ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನೆಲೆ| ಸಚಿನ್ ಪೈಲೆಟ್, ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ವಿಜಯ್ ಮಲ್ಯ ಅಭಿನಂದನೆ| ಯುವ ನಾಯಕರನ್ನು ‘ಯಂಗ್ ಚಾಂಪಿಯನ್ಸ್’ ಎಂದು ಹೊಗಳಿದ ವಿಜಯ್ ಮಲ್ಯ| ಟ್ವೀಟ್ ಮೂಲಕ ಇಬ್ಬರೂ ನಾಯಕರಿಗೆ ಅಭಿನಂದನೆ ಸಲ್ಲಿಸಿದ ಮದ್ಯದ ದೊರೆ
ಲಂಡನ್(ಡಿ.13): ರಾಜಸ್ತಾನ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಸಚಿನ್ ಪೈಲಟ್ ಹಾಗೂ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಮದ್ಯದ ದೊರೆ ವಿಜಯ್ ಮಲ್ಯ ಅಭಿನಂದಿಸಿದ್ದಾರೆ.
ಕಾಂಗ್ರೆಸ್ ಯುವ ನಾಯಕರಾದ ಸಚಿನ್ ಪೈಲಟ್ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಅವರನ್ನು ‘ಯಂಗ್ ಚಾಂಪಿಯನ್’ ಎಂದಿರುವ ವಿಜಯ್ ಮಲ್ಯ, ಇಬ್ಬರೂ ನಾಯಕರಿಗೆ ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿಸದೆ ದೇಶ ಬಿಟ್ಟು ಪರಾರಿಯಾಗಿರುವ ವಿಜಯ್ ಮಲ್ಯ ಅವರನ್ನು, ಭಾರತಕ್ಕೆ ಗಡಿಪಾರು ಮಾಡಿ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಳೆದ ಸೋಮವಾರವಷ್ಟೇ ಆದೇಶ ಹೊರಡಿದ್ದನ್ನು ಇಲ್ಲಿ ಸ್ಮರಿಸಬಹುದು.
