ಉರುಸ್ ವೇಳೆ ಹಿಂದೂಗಳಿಗೆ ಎಮ್ಮೆ ಮಾಂಸದೂಟ: 43 ಮುಸ್ಲಿಮರ ವಿರುದ್ಧ ಪ್ರಕರಣ
ಉರುಸ್ ವೇಳೆ ಹಿಂದೂಗಳಿಗೆ ಎಮ್ಮೆ ಮಾಂಸದೂಟ: 43 ಮುಸ್ಲಿಮರ ವಿರುದ್ಧ ಪ್ರಕರಣ| ಸತಾರಾ ಗ್ರಾಮದಲ್ಲಿ ಶೇಖ್ ಪೀರ್ ಬಾಬಾ ಅವರ ಉರುಸ್
ಲಖನೌ[ಸೆ.06]: ಉರುಸ್ (ಮುಸ್ಲಿಮರ ಹಬ್ಬ) ವೇಳೆ ಹಿಂದೂಗಳಿಗೆ ಎಮ್ಮೆ ಮಾಂಸದ ಬಿರಿಯಾನಿ ಉಣಬಡಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಮಹೋಬಾ ಜಿಲ್ಲೆಯ ಸತಾರಾ ಗ್ರಾಮದ 43 ಮುಸ್ಲಿಮರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆ.31ರಂದು ಸತಾರಾ ಗ್ರಾಮದಲ್ಲಿ ಶೇಖ್ ಪೀರ್ ಬಾಬಾ ಅವರ ಉರುಸ್ ನಡೆದಿತ್ತು. ಇದರಲ್ಲಿ ಸಾವಿರಾರು ಮುಸ್ಲಿಮರ ಜೊತೆಗೆ ಸುತ್ತಲಿನ 13 ಗ್ರಾಮಗಳ 10000ಕ್ಕೂ ಹೆಚ್ಚು ಹಿಂದೂಗಳು ಕೂಡಾ ಭಾಗವಹಿಸಿ ಔತಣ ಸೇವಿಸಿದ್ದರು. ಆದರೆ ಈ ಪೈಕಿ ಕೆಲವರಿಗೆ ಸಸ್ಯಾಹಾರದ ಊಟದಲ್ಲಿ ಮಾಂಸ, ಮೂಳೆ ಸಿಕ್ಕಿತ್ತು. ಈ ಬಗ್ಗೆ ಆಕ್ರೋಶಗೊಂಡಿದ್ದ ಹಿಂದೂಗಳು, ಉದ್ದೇಶಪೂರ್ವಕವಾಗಿಯೇ ಕೆಲವರು ಈ ರೀತಿ ಮಾಡಿದ್ದಾರೆ. ಹಿಂದೂ ಧರ್ಮ ನಿಂದನೆಗಾಗಿ ಈ ರೀತಿ ಮಾಡಿದ್ದಾರೆ ಎಂದು ಕಿಡಿಕಾರಿದ್ದರು.
ಅದರ ಬೆನ್ನಲ್ಲೇ ಈ ಬಗ್ಗೆ ಪೊಲೀಸರು ದೂರು ನೀಡಲಾಗಿದ್ದು, ಅದರನ್ವಯ 43 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ನಡುವೆ ಭೋಜನದಲ್ಲಿ ಮಾಂಸ ಬೆರೆಸಿರುವುದನ್ನ ಒಪ್ಪಿಕೊಂಡ ಮುಸ್ಲಿಮರು, ಶುದ್ಧೀಕರಣಕ್ಕಾಗಿ 50 ಸಾವಿರ ತೆರಲು ಒಪ್ಪಿ ಕ್ಷಮೆಯಾಚಿಸಿದ್ದಾರೆ.