ರಾಜೀವ್‌ ಹತ್ಯೆಯಲ್ಲಿ ನಮ್ಮ ಕೈವಾಡ ಇಲ್ಲ:  ಎಲ್‌ಟಿಟಿಇ ಸ್ಪಷ್ಟನೆ | ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಲಂ (ಎಲ್‌ಟಿಟಿಇ) ಹೇಳಿಕೊಂಡಿದೆ. 

ನವದೆಹಲಿ (ಡಿ.04): ಭಾರತದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಲಿಬರೇಷನ್‌ ಟೈಗರ್ಸ್‌ ಆಫ್‌ ತಮಿಳ್‌ ಈಲಂ (ಎಲ್‌ಟಿಟಿಇ) ಹೇಳಿಕೊಂಡಿದೆ.

Add Asianetnews Kannada as a Preferred SourcegooglePreferred

ಎಲ್‌ಟಿಟಿಯ ರಾಜಕೀಯ ಘಟಕದ ಪ್ರತಿನಿಧಿ ಕುರ್ಬುರನ್‌ ಗುರುಸ್ವಾಮಿ ಮತ್ತು ಕಾನೂನು ಘಟಕದ ಪ್ರತಿನಿಧಿ ಲತನ್‌ ಚಂದ್ರಲಿಂಗಂ ಅವರ ಸಹಿ ಇರುವ ಪತ್ರದಲ್ಲಿ ಈ ಹೇಳಿಕೆ ನೀಡಲಾಗಿದೆ. ಎಲ್‌ಟಿಟಿಇ ತಮಿಳು ಜನರಿಗಾಗಿ ಇರುವ ಸಂಘಟನೆಯಾಗಿದೆ. ರಾಜೀವ್‌ ಗಾಂಧಿ ಅವರ ಹತ್ಯೆಯಲ್ಲಿ ತಮ್ಮ ಸಂಘಟನೆ ಭಾಗಿಯಾಗಿಲ್ಲ ಎಂಬುದಕ್ಕೆ ಆಗಾಗ ಸಾಕ್ಷ್ಯಗಳನ್ನು ಬಿಡುಗಡೆ ಮಾಡುತ್ತಲೇ ಇದ್ದೇವೆ. ಆದರೂ ಸುಳ್ಳು ಆರೋಪವನ್ನು ನಮ್ಮ ವಿರುದ್ಧ ಹೊರಿಸಲಾಗಿದೆ.

ಮಾನಹಾನಿಕರ ಪ್ರಚಾರದಿಂದಾಗಿ ನಮ್ಮ ಜನರು ಅಸ್ಥಿರತೆಗೆ ತಳ್ಳಲ್ಪಟ್ಟಿದ್ದಾರೆ. ನಾವು ಭಾರತದ ನಾಯಕತ್ವವನ್ನು ನಾಶ ಮಾಡುವ ಅಥವಾ ಭಾರತದ ಮೇಲೆ ದಾಳಿ ಮಾಡುವ ಉದ್ದೇಶ ಹೊಂದಿಲ್ಲ. ನಾವು ಯಾವತ್ತೂ ಶ್ರೀಲಂಕಾ ಹೊರತಾದ ನಾಯಕರ ವಿರುದ್ಧ ಗನ್‌ ಹಿಡಿದಿಲ್ಲ. ಭಾರತದ ಯಾವುದೇ ಮುಖಂಡರ ವಿರುದ್ಧವೂ ನಾವು ಸಂಚು ರೂಪಿಸಿಲ್ಲ. ಎಲ್‌ಟಿಟಿಇ ಹಾಗೂ ಭಾರತ ಸರ್ಕಾರದ ನಡುವಿನ ಸಂಬಂಧ ನಾಶ ಮಾಡಲು ಪೂರ್ವ ಯೋಜಿತ ಸಂಚು ರೂಪಿಸಿ ರಾಜೀವ್‌ ಗಾಂಧಿ ಅವರ ಹತ್ಯೆ ಮಾಡಲಾಗಿದೆ ಎಂದು ಎಲ್‌ಟಿಟಿ ತನ್ನ ಪತ್ರದಲ್ಲಿ ಆರೋಪಿಸಿದೆ.