ಕೇಂದ್ರ ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರ ಸಚಿವ ಡಾ. ಹರ್ಷವರ್ಧನ್ ಅವರು ರಾಮಾಯಣದ ವಿದೇಹ ಸಾಮ್ರಾಜ್ಯದ ರಾಜನಾಗಿದ್ದ ಜನಕರಾಜನ ಪಾತ್ರದಲ್ಲಿ ರಂಗಮಂಟಪದಲ್ಲಿ ಕಾಣಿಸಿಕೊಂಡರು.
ನವದೆಹಲಿ[ಅ.13]: ಸಾಂಪ್ರಾದಾಯಿಕ ರೇಷ್ಮೆ ಧರಿಸು, ಮಿಂಚಿನ ಕಿರೀಟ, ರಾಜ ಗಾಂಭೀರ್ಯ, ಸುಲಲಿತ ಪರಿಶುದ್ಧ ಹಿಂದಿಯ ಸಂಭಾಷಣೆಗಳು. ಇದು ಯಾವುದೋ ಪೌರಾಣಿಕ ನಾಟಕದ ದೃಶ್ಯವಲ್ಲ ಸ್ವತಃ ಕೇಂದ್ರ ಸಚಿವರು ರಂಗದ ಮೇಲೆ ಮಿಂಚಿದ ಪರಿ.
ಕೇಂದ್ರ ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರ ಸಚಿವ ಡಾ.ಹರ್ಷವರ್ಧನ್ ಅವರು ರಾಮಾಯಣದ ವಿದೇಹ ಸಾಮ್ರಾಜ್ಯದ ರಾಜನಾಗಿದ್ದ ಜನಕರಾಜನ ಪಾತ್ರದಲ್ಲಿ ರಂಗಮಂಟಪದಲ್ಲಿ ಕಾಣಿಸಿಕೊಂಡರು. ರಾಮ್ ಲೀಲಾ ಕಾರ್ಯಕ್ರಮದ ಅಂಗವಾಗಿ ಕೆಂಪು ಕೋಟೆಯ ಮೈದಾನದಲ್ಲಿ ಲವಕುಶ ಸಮಿತಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೀತೆಯ ಸಾಕು ತಂದೆಯಾಗಿ ಸಭಿಕರನ್ನು ರಂಜಿಸಿದರು.
ಆ ಕಾಲಕ್ಕೆ ಪರಿಸರ ಸಂರಕ್ಷಣೆಗಾಗಿ ಜನಕರಾಜ ಹಲವು ಜನಪ್ರಿಯ ಕಾರ್ಯಕ್ರಗಳನ್ನು ಕೈಗೊಂಡಿದ್ದರು. ಶುದ್ಧ ಗಾಳಿ, ಉತ್ತಮ ಆರೋಗ್ಯಕ್ಕಾಗಿ ಪರಿಸರ ರಕ್ಷಿಸಿಕೊಳ್ಳುವ ಸಂದೇಶವನ್ನು ಜನಕನ ಪಾತ್ರದ ಮೂಲಕ ಸಾರ್ವಜನಿಕರಿಗೆ ಸಾರಿದರು. ದೆಹಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸೇರಿದಂತೆ ಹಲವು ಕಲಾವಿದರು ಹಾಗೂ ರಾಜಕಾರಣಿಗಳು ರಾಮಲೀಲಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
