ಬ್ಯಾಂಕ್​ ಗ್ರಾಹಕರೇ ನಿಮ್ಮ ಎಲ್ಲ ಕೆಲಸಗಳನ್ನು ಇಂದೇ ಮುಗಿಸಿಕೊಳ್ಳಿ. ಯಾಕಂದ್ರೆ ನಾಳೆ ಬ್ಯಾಂಕ್​ಗಳು ಬಂದ್​​ ಆಗಲಿವೆ. ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಉದ್ಯೋಗಿಗಳು ನಾಳೆ ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ದೇಶದಾದ್ಯಂತ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ ಆಗುವ ಸಾಧ್ಯತೆ ಇದೆ.

ನವದೆಹಲಿ(ಆ.21): ಬ್ಯಾಂಕ್​ ಗ್ರಾಹಕರೇ ನಿಮ್ಮ ಎಲ್ಲ ಕೆಲಸಗಳನ್ನು ಇಂದೇ ಮುಗಿಸಿಕೊಳ್ಳಿ. ಯಾಕಂದ್ರೆ ನಾಳೆ ಬ್ಯಾಂಕ್​ಗಳು ಬಂದ್​​ ಆಗಲಿವೆ. ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಉದ್ಯೋಗಿಗಳು ನಾಳೆ ಒಂದು ದಿನದ ಮುಷ್ಕರ ನಡೆಸಲಿದ್ದಾರೆ. ಹೀಗಾಗಿ ದೇಶದಾದ್ಯಂತ ಬ್ಯಾಂಕಿಂಗ್‌ ವಹಿವಾಟಿಗೆ ಧಕ್ಕೆ ಆಗುವ ಸಾಧ್ಯತೆ ಇದೆ.

ಒಂಬತ್ತು ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆ ಆಶ್ರಯದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. 10 ಲಕ್ಷದಷ್ಟು ಬ್ಯಾಂಕ್‌ ಉದ್ಯೋಗಿಗಳು ವೇದಿಕೆಯ ಸದಸ್ಯರಾಗಿದ್ದಾರೆ. ಬ್ಯಾಂಕ್‌ಗಳ ಖಾಸಗೀಕರಣ ಯತ್ನ ವಿರೋಧಿಸಿ ಮತ್ತು ಇತರ ಬೇಡಿಕೆಗಳಿಗೆ ಒತ್ತಾಯಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಖಾಸಗಿ ಬ್ಯಾಂಕ್‌'ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ಚೆಕ್‌ ಕ್ಲಿಯರನ್ಸ್‌ ವಿಳಂಬವಾಗಬಹುದು.

ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳು ಶೇ 75ರಷ್ಟು ಬ್ಯಾಂಕಿಂಗ್‌ ವಹಿವಾಟಿನ ಮೇಲೆ ನಿಯಂತ್ರಣ ಹೊಂದಿವೆ. ಉದ್ದಿಮೆ ಸಂಸ್ಥೆಗಳ ವಸೂಲಾಗದ ಸಾಲ ವಜಾ ಮಾಡುವ ನೀತಿ ಕೈಬಿಡಬೇಕು, ಉದ್ದೇಶಪೂರ್ವಕ ಸುಸ್ತಿದಾರರಾಗುವುದನ್ನು ಕ್ರಿಮಿನಲ್‌ ಅಪರಾಧ ಎಂದು ಘೋಷಿಸಬೇಕು, ಎನ್‌ಪಿಎ ವಸೂಲಾತಿಗೆ ಸಂಸತ್‌ ಸಮಿತಿ ಶಿಫಾರಸುಗಳನ್ನು ಜಾರಿಗೆ ತರಬೇಕು ಎನ್ನುವುದು ಇವರ ಬೇಡಿಕೆಗಳಾಗಿವೆ. ಅಲ್ಲದೇ, ಎನ್‌ಪಿಎ ಹೊರೆಯನ್ನು ವಿವಿಧ ಶುಲ್ಕಗಳ ಹೆಚ್ಚಳದ ನೆಪದಲ್ಲಿ ಗ್ರಾಹಕರ ಮೇಲೆ ವಿಧಿಸಬಾರದು ಎಂದು ಆಗ್ರಹಿಸಿದ್ದಾರೆ..