ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆಯಿಂದ ಭಾರತ ವಿರೋಧಿ ವರದಿ : ಹೊಸ ಟ್ವಿಸ್ಟ್
ಕಾಶ್ಮೀರ ಕುರಿತಂತೆ ವಿಶ್ವಸಂಸ್ಥೆ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಭಾರತ ವಿರೋಧಿ ವರದಿಯ ಹಿಂದೆ ತಮ್ಮ ಪಾತ್ರವಿದೆ ಪಾಕಿಸ್ತಾನ ಮೂಲದ ಮೌಲ್ವಿಯೊಬ್ಬರು ಹೇಳಿಕೊಂಡಿರುವುದು ಸಂಚಲನಕ್ಕೆ ಕಾರಣವಾಗಿದೆ.
ಟೊರೊಂಟೋ: ಕಾಶ್ಮೀರ ಕುರಿತಂತೆ ವಿಶ್ವಸಂಸ್ಥೆ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದ ಭಾರತ ವಿರೋಧಿ ವರದಿಯ ಹಿಂದೆ ತಮ್ಮ ಪಾತ್ರವಿದೆ ಪಾಕಿಸ್ತಾನ ಮೂಲದ ಮೌಲ್ವಿಯೊಬ್ಬರು ಹೇಳಿಕೊಂಡಿರುವುದು ಸಂಚಲನಕ್ಕೆ ಕಾರಣವಾಗಿದೆ.
ಕಾಶ್ಮೀರದಲ್ಲಿನ ನಾಗರಿಕರ ಮೇಲೆ ಭಾರತ ಮಿತಿಮೀರಿದ ಬಲಪ್ರಯೋಗ ಮಾಡುತ್ತಿದೆ. ಗಡಿಯ ಎರಡೂ ಕಡೆಗಳಲ್ಲಿ ಭಾರತದ ಭದ್ರತಾ ಪಡೆಗಳು ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿವೆ ಎಂದು ಜೂ.14ರಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದ ವರದಿ ಭಾರತದ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಆದರೆ ಈ ವರದಿಯನ್ನು ತಯಾರಿಸಿದ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಹೈಕಮಿಷನರ್ ಜೀದ್ ರಾದ್ ಅಲ್ ಹುಸೇನ್ ಅವರು ವರದಿ ತಯಾರಿಸುವಾಗ ತಮ್ಮ ಜತೆ ಸಂಪರ್ಕದಲ್ಲಿದ್ದರು. ಆ ವರದಿ ಹಿಂದೆ ತಮ್ಮ ಪಾತ್ರವಿದೆ ಎಂದು ಇಸ್ಲಾಮಿಕ್ ಚಳವಳಿಯ ಪತ್ರಕರ್ತ ಹಾಗೂ ಟೊರೋಂಟೋ ಬಳಿಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿರುವ ಜಫಾರ್ ಬಂಗಾಶ್ ಅವರು ಹೇಳಿದ್ದಾರೆ. ಇದರಿಂದಾಗಿ ವಿಶ್ವಸಂಸ್ಥೆ ಭಾರಿ ಮುಜುಗರ ಎದುರಿಸುವಂತಾಗಿದೆ.
ಪಾಕಿಸ್ತಾನಕ್ಕೆ ತಪರಾಕಿ: ಈ ನಡುವೆ ಈ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ವರದಿಯನ್ನು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪ್ರಸ್ತಾಪಿಸಿದೆ. ಇದಕ್ಕೆ ಕೋಪೋದ್ರಿಕ್ತವಾಗಿ ತಿರುಗೇಟು ನೀಡಿರುವ ಭಾರತ, ಈ ವರದಿ ಸಂಪೂರ್ಣ ತಾರತಮ್ಯದಿಂದ ಕೂಡಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಪರಿಗಣಿಸುವುದಕ್ಕೆ ಅದು ಯೋಗ್ಯವಾಗಿಲ್ಲ ಎಂದು ಹೇಳಿದೆ.