CRPF ಸಬ್ ಇನ್ಸ್ ಪೆಕ್ಟರ್ ಈ ನಿರ್ಧಾರಕ್ಕೆ ಸಲಾಂ ಎನ್ನದಿರಲು ಸಾಧ್ಯವೇ ಇಲ್ಲ| ಗಡಿಯಲ್ಲಿ ದೇಶ ಕಾಯೋ ಯೋಧನ ಈ 'ವಿನಯ'ವಂತ ನಡೆ ಎಲ್ಲರಿಗೂ ಮಾದರಿ|

ನವದೆಹಲಿ[ಏ.05]: ಪುಲ್ವಾಮಾ ದಾಳಿ ಬಳಿಕ ದೇಶದೆಲ್ಲೆಡೆ ದುಃಖ ಹಾಗೂ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ಬಳಿಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ದೇಶದೆಲ್ಲೆಡೆಯಿಂದ ಜನರು ಸಹಾಯಹಸ್ತ ಚಾಚಿದ್ದರು. ಆದರೀಗ CRPF ಉಪ ನಿರೀಕ್ಷಕ ವಿಕಾಸ್ ಖಡ್ಗಾವತ್ ಹುತಾತ್ಮ ಯೋಧರ ಕುಟುಂಬಕ್ಕೆ ಸಹಾಯ ಮಾಡಲು ವಿಭಿನ್ನ ಮಾರ್ಗ ಅನುಸರಿಸಿದ್ದಾರೆ. ಇದಕ್ಕಾಗಿ ತಮ್ಮ ಮದುವೆಗೆ ಉಡುಗೊರೆಯಾಗಿ ಬಂದ ಹಣವನ್ನು 'ಭಾರತ್ ಕೆ ವೀರ್ ಫಂಡ್'ಗೆ ನೀಡುವುದಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನೀವು ನೀಡುವ ಎಲ್ಲಾ ಉಡುಗೊರೆಗಳನ್ನು CRPF ಫಂಡ್ ಗೆ ನೀಡಲಿದ್ದೇನೆ ಎಂದೂ ಮುದ್ರಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಿಕಾಸ್ ಖಡ್ಘಾವತ್ 'ನನ್ನ ತಂದೆ ಮದುವೆಗೆ ಆಗಮಿಸುವ ಅತಿಥಿಗಳಿಂದ ಉಡುಗೊರೆ ಪಡೆಯುವುದು ಬೇಡ ಎಂದು ನಿರ್ಧರಿಸಿದ್ದರು. ಆದರೆ ಅತಿಥಿಗಳು ಬೇಡ ಎಂದರೂ ಉಡುಗೊರೆಗಳನ್ನು ತರುತ್ತಾರೆ. ಹೀಗಾಗಿ ಈ ಉಡುಗೊರೆಗಳನ್ನು CRPF ಫಂಡ್ ಗೆ ದಾನ ಮಾಡುವ ನಿರ್ಧಾರ ಮಾಡಿದ್ದೇವೆ. ಮದುವೆ ದಿನ ಬರುವ ಅತಿಥಿಗಳಿಗೆ ತಂದಿರುವ ಉಡುಗೊರೆ ಹಾಗೂ ಹಣವನ್ನು ಹಾಕಲು ಬಾಕ್ಸೊಂದನ್ನು ಇಡುತ್ತೇವೆ. ಇದರಲ್ಲಿ ಹಾಕಲಾಗುವ ಎಲ್ಲಾ ಉಡುಗೊರೆ ಹಾಗೂ ಮೊತ್ತವನ್ನು 'ಭಾರತ್ ಕೆ ವೀರ್ ಫಂಡ್'ಗೆ ಹಸ್ತಾಂತರಿಸಲು ಜಿಲ್ಲಾಧಿಕಾರಿಯ ಕಚೇರಿಗೆ ನೀಡುತ್ತೇವೆ' ಎಂದಿದ್ದಾರೆ.

ಮಗನ ಮದುವೆ ಕುರಿತಾಗಿ ಮಾತನಾಡಿರುವ ವಿಕಾಸ್ ತಂದೆ 'ನನ್ನ ಮಗ ಒಬ್ಬ ಅಧಿಕಾರಿ ಆಗಿದ್ದರೆ, ದುಪ್ಪಟ್ಟು ವರದಕ್ಷಿಣೆ ಬರಬೇಕೆಂಬ ಜಯೋಚನೆ ಸಮಾಜದಲ್ಲಿದೆ. ಆದರೆ ನಾನು ಇಂತಹ ಪದ್ಧತಿ ಅನುಸರಿಸುವ ಸಮಾಜಕ್ಕೆ ಹೀಗೆ ಮಾಡಬಾರದೆಂಬ ಸಂದೇಶ ನೀಡುತ್ತೇನೆ. ಯುವ ಜನರು ಇದನ್ನು ಪಾಲಿಸಬೇಕು ಹಾಗೂ ವರದಕ್ಷಿಣೆ ವಿರೋಧಿಸಬೇಕು' ಎಂದಿದ್ದಾರೆ.

'ಭಾರತ್ ಕೆ ವೀರ್ ಫಂಡ್' ಅರೆಸೇನಾ ಪಡೆಯ ಸಿಬ್ಬಂದಿಗಳಿಗಾಗಿ ರೂಪಿಸಲಾಗಿದೆ. ಇದು ಕೇಂದ್ರ ಗೃಹ ಇಲಾಖೆಯ ಸುಪರ್ಧಿಯಲ್ಲಿದೆ. ಯಾವುದೇ ಒಬ್ಬ ವ್ಯಕ್ತಿ ಈ ಫಂಡ್ ಗೆ 15 ಲಕ್ಷ ರೂಪಾಯಿವರೆಗೆ ದಾನ ಮಾಡಬಹುದು. ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಈ ಡೊನೇಷನ್ ಫಂಡ್ ಆರಂಭಿಸಲಾಗಿತ್ತು. ಇಲ್ಲಿಗೆ ಬಂದ ಹಣವನ್ನು ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ದಾನ ಮಾಡಲಾಗಿತ್ತು.

ಪುಲ್ವಾಮಾ ದಾಳಿಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ: https://bit.ly/2T04dHm