿ ಬೇರೆ ರಾಜಕಾರಣಿಗಳ ಜೊತೆ ಕೆಲಸ ಮಾಡಲು ತಾವು ಬಯಸುವುದಿಲ್ಲ ಎಂದಿದ್ದಾರೆ.