ಅನುಮಾನಕ್ಕೆ ಕಾರಣವಾದ ಹಳೇ ದೋಸ್ತಿಗಳಾದ ಈಶ್ವರಪ್ಪ-ರೇವಣ್ಣ ಆತ್ಮೀಯತೆ!

ಹಾಸನ: ವಿಧಾನ ಪರಿಷತ್ ವಿಪಕ್ಷನಾಯಕ ಕೆ.ಎಸ್.ಈಶ್ವರಪ್ಪ ಜೆಡಿಎಸ್ ಸೇರುತ್ತಾರೆ ಎಂಬ ವದಂತಿ ಹರಡಿರುವ ವೇಳೆಗೇ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರೊಂದಿಗೆ ಕೆ.ಎಸ್. ಈಶ್ವರಪ್ಪ ಆತ್ಮೀಯವಾಗಿ ನಡೆದುಕೊಂಡಿದ್ದು ಅನೇಕ ಅನುಮಾನಗಳಿಗೆ ಕಾರಣವಾದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈ ಊಹಾಪೋಹವನ್ನು ಅಲ್ಲಗೆಳೆದಿರುವ ಈಶ್ವರಪ್ಪ ಅವರು ಹಾಸನಾಂಬೆ ಮೇಲಾಣೆ ನಾನು ಬಿಜೆಪಿ ಬಿಡೊಲ್ಲ ಎಂದು ಸ್ಪಷ್ಟಪಡಿಸಿದರು.

ಮಂಗಳವಾರ ಹಾಸನ ನಗರದ ಪ್ರವಾಸಿ ಮಂದಿರದ ಲ್ಲಿದ್ದ ಇವರಿಬ್ಬರು ಉಭಯಕುಶಲೋಪರಿ ವಿಚಾರಿಸಿಕೊಂಡರು. ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಇದ್ದ ರೇವಣ್ಣನವರ ಬಳಿ ಬಂದ ಈಶ್ವರಪ್ಪ, ‘ಏನ್ ರೇವಣ್ಣ ಆರಾಮವಾಗಿದ್ದೀಯಾ, ಎಷ್ಟು ದಿನ ಆಯ್ತು ನಿನ್ನನ್ನಾ ನೋಡಿ, ಹೇಗಿದ್ದೀಯಾ?’’ ಎಂದು ಕುಶಲ ವಿಚಾರಿಸುತ್ತಲೇ ರೇವಣ್ಣನವರನ್ನು ಬಿಗಿದಪ್ಪಿಕೊಂಡರು.

ಇದಕ್ಕೆ ಪ್ರತಿಯಾಗಿ ರೇವಣ್ಣ, ‘‘ನಾಯಕರು ಏನ್ ಹೇಳ್ತೀರಿ, ಕೇಳ್ತೀನಿ.. ನೀವು ಆರೋಗ್ಯವಾಗಿದ್ದೀರಾ?’ ಎಂದು ಈಶ್ವರಪ್ಪನವರ ಆರೋಗ್ಯ ವಿಚಾರಿಸಿಕೊಂಡರು.

ಸುಮಾರು 10 ನಿಮಿಷ ಇವರಿಬ್ಬರು ಬಹಳ ಆತ್ಮೀಯ ವಾಗಿ ಮಾತನಾಡಿದ್ದು ಅಲ್ಲಿದ್ದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರನ್ನು ನಿಬ್ಬೆರಗಾಗಿಸಿತ್ತು. ಇದೇ ವೇಳೆ ಜೆಡಿಎಸ್ ಸೇರ್ಪಡೆಯನ್ನು ಅಲ್ಲಗೆಳೆದಿರುವ ಈಶ್ವರಪ್ಪನವರು ‘‘ಹಾಸನಾಂಬೆ ಮೇಲಾಣೆ ನಾನು ಬಿಜೆಪಿ ಬಿಡಲ್ಲ. ಈ ಪಕ್ಷ ನನ್ನ ಉಸಿರು, ನನ್ನ ತಾಯಿ. ಸುಖಾಸುಮ್ಮನೆ ಕೆಲವರು ನನ್ನನ್ನು ಜೆಡಿಎಸ್ ಸೇರುತ್ತಾರೆ ’’ ಎಂದು ವದಂತಿ ಹರಡಿಸುತ್ತಿದ್ದಾರೆ ಎಂದಿದ್ದಾರೆ.

ಈ ಬಗ್ಗೆ ಎಚ್.ಡಿ.ರೇವಣ್ಣ ಕೂಡ ಸ್ಪಷ್ಟನೆ ನೀಡಿದ್ದು, ‘‘ಬಿಜೆಪಿ, ಜೆಡಿಎಸ್ ಸಮಿಶ್ರ ಸರ್ಕಾರವಿದ್ದಾಗ ಒಟ್ಟಿಗೆ ಕೆಲಸ ಮಾಡಿದ್ದೇವೆ. ನೇರವಾದಿಯಾದ ಅವರು ಹಿಂದೊಂದು ಮುಂದೊಂದು ಮಾತನಾಡುವುದಿಲ್ಲ. ಅವರು ಹಿರಿಯರು. ಅಂಥವರ ಬಗ್ಗೆ ಇಲ್ಲಸಲ್ಲದನ್ನು ಹೇಳುವಂತಹ ಕೀಳು ಮಟ್ಟಕ್ಕೆ ನಾ ಹೋಗಲ್ಲ. ನಮ್ಮೂರಿಗೆ ಬಂದಿದ್ದಾರೆ. ಅವರನ್ನು ಕಂಡು ಮಾತನಾಡಿಸುವುದು ಧರ್ಮ. ಅವರು ಜೆಡಿಎಸ್ ಸೇರುತ್ತಾರೆ ಎಂಬುದೆಲ್ಲಾ ಸುಳ್ಳು’’ ಎಂದು ತಿಳಿಸಿದ್ದಾರೆ.