ಹಾಸನ(ಸೆ.25): ರೈಲ್ವೆ ಇಲಾಖೆ ಅಂದ್ರೆ ಅದು ಶಿಸ್ತಿಗೆ ಹೆಸರಾದ ಇಲಾಖೆ ಎನ್ನುವ ಮಾತಿದೆ. ಆದರೆ ಈ ಇಲಾಖೆಯಲ್ಲೂ ಲೈಂಗಿಕ ಕಿರುಕುಳ ಹಾಗೂ ಕಳ್ಳತನದಂತಹ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡಿರುವ ಆರೋಪ ಹಾಸನ ಜಿಲ್ಲೆ ಅರಸಿಕೆರೆ ರೈಲ್ವೆ ಜಂಕ್ಷನ್'ನಲ್ಲಿ ಕೇಳಿಬಂದಿದೆ.

Add Asianetnews Kannada as a Preferred SourcegooglePreferred

ರೈಲ್ವೆ ಇಲಾಖೆ ಮಹಿಳಾ ಅಧಿಕಾರಿಯೊಬ್ಬರು ಮೇಲಧಿಕಾರಿಗಳ ಕಿರುಕುಳದ ವಿರುದ್ದ ತಿರುಗಿಬಿದ್ದು ಹೋರಾಟಕ್ಕೆ ಮುಂದಾಗಿದ್ದಾರೆ. ಮಹಿಳಾ ಅಧಿಕಾರಿಗೆ ಲೈಂಗಿಕ ಕಿರುಕುಳ ಮಾತ್ರವಲ್ಲದೇ ಆಕೆ 10 ಲಕ್ಷ ರೂ ದುರುಪಯೋಗ​ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ದಿಢೀರ್​ ವರ್ಗಾವಣೆ ಮಾಡಿದ ಘಟನೆ ಅರಸೀಕೆರೆ ರೈಲ್ವೆ ಜಂಕ್ಷನ್'ನಲ್ಲಿ ಕೇಳಿ ಬಂದಿದೆ. ಕಮರ್ಷಿಯಲ್ ಸೂಪರ್ ವೈಸರ್ ಆಗಿರುವ ಸುಮಲತಾ ಎಂಬುವರೇ ದಂಡನೆಗೆ ಗುರಿಯಾಗಿರುವ ಮಹಿಳಾ ಅಧಿಕಾರಿ. ಇದೀಗ ಈಕೆ ನ್ಯಾಯ ಬೇಕೆಂದು ರೈಲ್ವೆ ಇಲಾಖೆ ಎದುರು ಒಂಟಿಯಾಗಿ ಹೋರಾಟ ನಡೆಸುತ್ತಿದ್ದಾರೆ.

ಅದೇ ಇಲಾಖೆಯ ಮೇಲಾಧಿಕಾರಿಯಾಗಿದ್ದ ಧನಶೇಖರ್ ಎಂಬಾತ ಕಳೆದ 2 ವರ್ಷಗಳ ಹಿಂದೆ ಸುಮಲತಾಗೆ ಲೈಂಗಿಕ ಕಿರುಕುಳ ಜೊತೆಗೆ ಮಾನಸಿಕ ಹಿಂಸೆ ನೀಡಿದ್ದ ಎನ್ನಲಾಗಿದೆ. ಅಲ್ಲದೇ ನಾನು ಹೇಳಿದ ಮೇಲಾಧಿಕಾರಿಗಳಿಗೆ ನೀನು ಎಲ್ಲಾ ರೀತಿಯ ಸಹಕಾರ ನೀಡಿದ್ರೆ ಬಡ್ತಿ ಸೇರಿದಂತೆ ನಿನಗೆ ಬೇಕಾದ ಸೌಲಭ್ಯ ನೀಡುವೆ. ಇಲ್ಲವಾದರೆ ನಿನ್ನನ್ನು ಬೇರೆ ಕಡೆಗೆ ವರ್ಗ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನುವುದು ಸುಮಲತಾ ಆರೋಪ. ಸುಮಲತಾ, ಸ್ಥಳೀಯ ಪೊಲೀಸರಿಗೆ ಧನಶೇಖರ್ ವಿರುದ್ಧ ಒಂದು ವರ್ಷದ ಹಿಂದೆಯೇ ಲೈಂಗಿಕ ಕಿರುಕುಳದ ದೂರು ಸಹ ನೀಡಿದ್ದಾರೆ.