ಅಮಾವಾಸ್ಯೆ ದಿನವೇ ಗಡಿಯೊಳಕ್ಕೆ ಒಳನುಸುಳ್ತಾರೆ ಭಯೋತ್ಪಾದಕರು!| ನಸುಕಿನ 2ರಿಂದ 5: ಉಗ್ರ ಅಚ್ಚುಮೆಚ್ಚಿನ ಸಮಯ| ಎನ್‌ಐಎ ತನಿಖೆಯಿಂದ ಬೆಳಕಿಗೆ

ಶ್ರೀನಗರ[ಅ.01]: ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತಲೇ ಬಂದಿರುವ ಪಾಕಿಸ್ತಾನ ಮೂಲದ ಭಯೋತ್ಪಾದಕರು ಅಂತಾರಾಷ್ಟ್ರೀಯ ಗಡಿಯೊಳಕ್ಕೆ ಒಳನುಸುಳಲು ಅಮಾವಾಸ್ಯೆ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

Add Asianetnews Kannada as a Preferred SourcegooglePreferred

ಇತ್ತೀಚಿನ ವರ್ಷಗಳಲ್ಲಿ ನಡೆದ ಒಳನುಸುಳವಿಕೆ ಪ್ರಯತ್ನ, ಭಯೋತ್ಪಾದಕ ದಾಳಿಗಳನ್ನು ವಿಸ್ತೃತವಾಗಿ ಪರಿಶೀಲನೆಗೆ ಒಳಪಡಿಸಿದಾಗ, ಅಮಾವಾಸ್ಯೆ ದಿನದಂದು ನಸುಕಿನ ಜಾವ 2ರಿಂದ 5ರ ನಡುವಣ ಅವಧಿಯಲ್ಲಿ ಉಗ್ರರು ಅಂತಾರಾಷ್ಟ್ರೀಯ ಗಡಿಯೊಳಕ್ಕೆ ನುಗ್ಗುತ್ತಾರೆ. ಈ ಸಂದರ್ಭದಲ್ಲಿ ರಾತ್ರಿ ನಿಗಾ ವಹಿಸಬೇಕಾದ ಕ್ಯಾಮೆರಾಗಳು ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವುದಿಲ್ಲ ಎಂಬ ವಿಷಯ ಗೊತ್ತಾಗಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಕುರಿತು ವರದಿಯೊಂದನ್ನು ಸಿದ್ಧಪಡಿಸಿದ್ದು, ಅದನ್ನು ಜಮ್ಮು-ಕಾಶ್ಮೀರ ಪೊಲೀಸರ ಜತೆ ಹಂಚಿಕೊಂಡಿದೆ. ಉಗ್ರರ ಕರೆ ವಿವರ, ಐಕಾಂ ವಿಎಚ್‌ಎಫ್‌ ಸೆಟ್‌, ಬಂಧಿತ ಉಗ್ರರ ಹೇಳಿಕೆಯನ್ನು ಆಧರಿಸಿ ಈ ವರದಿಯನ್ನು ತಯಾರಿಸಲಾಗಿದೆ.

2016ರಿಂದ 2018ರ ಅವಧಿಯಲ್ಲಿ 20ಕ್ಕೂ ನಗರೋಟಾ ಸೇರಿದಂತೆ ಕಾಶ್ಮೀರದ ವಿವಿಧೆಡೆ ಭಯೋತ್ಪಾದಕರು 20 ಯೋಧರನ್ನು ಹತ್ಯೆಗೈದಿದ್ದಾರೆ. ಈ ದಾಳಿಕೋರರು ಸಾಂಬಾ- ಜಮ್ಮು- ಉಧಂಪುರ ಹಾಗೂ ಸಾಂಬಾ- ಮನ್ಸಾ- ಉಧಂಪುರ ಮಾರ್ಗದಲ್ಲಿ ಬಂದಿದ್ದಾರೆ. ಈ ರೀತಿ ಬಂದವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಕಾಶ್ಮೀರದಲ್ಲಿರುವ ಅವರ ಬೆಂಬಲಿಗರು ಟ್ರಕ್‌ಗಳನ್ನು ವ್ಯವಸ್ಥೆ ಮಾಡಿರುತ್ತಾರೆ. ಒಳನುಸುಳುವ ಎರಡು ದಿನ ಮೊದಲು ಗಡಿಯಲ್ಲಿ ಉಗ್ರರು ಆಗಮಿಸಿರುತ್ತಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.