ಜ್ಯೋತಿಷ್ಯ ಆಧರಿಸಿ ನವೆಂಬರ್ ನಲ್ಲಿ ಚುನಾವಣೆ ಪ್ರಕ್ರಿಯೆ
ಜ್ಯೋತಿಷ್ಯ ಆಧರಿಸಿ ಅಕ್ಟೋಬರ್ ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿ ನವೆಂಬರ್ ವೇಳೆ ಚುನಾವಣೆ ಪ್ರಕ್ರಿಯೆ ಮುಗಿದು, ಡಿಸೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಬಹುದು ಎಂದು ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಹೇಳಿದ್ದು ಇದಕ್ಕೆ ಚುನಾವಣಾ ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ‘ಜ್ಯೋತಿಷ್ಯ ಆಧರಿಸಿ’ ಅವಧಿಪೂರ್ವ ಚುನಾವಣೆ ನಡೆಸುವ ನಿರ್ಧಾರ ಹಾಗೂ ‘ಅಕ್ಟೋಬರ್ ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗಿ ನವೆಂಬರ್ ವೇಳೆ ಚುನಾವಣೆ ಪ್ರಕ್ರಿಯೆ ಮುಗಿದು, ಡಿಸೆಂಬರ್ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟವಾಗಬಹುದು’ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ತೆಲಂಗಾಣದ ನಿರ್ಗಮಿತ ಸಿಎಂ ಕೆ. ಚಂದ್ರಶೇಖರರಾವ್ ವಿರುದ್ಧ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್ ರಾವತ್ ಕಿಡಿಕಾರಿದ್ದಾರೆ.
‘ರಾವ್ ಅವರ ಹೇಳಿಕೆಗಳು ಅಸಮಂಜಸ ಹಾಗೂ ಅನಪೇಕ್ಷಿತ. ಜ್ಯೋತಿಷ್ಯ ಆಧರಿಸಿ ನಾವು ಚುನಾವಣೆ ನಡೆಸೋಕಾಗಲ್ಲ. ವಸ್ತುಸ್ಥಿತಿ ಪರಿಶೀಲಿಸಿ ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ ಮತ್ತು ರಾಜಸ್ಥಾನಚುನಾವಣೆಯ ಜತೆಗೆ ಇಲ್ಲೂ ಚುನಾವಣೆ ನಡೆಸಬಹುದೇ ಎಂಬುದನ್ನು ತೀರ್ಮಾನಿಸಲಾಗುವುದು’ ಎಂದು ರಾವತ್ ಶುಕ್ರವಾರ ಅತೃಪ್ತಿ ಹೊರಹಾಕಿದರು.
ಆದರೆ ಉಸ್ತುವಾರಿ ಸರ್ಕಾರವು ಪರಿಸ್ಥಿತಿಯ ಲಾಭ ಪಡೆಯದಂತಾಗಲು ತಡ ಮಾಡದಂತೆ ಚುನಾವಣೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.