ಉಪಚುನಾವಣೆ ಗೆಲುವಿನ ಹುರುಪಿನಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ: ಆಸ್ಕರ್ ಫರ್ನಾಂಡಿಸ್
ರಾಜ್ಯದ ಜನ ತಮ್ಮ ಅಭಿಪ್ರಾಯವನ್ನು ಉಪ ಚುನಾವಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲು ಸಿದ್ಧರಾಗುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
ಮಂಗಳೂರು (ಏ.18): ರಾಜ್ಯದ ಜನ ತಮ್ಮ ಅಭಿಪ್ರಾಯವನ್ನು ಉಪ ಚುನಾವಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದೇ ರೀತಿಯಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲು ಸಿದ್ಧರಾಗುತ್ತೇವೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
ರಾಜ್ಯದ ಜನರು ಸರ್ಕಾರದ ಕಾರ್ಯವೈಖರಿಯನ್ನು ಮೆಚ್ಚಿ ಉಪ ಚುನಾವಣೆಯಲ್ಲಿ ಗೆಲುವು ನೀಡಿದ್ದಾರೆ. ಇದೇ ಹುರುಪಿನಲ್ಲಿ ನಾವು ಮುಂದಿನ ಚುನಾವಣೆ ಎದುರಿಸಲು ಸಿದ್ಧರಾಗುತ್ತೇವೆ ಎಂದು ಹೇಳಿದ ಅವರು, ಕೆಪಿಸಿಸಿ ಅಧ್ಯಕ್ಷರು ಸಚಿವರಾದಾಗಲೇ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸಬೇಕು ಎನ್ನುವ ಅಭಿಪ್ರಾಯ ಬಂದಿತ್ತು. ಈಗ ಆ ಪ್ರಕ್ರಿಯೆ ನಡೆಯುತ್ತಿದೆ. ವಿವಿಧ ಕಾರಣಗಳಿಂದ ವಿಳಂಬ ಆಗಿರಬಹುದು. ಬದಲಾವಣೆಯಂತೂ ಆಗಲಿದೆ ಎಂದು ಹೇಳಿದರು.
ಕ್ಷಮೆ ಕೇಳಲು ಸಿದ್ಧ:
ರಾಜ್ಯಸಭೆಯಲ್ಲಿ ನಾನು ಹಾಡಿದ ತುಳು ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಅದಕ್ಕೆ ಕ್ಷಮೆ ಕೋರಲು ನಾನು ಸಿದ್ಧನಿದ್ದೇನೆ. ಆ ಹಾಡನ್ನು ಬರೆದದ್ದು ನಾನಲ್ಲ. ನಾನು ಚಿಕ್ಕವನಿದ್ದಾಗ ಕೊರಗ ಎನ್ನುವ ಹೆಸರಿನ ಸಹಪಾಠಿಯಿದ್ದ. ಆತನ ನೆನಪು ಯಾವಾಗಲೂ ಇತ್ತು. ರಾಜ್ಯಸಭೆಯಲ್ಲಿ ತುಳುವಿನ ಕುರಿತು ಮಾತನಾಡುವಾಗ ಈ ಹಾಡು ನೆನಪಾಯಿತು ಎಂದರು. ರಾಮಾಯಣದಲ್ಲಿನ ರಾಮನನ್ನು ಕೆಲವರು ಪೂಜಿಸಿದರೆ, ಕೆಲವರು ರಾವಣನನ್ನು ಪೂಜಿಸುತ್ತಾರೆ. ಅಭಿಪ್ರಾಯಗಳು ಬೇರೆ ಬೇರೆ ಇರುತ್ತವೆ ಎಂದು ಮಾರ್ಮಿಕವಾಗಿ ಹೇಳಿದರು.