"ನಮಾಮಿ ಗಂಗೆ" ಯೋಜನೆಯ ಸಂಚಾಲಕರಾಗಿ ದುಡಿದಿರುವ ರಾವತ್ ಅವರು ಮೋದಿ ಮತ್ತು ಅಮಿತ್ ಶಾ ಅವರ ನಿಕಟವರ್ತಿಗಳಾಗಿದ್ದಾರೆ.

ನವದೆಹಲಿ(ಮಾ. 17): ಉತ್ತರಾಖಂಡ್ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ಅವರ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ. ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತ್ರಿವೇಂದ್ರ ರಾವತ್ ಅವರನ್ನು ಚುನಾಯಿಸಲಾಗಿದೆ. ನಾಳೆ, ಶನಿವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಆ ರಾಜ್ಯದ 9ನೇ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬಳಿಕ ತ್ರಿವೇಂದ್ರ ಸಿಂಗ್ ಅವರು ಇಂದು ರಾಜ್ಯಪಾಲ ಕೆಕೆ ಪೌಲ್ ಅವರನ್ನು ಭೇಟಿಯಾಗಿ, ತಮಗೆ 57 ಶಾಸಕರ ಬೆಂಬಲವಿರುವುದಾಗಿ ತಿಳಿಸಿದರು.

ಆರೆಸ್ಸೆಸ್ ಪ್ರಚಾರಕ:
56 ವರ್ಷದ ತ್ರಿವೇಂದ್ರ ಸಿಂಗ್ ಅವರು ಆರೆಸ್ಸೆಸ್ ಪ್ರಚಾರಕರಾಗಿದ್ದವರು. ಉತ್ತರಾಖಂಡ್ ರಚನೆಗೆ ಮುನ್ನ ಉತ್ತರಪ್ರದೇಶದಲ್ಲಿ ಅವರು ಬಿಜೆಪಿಯ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 2000ರಲ್ಲಿ ಉತ್ತರಾಖಂಡ್ ರಾಜ್ಯ ರಚನೆ ಬಳಿಕ ಆ ರಾಜ್ಯದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 2007ರಲ್ಲಿ ಅವರು ಬಿಜೆಪಿ ಸರಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿ ಕೆಲಸ ಮಾಡಿದರು. ಸದ್ಯ, ಮೋದಿಯವರ ಮಹತ್ವಾಕಾಂಕ್ಷೆಯ "ನಮಾಮಿ ಗಂಗೆ" ಯೋಜನೆಯ ಸಂಚಾಲಕರಾಗಿ ದುಡಿದಿರುವ ರಾವತ್ ಅವರು ಮೋದಿ ಮತ್ತು ಅಮಿತ್ ಶಾ ಅವರ ನಿಕಟವರ್ತಿಗಳಾಗಿದ್ದಾರೆ.