ಇನ್ಮುಂದೆ ಅಲಹಾಬಾದ್ ಅಲ್ಲ, ಪ್ರಯಾಗ್ ರಾಜ್! ಯೋಗಿ ಸರ್ಕಾರ ಘೋಷಣೆ
ಅಲಹಾಬಾದ್ ನಗರ ಹೆಸರು ಬದಲಾವಣೆ | ಪ್ರಯಾಗ್ ರಾಜ್ ಎಂದು ಮರು ನಾಮಕರಣ | ಯೋಗಿ ಸರ್ಕಾರದಿಂದ ನಿರ್ಧಾರ
ಲಕ್ನೋ (ಅ. 16): ಅಲಹಾಬಾದ್ ನಗರವನ್ನು ’ಪ್ರಯಾಗ್ ರಾಜ್’ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸರ್ಕಾರ ಅಧಿಕೃತವಾಗಿ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತ ಘೋಷಣೆ ಮಾಡಿದ್ದಾರೆ. ರಾಜ್ಯಪಾಲ ರಾಮ್ ನಾಯಕ್ ಈ ಪ್ರಸ್ತಾವನೆಗೆ ಸಮ್ಮತಿ ನೀಡಿದ್ದಾರೆ.
ಅಲಹಾಬಾದನ್ನು ಪ್ರಯಾಗ್ ರಾಜ್ ಆಗಿ ಮಾಡುವುದು ಬಹುತೇಕ ಜನರ ಆಸೆಯಾಗಿತ್ತು. ಇದೊಂದು ಉತ್ತಮ ಸಂದೇಶವನ್ನು ನೀಡಲಿದೆ. ಎಲ್ಲರೂ ಒಪ್ಪಿದರೆ ಅಲಹಾಬಾದ್ ಪ್ರಯಾಗ್ ರಾಜ್ ಆಗಲಿದೆ. ಇದು ಮುಂದಿನ ದಿನಗಳಲ್ಲಿ ಉತ್ತಮ ಮುನ್ನುಡಿಯಾಗಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ. ಅಲಹಾಬಾದ್ ಬದಲು ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡುವುದು ಅದಕ್ಕೊಂದು ಅಸ್ತಿತ್ವವನ್ನು ನೀಡಲಿದೆ. ಅಕ್ಬರ್, ಮೊಘಲರ ಹೆಸರನ್ನೆಲ್ಲಾ ತೆಗೆದು ಹಾಕಬೇಕು ಎಂದು ಹೇಳಿದೆ.
ಕಾಂಗ್ರೆಸ್ ಮಾತ್ರ ಉತ್ತರ ಪ್ರದೇಶ ಸರ್ಕಾರದ ಈ ನಿರ್ಧಾರವನ್ನು ನಿರಾಕರಿಸಿದೆ. ಪ್ರಯಾಗ್ ರಾಜನ್ನು ಹೊಸ ನಗರವನ್ನಾಗಿ ಮಾಡಲಿ. ಅಲಹಾಬಾದ್ ಹಾಗೇ ಇರಲಿ. ಬದಲಾವಣೆ ಮಾಡುವುದು ಬೇಡ ಎಂದಿದೆ.