ನಗ್ನಗೊಳಿಸಿ ಆದಿವಾಸಿಗಳಿಗೆ ಮನಬಂದಂತೆ ಥಳಿತ
ಡೀಸೆಲ್ ಕದ್ದಿದ್ದಾರೆ ಎಂದು ಆಪಾದಿಸಿ ಉದ್ಯಮಿಯೊಬ್ಬ ಮೂವರು ಬುಡಕಟ್ಟು ಜನಾಂಗದ ನೌಕರರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಥಳಿಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಭೋಪಾಲ್: ಡೀಸೆಲ್ ಕದ್ದಿದ್ದಾರೆ ಎಂದು ಆಪಾದಿಸಿ ಉದ್ಯಮಿಯೊಬ್ಬ ಮೂವರು ಬುಡಕಟ್ಟು ಜನಾಂಗದ ನೌಕರರನ್ನು ಸಾರ್ವಜನಿಕವಾಗಿ ನಗ್ನಗೊಳಿಸಿ ಥಳಿಸಿದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಆದಾಗ್ಯೂ, ಘಟನೆ ಬುಧವಾರ ನಡೆದಿದ್ದರೂ, ಪ್ರಾಣಾಪಾಯದಿಂದ ದೌರ್ಜನ್ಯಕ್ಕೊಳಗಾದವರು ದೂರು ನೀಡಿರದಿದ್ದ ಹಿನ್ನೆಲೆಯಲ್ಲಿ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಲಾ ಜಿಲ್ಲೆಯ ನಿವಾಸಿಗಳಾದ ಸುರೇಶ್ ಠಾಕೂರ್ (46), ಆಶಿಶ್ ಗೊಂಡ್ (24) ಮತ್ತು ಗೋಲು ಠಾಕೂರ್ (24) ನಗ್ನಗೊಳಿಸಲ್ಪಟ್ಟು, ಹಲ್ಲೆಗೊಳಗಾದ ಸಂತ್ರಸ್ತರು. 120 ಲೀಟರ್ ಡೀಸೆಲ್ ಕದ್ದಿದ್ದಾರೆ ಎಂದು ಆಪಾದಿಸಿ ಅಂಧಮೂಕ್ ಬೈಪಾಸ್ ರಸ್ತೆ ಬಳಿಯ ಅಂಗಡಿಯೊಂದರ ಮುಂದೆ ಮೂವರನ್ನು ಸಂಪೂರ್ಣ ನಗ್ನಗೊಳಿಸಿ ಥಳಿಸಲಾಗಿತ್ತು.
ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರಣ ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿದ್ದಾರೆ. ಬೇಸ್ಬಾಲ್ ಬ್ಯಾಟ್ನಿಂದ ಮೂವರ ಮೇಲೆ ನಿಂದಿಸುತ್ತಾ ಗುಡ್ಡು ಅಮಾನವೀಯವಾಗಿ ಥಳಿಸುತ್ತಿರು ದೃಶ್ಯ ವೀಡಿಯೊದಲ್ಲಿ ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ಜಬಲ್ಪುರ ನಿವಾಸಿಗಳಾದ ಸಾರಿಗೆ ಉದ್ಯಮಿ ಗುಡ್ಡು ಶರ್ಮಾ ಮತ್ತು ಆತನ ಸ್ನೇಹಿತ ಶೇರು ವಿರುದ್ಧ ಪ್ರಕರಣ ದಾಖಲಾಗಿದೆ. ಇಬ್ಬರೂ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.