ಈ ಹಿಂದೆ ಬೆಳ್ಳಂದೂರು ಕೆರೆ ಕೋಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು, ಇದೀಗ ಮತ್ತೊಮ್ಮೆ ಬೆಂಕಿಯ ಕೆನ್ನಾಲಿಗೆ ಕೆರೆಯನ್ನು ಆವರಿಸಿರುವುದು ಸ್ಥಳಿಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಬೆಂಗಳೂರು(ಫೆ.16): ಈ ಹಿಂದೆ ವಿಷಪೂರಿತ ನೊರೆಯಿಂದ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ಬೆಂಗಳೂರಿನ ಬೆಳ್ಳಂದುರು ಕೆರೆಯಲ್ಲಿ ಇದೀಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು, ಆಕಾಶದೆತ್ತರಕ್ಕೆ ಹೊಗೆ ಅವರಿಸಿಕೊಂಡಿದ್ದು ಬೆಂಗಳೂರಿನ ಜನರಲ್ಲಿ ಅತಂಕ ಮೂಡಿಸಿದೆ.

Add Asianetnews Kannada as a Preferred SourcegooglePreferred

ಹೀಗೆ ಕೆರೆಯಲ್ಲಿನ ವಾಟರ್ ಸೊಪ್ಪಿನಲ್ಲಿ ಚಿಟಪಟ ಎಂದು ಸದ್ದು ಮಾಡುತ್ತ ಉರಿಯುತ್ತಿರುವ ಬೆಂಕಿ, ಆಕಾಶದೆತ್ತರಕ್ಕೆ ಆವರಿಸಿಕೊಂಡಿರುವ ದಟ್ಟ ಹೊಗೆ. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಬೆಂಗಳೂರಿನ ಬೆಳ್ಳಂದೂರಿನ ಕೆರೆಯಲ್ಲಿ. ಬೆಳ್ಳಂದುರು ಕೆರೆಯ ಇಬ್ಬಲೂರು ಸಮೀಪ ಇಂದು ಸಂಜೆ 4 ಗಂಟೆ ಸುಮಾರಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟುಮಾಡಿದೆ. ಈ ಹಿಂದೆ ಬೆಳ್ಳಂದೂರು ಕೆರೆ ಕೋಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು, ಇದೀಗ ಮತ್ತೊಮ್ಮೆ ಬೆಂಕಿಯ ಕೆನ್ನಾಲಿಗೆ ಕೆರೆಯನ್ನು ಆವರಿಸಿರುವುದು ಸ್ಥಳಿಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ 3 ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಇನ್ನು ಬೆಂಗಳೂರಿನ ಕೆರೆಗಳ ಪೈಕಿ ಇದು ದೊಡ್ಡ ಕೆರೆಯಾಗಿದ್ದು, ಸುಮರು 891 ಎಕರೆಯಷ್ಟು ವಿಸ್ತೀರ್ಣವುಳ್ಳದ್ದಾಗಿದೆ. ಬೆಳ್ಳಂದೂರು ಕೆರೆ ಜಂಡು ಸೊಪ್ಪು ಮತ್ತು ನೊರೆಯಿಂದ ತುಂಬಿ ಹೋಗಿದ್ದು, ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿ ಸುತ್ತಮುತ್ತಲ ಪ್ರದೇಶವೆಲ್ಲ ಕಾರ್ಮೋಡ ಕವಿದಂತಾಗಿದೆ, ಕೆರೆಗಳಿಗೆ ನೇರವಾಗಿ ರಾಸಾಯನಿಕಗಳು ಮತ್ತು ಒಳಚರಂಡಿ ನೀರು ಸೇರುತ್ತಿರುವುದರಿಂದ ಬೆಳ್ಳಂದೂರು ಕೆರೆ ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ನೀರಿನಲ್ಲಿ ಮಿಶ್ರಿತ ಗೊಂಡಿರುವ ರಾಸಾಯನಿಕದಿಂದ ಬೆಂಕಿ ಹೊತ್ತಿಕೊಂಡಿದೆಯೆ, ಇಲ್ಲವೆ ಯಾರಾದರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೊ ಎಂಬ ಅನುಮಾನಗಳು ಕಾಡತೊಡಗಿದೆ.

ಒಟ್ಟಿನಲ್ಲಿ ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ಬೆಳ್ಳಂದೂರು ಕೆರೆ ಇದೀಗ ಜನರ ಜೀವಕ್ಕೆ ಕುತ್ತು ತರುವಂತ ಸ್ಥಿತಿಗೆ ತಲುಪಿದ್ದರು ಸಂಬಂದಪಟ್ಟ ಅಧಿಕಾರಿಗಳು ಕೆರೆ ಅಭಿವೃದ್ದಿಯತ್ತ ಗಮನಹರಿಸದೆ ಇರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಇನ್ನಾದರು ಕೆರೆ ಅಭಿವೃದ್ದಿಯತ್ತ ಗಮನ ಹರಿಸುತ್ತಾರ ಎಂಬುದನ್ನು ಕಾದುನೋಡಬೇಕಿದೆ.