ಅಲ್ಲಾಹ್ ಸಿಟ್ಟಾಗಿದ್ದಾರೆ: ದೇಶ ನಡೆಸಲು ಹಣ ಇಲ್ಲೆಂದ ಪ್ರಧಾನಿ!
ದೇಶ ಮುನ್ನಡೆಸಲು ನಮ್ಮ ಬಳಿ ಹಣ ಇಲ್ಲ! ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಳಲು! ದೇಶದ ದುರ್ಗತಿಗೆ ದೇವರ ಸಿಟ್ಟೇ ಕಾರಣ! ಪಾಕಿಸ್ತಾನಿಯರು ಬದಲಾಗಬೇಕಿದೆ ಎಂದ ಇಮ್ರಾನ್
ಇಸ್ಲಾಮಾಬಾದ್(ಸೆ.15): ಪಾಕಿಸ್ತಾನಿಯರನ್ನು ಬದಲಿಸಲು ದೇವರು ಹೊಸ ಹೊಸ ಸಂಕಷ್ಟಗಳನ್ನು ತಂದೊಡ್ಡುತ್ತಿದ್ದು, ದೇಶ ಮುನ್ನಡೆಸಲು ಸದ್ಯ ಸರ್ಕಾರದ ಬಳಿ ಹಣವಿಲ್ಲದಿರುವುದು ಅಂತಹ ಸಂಕಷ್ಟಗಳಲ್ಲಿ ಒಂದು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಇಸ್ಲಾಮಾಬಾದ್ನಲ್ಲಿ ನಡೆದ ಉನ್ನತ ಸರ್ಕಾರಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಇಮ್ರಾನ್ ಖಾನ್, ಹಿಂದಿನ ಸರ್ಕಾರ ದೇಶದ ಸಂಪತ್ತನ್ನು ಹೆಚ್ಚಿಸುವ ಕೆಲಸ ಮಾಡುವ ಬದಲು ನಷ್ಟ ಉಂಟುಮಾಡುವ ಯೋಜನೆಗಳನ್ನು ಕೈಗೊಂಡು ದೇಶದ ಆರ್ಥಿಕತೆಗೆ ಭಾರೀ ಹಾನಿ ಉಂಟುಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಜನಸಂಖ್ಯೆಯ ಬಹುಪಾಲು ಜನರು ಯುವಕರಾಗಿದ್ದು ಅವರು ಉದ್ಯೋಗಗಳನ್ನು ಎದುರು ನೋಡುತ್ತಿದ್ದಾರೆ. ದೇಶ ಸಾಧ್ಯವಾದಷ್ಟು ಬೇಗನೆ ಸಾಲದ ಹೊರೆಯಿಂದ ಮುಕ್ತವಾಗಬೇಕಿದೆ ಎಂದು ಪಾಕ್ ನೂತನ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.