ದ್ವೇಷ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಎಲ್ಲಾ ರೀತಿಯಿಂದಲೂ ಹೋರಾಡಲು ದೇಶ ಒಂದಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ವಾಷಿಂಗ್ಟನ್(ಮಾ.01): ದ್ವೇಷ ಮತ್ತು ಕೆಟ್ಟ ಶಕ್ತಿಗಳ ವಿರುದ್ಧ ಎಲ್ಲಾ ರೀತಿಯಿಂದಲೂ ಹೋರಾಡಲು ದೇಶ ಒಂದಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕಾ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಜಂಟಿ ಅಧಿವೇಶನವನ್ನುದ್ದೇಶಿಸಿ ಮೊದಲ ಭಾಷಣ ಮಾಡಿದ ಅವರು, ದ್ವೇಷ ಹರಡುವುದನ್ನು ನಾವು ಎಲ್ಲಾ ರೀತಿಯಿಂದಲೂ ಖಂಡಿಸುತ್ತೇವೆ. ಯಹೂದಿಗಳನ್ನು ಕೇಂದ್ರವಾಗಿಟ್ಟುಕೊಂಡು ಬೆದರಿಕೆಯೊಡ್ಡುವುದನ್ನು ಮತ್ತು ಕಾನ್ಸಾಸ್ ನಲ್ಲಿ ಭಾರತೀಯ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡುವುದು ದೇಶದ ಹಿತಾಸಕ್ತಿಗೆ ಉತ್ತಮವಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಹಿಂಸಾಕೃತ್ಯ ಅಪರಾಧಗಳನ್ನು ಕಡಿಮೆ ಮಾಡಲು ಕಾರ್ಯಪಡೆಯನ್ನು ರಚಿಸುವಂತೆ ಅಮೆರಿಕಾ ನ್ಯಾಯ ವಿಭಾಗಕ್ಕೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಭಾಷಣಕ್ಕೂ ಮುನ್ನ ಕಾನ್ಸಾಸ್ ಶೂಟಿಂಗ್ ನಲ್ಲಿ ಬಲಿಯಾದ ಶ್ರೀನಿವಾಸ್'ಗೆ ಅಮೆರಿಕಾ ಕಾಂಗ್ರೆಸ್ ಒಂದು ನಿಮಿಷದ ಮೌನಾಚರಣೆ ಸಲ್ಲಿಸಿತು. ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಶ್ವೇತಭವನದ ವಕ್ತಾರರು ಕಾನ್ಸಾಸ್ ಶೂಟಿಂಗ್'ನ್ನು ಖಂಡಿಸಿ, ಇದೊಂದು ಜನಾಂಗೀಯ ಪ್ರೇರೇಪಿತ ದ್ವೇಷ ಎಂದು ಕಂಡುಬರುತ್ತಿದೆ ಎಂದು ಹೇಳಿದ್ದರು. ಅಮೆರಿಕಾ ನೌಕಾಪಡೆಯ ನಿವೃತ್ತ ಅಧಿಕಾರಿ ಆಡಮ್ ಪುರಿಂಟೊನ್ ಎಂಬಾತ ಕಳೆದ ವಾರ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಬೊಟ್ಲಾನನ್ನು ಕಾನ್ಸಾಸ್ ನ ಆಸ್ಟಿನ್ ಬಾರ್ ಅಂಡ್ ಗ್ರಿಲ್ಸ್ ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದನು. ಪುರಿಂಟೊನ್ ಮಿಸ್ಸೊರಿಯ ಕ್ಲಿಂಟನ್ ನ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.

ಶ್ರೀನಿವಾಸ್'ನ ಅಂತ್ಯಸಂಸ್ಕಾರ ನಿನ್ನೆ ಹೈದರಾಬಾದಿನ ಅವರ ನಿವಾಸದಲ್ಲಿ ನಡೆಯಿತು. ನೂರಾರು ಮಂದಿ ಭಾವಪೂರ್ಣ ವಿದಾಯ ಕೋರಿದರು.