ಕುರ್ತಾದೊಂದಿಗೆ ಬಂಗಾಳದಿಂದ ಬಂದ ದೀದಿ: ನಗುತ್ತಾ ಭೇಟಿಯಾದ ಪ್ರಧಾನಿ ಮೋದಿ!
ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಪ.ಬಂಗಾಳ ಸಿಎಂ| ಪ್ರಧಾನಿ ಮೋದಿಗೆ ಕುರ್ತಾ ಗಿಫ್ಟ್ ನೀಡಿದ ಮಮತಾ ಬ್ಯಾನರ್ಜಿ| ಕಲ್ಲಿದ್ದಲು ಗಣಿ ಉದ್ಘಾಟನೆಯ ದುರ್ಗಾಪೂಜೆಗೆ ಪ್ರಧಾನಿಗೆ ಆಹ್ವಾನ| ರಾಜ್ಯದ ಹೆಸರು ಬದಲಾವಣೆ ಕುರಿತು ಉಭಯ ನಾಯಕರ ಚರ್ಚೆ| ಮೋದಿ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಭೇಟಿಯಾದ ಮಮತಾ ಬ್ಯಾನರ್ಜಿ|
ನವದೆಹಲಿ(ಸೆ.18): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನವದೆಹಲಿಯಲ್ಲಿ ಇಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ, ಎಂದಿನಂತೆ ಮೋದಿ ಅವರಿಗೆ ಕುರ್ತಾವನ್ನು ಉಡುಗೊರೆಯಾಗಿ ನೀಡಿದರು. ಮೋದಿ ಎರಡನೇ ಅವಧಿಗೆ ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಅವರನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದಾರೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮಾತುಕತೆಯಲ್ಲಿ ಉಭಯ ನಾಯಕರು ಹಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಸಿದರು. ಪ್ರಮುಖವಾಗಿ ವಿಶ್ವದ ಎರಡನೇ ಅತೀ ದೊಡ್ಡ ಕಲ್ಲಿದ್ದಲು ಗಣಿ ಉದ್ಘಾಟನೆಯ ದುರ್ಗಾಪೂಜೆಗೆ ಮಮತಾ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದರು.
ಇದೇ ವೇಳೆ ಪಶ್ಚಿಮ ಬಂಗಾಳದ ಹೆಸರು ಬದಲಾವಣೆ ಕುರಿತು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ರಾಜ್ಯದ ಹೆಸರು ಬದಲಾವಣೆ ಕುರಿತು ಮೋದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ಹೆಸರು ಬದಲಾವಣೆ ಆಗಲಿದೆ ಎಂದು ಮಮತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.