ತೆಲಂಗಾಣ ಎಂಜಿನಿಯರ್ ಹತ್ಯೆಗೆ ಐಎಸ್ಐ ನಂಟು..!
ಪ್ರಣಯ್ ಕುಮಾರ್ ಎಂಬ ಎಂಜಿನಿಯರ್ ಕೊಲ್ಲಲು ಈ ಗ್ಯಾಂಗ್ 1 ಕೋಟಿ ರು.ಗೆ ಸುಪಾರಿ ಪಡೆದಿತ್ತು. ಆ ಪೈಕಿ 18 ಲಕ್ಷ ರು. ಹಣವನ್ನು ಮುಂಗಡವಾಗಿ ಪಡೆದುಕೊಂಡಿತ್ತು. 2003ರಲ್ಲಿ ಹತ್ಯೆಯಾದ ಗುಜರಾತಿನ ಸಚಿವ ಹರೇನ್ ಪಾಂಡ್ಯ ಪ್ರಕರಣದಲ್ಲಿ ಈ ಗ್ಯಾಂಗ್ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿತ್ತು ಎಂದು ಹೇಳಲಾಗಿದೆ.
ನಲ್ಗೊಂಡಾ[ಸೆ.19]: ತೆಲಂಗಾಣದ 23 ವರ್ಷದ ಎಂಜಿನಿಯರ್ವೊಬ್ಬರನ್ನು ಅವರ ಗರ್ಭಿಣಿ ಪತ್ನಿಯ ಸಮ್ಮುಖವೇ ಕೊಂದು ಹಾಕಿದ ಘಟನೆಗೆ ರೋಚಕ ತಿರುವು ಸಿಕ್ಕಿದೆ. ಹಂತಕ ಸೇರಿದಂತೆ ಎಲ್ಲ ಏಳು ಆರೋಪಿಗಳನ್ನು ತೆಲಂಗಾಣ ಪೊಲೀಸರು ಬಿಹಾರದಲ್ಲಿ ಬಂಧಿಸಿದ್ದು, ಆರೋಪಿಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ನಂಟಿಗೆ ಎಂದು ಹೇಳಲಾಗಿದೆ.
ಪ್ರಣಯ್ ಕುಮಾರ್ ಎಂಬ ಎಂಜಿನಿಯರ್ ಕೊಲ್ಲಲು ಈ ಗ್ಯಾಂಗ್ 1 ಕೋಟಿ ರು.ಗೆ ಸುಪಾರಿ ಪಡೆದಿತ್ತು. ಆ ಪೈಕಿ 18 ಲಕ್ಷ ರು. ಹಣವನ್ನು ಮುಂಗಡವಾಗಿ ಪಡೆದುಕೊಂಡಿತ್ತು. 2003ರಲ್ಲಿ ಹತ್ಯೆಯಾದ ಗುಜರಾತಿನ ಸಚಿವ ಹರೇನ್ ಪಾಂಡ್ಯ ಪ್ರಕರಣದಲ್ಲಿ ಈ ಗ್ಯಾಂಗ್ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿತ್ತು ಎಂದು ಹೇಳಲಾಗಿದೆ.
ಹಂತಕರಿಗೆ ಸುಪಾರಿ ನೀಡಿದ್ದು ಯಾರು ಎಂಬುದು ಬಹಿರಂಗವಾಗಿಲ್ಲವಾದರೂ, ತನ್ನ ತಂದೆ ಮಾರುತಿ ರಾವ್ ಹಾಗೂ ಚಿಕ್ಕಪ್ಪ ಶ್ರವಣ್ ರಾವ್ ಅವರೇ ಇದನ್ನೆಲ್ಲಾ ಮಾಡಿಸಿದ್ದಾರೆ ಎಂದು ಹತ್ಯೆಗೀಡಾದ ಪ್ರಣಯ್ ಪತ್ನಿ ಅಮೃತವರ್ಷಿಣಿ ರಾವ್ ಆರೋಪ ಮಾಡಿದ್ದಾರೆ.
ಏನಿದು ಪ್ರಕರಣ?:
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಮಾರುತಿ ರಾವ್ ಅವರ ಪುತ್ರಿ ಅಮೃತವರ್ಷಿಣಿ ಹಾಗೂ ಪ್ರಣಯ್ ಶಾಲಾ ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದರು. ಕಾಲೇಜು ವ್ಯಾಸಂಗವನ್ನೂ ಒಟ್ಟಿಗೇ ಮಾಡಿದ್ದರು. ಕಳೆದ ಜನವರಿಯಲ್ಲಿ ವಿವಾಹವಾಗಿದ್ದರು. ಪ್ರಣಯ್ ಪರಿಶಿಷ್ಟಜಾತಿಗೆ ಸೇರಿದವನು ಎಂಬ ಕಾರಣಕ್ಕೆ ಮಾರುತಿ ರಾವ್ ಅವರಿಗೆ ಈ ವಿವಾಹ ಇಷ್ಟವಿರಲಿಲ್ಲ ಎನ್ನಲಾಗಿದೆ.
22 ವರ್ಷದ ಅಮೃತ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ನಲ್ಗೊಂಡಾದ ಆಸ್ಪತ್ರೆಗೆ ತಪಾಸಣೆಗೆಂದು ಪ್ರಣಯ್ ಕರೆದೊಯ್ದಿದ್ದರು. ಆಸ್ಪತ್ರೆಯಿಂದ ವಾಪಸ್ ಬರುವಾಗ ವ್ಯಕ್ತಿಯೊಬ್ಬ ಬಂದು ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿದ್ದ. ಕುಸಿದುಬಿದ್ದ ಪ್ರಣಯ್ ಮೃತಪಟ್ಟಿದ್ದರು. ಈ ಘಟನೆ ಆಸ್ಪತ್ರೆಯ ಸಿಸಿಟೀವಿಯಲ್ಲಿ ಸೆರೆಯಾಗಿತ್ತು.