Asianet Suvarna News Asianet Suvarna News

ಇಂದು ಮಹಾವೀರ ಜಯಂತಿ: ಮಹಾವೀರರ ಕುರಿತು ಕುತೂಹಲಕಾರಿ ವಿಚಾರಗಳಿವು

ಸಮಾಜ ಸುಧಾರಣೆಯಾಗಬೇಕು, ಜನರಲ್ಲಿ ಮೌಢ್ಯ ನಿವಾರಣೆಯಾಗದೆ ಅವರ ಆತ್ಮಕಲ್ಯಾಣ ಸಾಧ್ಯವಿಲ್ಲ. ‘‘ಅಹಿಂಸಾ ಪರಮೋ ಧರ್ಮಃ’’ ಎಂಬ ಜೈನಧರ್ಮದ ಮೂಲ ಮಂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತ್ಯಾಗ ಪ್ರಧಾನವಾದ ಜೈನಧರ್ಮದಲ್ಲಿ ಇಪ್ಪತ್ತನಾಲ್ಕನೆಯ ತೀರ್ಥಂಕರರಾಗಿ ಮಹಾವೀರ ಜನಿಸುತ್ತಾರೆ. ತನ್ನ ಹಿಂದಿನ ಇಪ್ಪತ್ತಮೂರು ತೀರ್ಥಂಕರುಗಳು ಪಾಲಿಸಿಕೊಂಡು ಬಂದಂತಹ ಅಹಿಂಸೆ, ತ್ಯಾಗ ಮೂಲವಾದ ಸಂಪ್ರದಾಯಕ್ಕೆ ಸ್ವಷ್ಟ ನಿಲುವು, ಸಮಕಾಲೀನ ವಿಚಾರಗಳನ್ನು ಅಳವಡಿಸುವುದರ ಮೂಲಕ ಜನಸಾಮಾನ್ಯರನ್ನು ಜೈನಧರ್ಮಕ್ಕೆ ಆಕರ್ಷಿಸಿದ ಕೀರ್ತಿ ಮಹಾವೀರರಿಗೆ ಸಲ್ಲಬೇಕು. 

Today Mahaveera Jayanthi

ಬೆಂಗಳೂರು (ಮಾ. 29): ಸಮಾಜ ಸುಧಾರಣೆಯಾಗಬೇಕು, ಜನರಲ್ಲಿ ಮೌಢ್ಯ ನಿವಾರಣೆಯಾಗದೆ ಅವರ ಆತ್ಮಕಲ್ಯಾಣ ಸಾಧ್ಯವಿಲ್ಲ. ‘‘ಅಹಿಂಸಾ ಪರಮೋ ಧರ್ಮಃ’’ ಎಂಬ ಜೈನಧರ್ಮದ ಮೂಲ ಮಂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ತ್ಯಾಗ ಪ್ರಧಾನವಾದ ಜೈನಧರ್ಮದಲ್ಲಿ ಇಪ್ಪತ್ತನಾಲ್ಕನೆಯ ತೀರ್ಥಂಕರರಾಗಿ ಮಹಾವೀರ ಜನಿಸುತ್ತಾರೆ. ತನ್ನ ಹಿಂದಿನ ಇಪ್ಪತ್ತಮೂರು ತೀರ್ಥಂಕರುಗಳು ಪಾಲಿಸಿಕೊಂಡು ಬಂದಂತಹ ಅಹಿಂಸೆ, ತ್ಯಾಗ ಮೂಲವಾದ ಸಂಪ್ರದಾಯಕ್ಕೆ ಸ್ವಷ್ಟ ನಿಲುವು, ಸಮಕಾಲೀನ ವಿಚಾರಗಳನ್ನು ಅಳವಡಿಸುವುದರ ಮೂಲಕ ಜನಸಾಮಾನ್ಯರನ್ನು ಜೈನಧರ್ಮಕ್ಕೆ ಆಕರ್ಷಿಸಿದ ಕೀರ್ತಿ ಮಹಾವೀರರಿಗೆ ಸಲ್ಲಬೇಕು. 

1. ವರ್ಧಮಾನ, ಸನ್ಮತಿ, ವೀರ, ಅತಿವೀರ ಎಂದೆಲ್ಲಾ ಹೆಸರುಗಳಿಂದ ಗುರುತಿಸಲ್ಪಡುವ ಮಹಾವೀರ ಹುಟ್ಟಿದ್ದು ಕ್ರಿ.ಪೂ. 599 ರಲ್ಲಿ. ಈಗಿನ ಬಿಹಾರದ ಬಸಾಢ (ಇದಕ್ಕೆ ವೈಶಾಲಿ ಎಂದೂ ಹೆಸರಿತ್ತು) ಈ ನಗರದ ದೊರೆ ಸಿದ್ಧಾರ್ಥ  ಹಾಗೂ ತ್ರಿಶಲಾ ದೇವಿಯ ಮಗುವಾಗಿ ಜನಿಸಿದ. ಹುಟ್ಟಿದಾಗ ‘ವರ್ಧಮಾನ’ ಎಂದೇ ನಾಮಕರಣ ಮಾಡಲಾಗಿತ್ತು. ರಾಜನ ಮಗನಾಗಿದ್ದರೂ ವೈಭೋಗದಲ್ಲಿ  ಆಸಕ್ತಿ ವಹಿಸದೆ ತನ್ನ ಧರ್ಮದ ಬಗ್ಗೆ ತಿಳಿದುಕೊಳ್ಳಲಾರಂಭಿದ. ಸಂಸಾರ ಬಂಧನ ಎನಿಸಲು ಪ್ರಾರಂಭವಾದ ಕೂಡಲೇ ತನ್ನ ೩೦ನೇ ವಯಸ್ಸಿನಲ್ಲಿ ಮನೆ ತೊರೆದು ಸುತ್ತಮುತ್ತಲಿನ ಆಗುಹೋಗುಗಳ ಕಡೆ ಗಮನಹರಿಸಿ ದೇಶ ಸಂಚಾರ ಕೈಗೊಂಡರು.

2.  ತನ್ನ ತಂದೆ ಸಿದ್ಧಾರ್ಥ ಪ್ರಜಾಪ್ರಭುತ್ವದ ತಳಹದಿಯ ಮೂಲಕ ಆರಿಸಿ  ಬಂದದ್ದನ್ನು ನೋಡಿದ್ದ ಮಹಾವೀರ, ಸ್ವತಂತ್ರದ ಕಲ್ಪನೆಯನ್ನು ಅಂದೇ ಮನಗಂಡಿದ್ದರು. ತಾನು ಸ್ವತಂತ್ರನಾಗುವುದು ಎಂದರೇ ತನ್ನ ಆತ್ಮ ಕಲ್ಯಾಣ ಮಾಡಿಕೊಳ್ಳುವುದೆಂದು ನಂಬಿದ್ದರು. ತನ್ನ ದೇಶ ಸಂಚಾರದ  ಸಮಯದಲ್ಲಿ ತನ್ನ ವಸ್ತ್ರವನ್ನು ತ್ಯಾಗ ಮಾಡಿದರು. ದಿಗಂಬರತ್ವದ ಮಹತ್ತೇ  ಬಯಲಾಗುವುದು. ಬೆತ್ತಲಾಗುವುದೆಂದರೆ ಕಿಂಚಿತ್ತೂ ತನ್ನದಲ್ಲವೆಂಬ ಭಾವನೆಯ ಮೊದಲ ತಿಳಿವಾದರೆ, ತನ್ನ ದೇಹದ ಮೇಲಿನ ಮಮತ್ವವನ್ನು ಬಿಟ್ಟು ಒಳಗಿನ ಆತ್ಮನ ಬಗ್ಗೆ ಸದಾ ಚಿಂತಿಸುವುದು ಎರಡನೆಯದು. ಮಲ, ಮೂತ್ರ, ಕ್ರಿಮಿ-ಕೀಟಗಳ ಈ ದೇಹಕ್ಕೆ ನಿರಂತರ ಅಲಂಕರಿಸುವ ನಾವು ಒಳಗಿನ ಸ್ವಚ್ಛತೆಯ ಅರಿವು ಅರಿಯದಾಗಿರುತ್ತೇವೆ ಎಂಬುದನ್ನು ಮನಗಂಡ ಮಹಾವೀರರು ತಮ್ಮನ್ನು ತಾವು ತಿಳಿದುಕೊಳ್ಳಲು ಸುಮಾರು ಹನ್ನೆರೆಡು ವರುಷ ತಪಸ್ಸು ಮಾಡುತ್ತಾರೆ. ತನ್ನೊಳಗಿನ  ಅನೇಕ ಪ್ರಶ್ನೆಗಳಿಗೆ ತನ್ನಲ್ಲಿಯೇ ಮೌನವಾಗಿ ಉತ್ತರವನ್ನು ಕಂಡುಕೊಂಡು ‘ಕೇವಲ
ಜ್ಞಾನಿ’ಯಾಗುತ್ತಾರೆ. ತಮ್ಮ ಆತ್ಮಕಲ್ಯಾಣದೊಂದಿಗೆ ಇತರರ ಆತ್ಮಕಲ್ಯಾಣದ  ಮಾರ್ಗವನ್ನು ಯಾರು ತೋರುತ್ತಾರೋ ಅವರು ತೀರ್ಥಂಕರರಾಗುತ್ತಾರೆ.

3. ಹನ್ನೆರಡು ವರ್ಷಗಳ ತಮ್ಮ ಅರಿವನ್ನು ವಿಸ್ತರಿಸಲು ಬಿಹಾರದ ಸುತ್ತ 30 ವರ್ಷಗಳ ಕಾಲ ಸಂಚರಿಸುವ ಮಹಾವೀರರು, ಜಾತಿ, ಉಪ  ಜಾತಿಗಳನ್ನು ವಿರೋಧಿಸುತ್ತಾರೆ. ಯಜ್ಞ-ಯಾಗಾದಿಗಳಿಗೆ ಬಲಿ  ಕೊಡುವುದನ್ನು ಖಂಡಿಸಿ ‘ಈ ಜಗತ್ತಿನಲ್ಲಿ ಮನುಷ್ಯನಿಗೆ ಬದುಕುವಷ್ಟೇ ಹಕ್ಕು ಎಲ್ಲಾ ಪ್ರಾಣಿ,ಕ್ರಿಮಿ-ಕೀಟಗಳಿಗೂ ಇದೆ. ಆದ್ದರಿಂದ ಯಾವುದನ್ನು ಹಿಂಸಿಸಬೇಡ, ನೀನೂ ಜೀವಿಸು ಇತರರನ್ನೂ ಜೀವಿಸಲು ಬಿಡು’ ಎಂಬ ಅವರ ಮಾತು ಲಕ್ಷಾಂತರ ಜನರ ಮನಗೆಲ್ಲುತ್ತದೆ. ಜನರಿಗೆ ಅರ್ಥವಾಗುವಂತೆ ಅರ್ಧಮಾಗಧಿ ಭಾಷೆಯಲ್ಲಿಯೇ ತಮ್ಮ ಮಾತುಗಳನ್ನು ಜನರಿಗೆ ತಲುಪಿಸುತ್ತಾ ಅವರ ಪ್ರೀತಿ ಗಳಿಸುತ್ತಾರೆ.

4.  ಮಹಾವೀರರಿಗಿಂತ ಹಿಂದಿನ ತೀರ್ಥಂಕರರಾದ ಪಾರ್ಶ್ವನಾಥರು ನಾಲ್ಕು ವ್ರತಗಳನ್ನು ಪಾಲಿಸಲು ಕರೆಕೊಟ್ಟಿದ್ದರು. ಆದರೆ ಮಹಾವೀರರು ಪಂಚಾಣುವ್ರತಗಳನ್ನು ಜನರಿಗೆ ತಿಳಿಸಿ ಹೇಳುತ್ತಾರೆ. ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಈ ತತ್ತ್ವಗಳು ಜೈನಧರ್ಮವು ವಿಶ್ವಧರ್ಮವೆಂದು ಜಗತ್ತಿಗೆ ತಿಳಿಸುವಲ್ಲಿ ಮಹತ್ತರವಾಗಿವೆ. ಅಹಿಂಸೆಯನ್ನು ಇಂದಿಗೂ ಸೂಕ್ಷ್ಮತೀ ಸೂಕ್ಷ್ಮವಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ದಿಗಂಬರ ಮುನಿಗಳು ತಮ್ಮ ಕೈಯಲ್ಲಿ ಬಿದ್ದ ನವಿಲುಗರಿಗಳಿಂದ ಮಾಡಿದ ‘ಪಿಂಛ’ದಿಂದ ತಾವು ಕುಳಿತುಕೊಳ್ಳುವ ಜಾಗದಲ್ಲಿ ಸೂಕ್ಷ್ಮ ಜೀವಿಗಳ ಸಾವಾಗದಂತೆ ಸಾವರಸಿ  ಕುಳಿತುಕೊಳ್ಳುತ್ತಾರೆ. ಅಸತ್ಯಕ್ಕೆ ಆ ಕ್ಷಣಕ್ಕೆ ಗೆಲ್ಲುವ ಶಕ್ತಿಯಿದೆ. ಆದರೆ ಸತ್ಯವೊಂದೇ ನಿತ್ಯ ಭಯವಿಲ್ಲದೆ ಬದುಕು ನಡೆಸಲು ಇರುವ ಸಾಧನ. ಅಸ್ತೇಯ ಅಂದರೆ ಕಳ್ಳತನ. ನಿನ್ನದೇ ನಿನ್ನ ಬಳಿ ಉಳಿಯಲಾರದು. ಪರರ ಗಂಟು ಉಳಿಯಬಹುದೇ ಎಂದು ಅರಿತು ನಡೆಯುವುದು ಕಷ್ಟಸಾಧ್ಯ. ಆದರೆ ಸತತ ಮನನ, ಚಿಂತನೆ ಹಾಗೂ
ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೌಲ್ಯಗಳಿಂದಾಗಿ ಇದು ಅಸಾಧ್ಯವಲ್ಲ. ಬ್ರಹ್ಮಚರ್ಯ ಎಂದರೆ ಮದುವೆಯಾಗದಿರುವುದು ಎಂಬ ಒಂದೇ ಅರ್ಥವಲ್ಲ. ಮದುವೆಯಾದ ಮೇಲೆಯೂ ತನ್ನ ಪತ್ನಿಯನ್ನು ಬಿಟ್ಟು ಬೇರೆಯ ಹೆಣ್ಣುಮಕ್ಕಳನ್ನು ಗೌರವಿ
ಸುವ ಹಾಗೂ ಅವರನ್ನು ಅಕ್ಕ-ತಂಗಿಯರೆಂದು ತಿಳಿದುಕೊಳ್ಳುವುದು ಮುಖ್ಯ.

5.  ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ, ಸಮ್ಯಕ್ ಚಾರಿತ್ರ್ಯ ಇವು ಜೈನಧರ್ಮದ ಪ್ರಮುಖ ತತ್ತ್ವಗಳು. ಇದನ್ನು ಮಹಾವೀರರು  ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಿಳಿಸುತ್ತಾರೆ. ಸದಾ ಕಾಲ ಒಳ್ಳೆಯದ್ದನ್ನೇ ನೋಡು, ಅದರಿಂದಾಗಿ ಒಳ್ಳೆಯ ಜ್ಞಾನ ಸಂಚಯವಾಗುತ್ತದೆ, ಒಳ್ಳೆಯ ಜ್ಞಾನ ನಿನ್ನ ಒಳ್ಳೆಯ ನಡತೆಗೆ ಕಾರಣವಾಗುತ್ತದೆ ಎಂಬ ಅಂದಿನ ಮಾತುಗಳು ಇಂದಿನ ಕಾಲಘಟ್ಟದಲ್ಲಿಯೂ ಮತ್ತೆ ಮತ್ತೆ ಚಿಂತನೆಗೆ ಒಳಡಿಸುತ್ತವೆ.

6.  ಅಪರಿಗ್ರಹ ಪರಿಕಲ್ಪನೆ ವಿಶಿಷ್ಟವಾದುದು. ಲೌಕಿಕ ಮತ್ತು ಧಾರ್ಮಿಕ ಎರಡು ಸ್ತರಗಳಲ್ಲಿಯೂ ಇದರ ವಿವೇಚನೆಯಿದೆ. ಬದುಕನ್ನು ಸಾಗಿಸಲು ಬೇಕಾಗುವ ಸಾಮಗ್ರಿಗಳನ್ನು ಸಂಗ್ರಹಿಸಿ, ಸಂರಕ್ಷಿಸುವುದು ಪರಿಗ್ರಹವಾಗಿದೆ. ಇವುಗಳ ಸಂಗ್ರಹಣೆಗೆ ಸ್ವಇಚ್ಛೆಯಿಂದ ಮಿತಿಯನ್ನು ಹಾಕಿಕೊಳ್ಳುವುದು  ಅಪರಿಗ್ರಹ. ಹೊರಗಿನ ಬದುಕಿನಲ್ಲಿ ಭೂಮಿ, ಮನೆ, ಚಿನ್ನ,ಬೆಳ್ಳಿ, ಧನ-ಧಾನ್ಯ ಹೀಗೆ ಸಂಸಾರಕ್ಕೆ ಬೇಕಾದದ್ದನ್ನೆಲ್ಲಾ ಬೇಕು ಬೇಕು ಎನ್ನುವುದಕ್ಕೆ ಬ್ರೇಕ್ ಹಾಕದೆ ಸಂಗ್ರಹಿಸುವುದು
ಒಂದು ರೀತಿಯಾದರೆ, ಅಂತರಂಗದಲ್ಲಿ ನಾನು, ನನ್ನವು, ನನಗೆ, ನಮ್ಮವರು ಎಂಬ ಭಾವನೆಗಳನ್ನು ತ್ಯಜಿಸುವುದು ಅಪರಿಗ್ರಹವೆಂದು ಮಹಾವೀರರು ನಂಬಿದ್ದರು. ಮನುಷ್ಯನ ದುರಾಸೆಯಿಂದಲೇ ಇಂದು ಈ ಜಗತ್ತು ಅಳಿವಿನಂಚಿಗೆ ಸರಿಯುತ್ತಿದೆ. ತನ್ನ  ಸ್ವಾರ್ಥಕ್ಕೆ ತನ್ನ ಸುತ್ತಲಿನ ಪರಿಸರ, ನೆಲ, ಜಲ, ವಾಯುವನ್ನು ಮಲಿನಗೊಳಿಸುತ್ತಿರುವ ನಮಗೆ ಮಹಾವೀರ ಮಾತುಗಳು ಮಾರ್ಗದರ್ಶಕ ವಾಗಬೇಕು. ಸಮಾಜ ಮತ್ತು ಧರ್ಮ ಸುಧಾರಣೆ ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಇದೆ. ಬುದ್ಧ, ಬಸವ, ಅಂಬೇಡ್ಕರಂತವರು ತಮ್ಮ ತಮ್ಮ ಕಾಲಘಟ್ಟದಲ್ಲಿ ಕಂಡ ಸಾಮಾಜಿಕ, ಧಾರ್ಮಿಕ ಅನಿಷ್ಠಗಳನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

7.  ಇಕ್ಷ್ವಾಕು ವಂಶದಲ್ಲಿ ಜನಿಸಿ, ವೈಭವದ ಜೀವನದಲ್ಲಿ ಬದುಕು ನಡೆಸಬಹುದಾದ ಎಲ್ಲಾ ಬಾಗಿಲುಗಳನ್ನು ಮುಚ್ಚಿ, ತನ್ನೊಳಗಿನ ಜ್ಞಾನದ ಬಾಗಿಲನ್ನು ತೆರೆದು, ತನ್ನ ಸುತ್ತಲಿನ ಜನರ ಬದುಕು ಹೊಸ ಅರ್ಥ ಕಂಡುಕೊಳ್ಳುವಂತೆ ಮಾಡುವಲ್ಲಿ ತನ್ನ ಜೀವನದ ಬಹುಪಾಲು ಸಮಯವನ್ನು  ಕಳೆದ ಮಹಾವೀರರು ನಳಂದ ಬಳಿಯ ಪಾವಾಪುರಿಯಲ್ಲಿ ತಮ್ಮ 72 ನೇ ವಯಸ್ಸಿನಲ್ಲಿ ನಿರ್ವಾಣ ಹೊಂದುತ್ತಾರೆ. ಪ್ರಾಚೀನ ಧರ್ಮಗಳಲ್ಲಿ ಒಂದಾದ ಜೈನಧರ್ಮಕ್ಕೆ ಜೊಸ ನೆಲೆಯನ್ನು ತಂದುಕೊಟ್ಟ ಮಹಾವೀರರು ತಮ್ಮ ನಡೆ, ನುಡಿ, ಆಚಾರ-ವಿಚಾರಗಳಿಂದ ಜನ ಮಾನಸವನ್ನು ಗೆದ್ದವರು. ಜೈನಧರ್ಮವನ್ನು ವಿಶ್ವಧರ್ಮವಾಗಿ ಎತ್ತಿಹಿಡಿದು, ತಮ್ಮ ತಾತ್ತ್ವಿಕ ಚಿಂತನೆಗಳಿಂದ ಭಾರತದಲ್ಲಿ ಧರ್ಮ ಪ್ರವರ್ತಕರೆಂದು ಕರೆಸಿಕೊಂಡವರ ಸಾಲಿನಲ್ಲಿ ಭಗವಾನ ಮಹಾವೀರ ಹೆಸರು ಚಿರಸ್ಥಾಯಿಯಾದದ್ದು. 

Follow Us:
Download App:
  • android
  • ios