ಕಾಂಗ್ರೆಸ್ ತೊರೆದ ಮುಖಂಡ : ಯಾವ ಪಕ್ಷದತ್ತ ಒಲವು?
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ತೆಲಂಗಾಣ ಕಾಂಗ್ರೆಸ್ ಗೆ ಶಾಕ್ ಎದುರಾಗಿದೆ. ಕಾಂಗ್ರೆಸ್ ಮುಖಂಡರೋರ್ವರು ಪಕ್ಷ ತೊರೆದಿದ್ದಾರೆ.
ಹೈದ್ರಾಬಾದ್ : ತೆಲಂಗಾಣ ಕಾಂಗ್ರೆಸ್ ವಕ್ತಾರ ಕ್ರಿಶಾಂಕ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಟಿಆರ್ ಎಸ್ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ್ದಾರೆ.
ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಅವರಿಂದ ನಿರಾಶರಾಗಿದ್ದು, ಮಾಡಿದ ಕೆಲಸಕ್ಕೆ ಯಾವುದೇ ಸೂಕ್ತ ಪ್ರತಿಕ್ರಿಯೆ ಇಲ್ಲ. ಅಲ್ಲದೇ ಪಕ್ಷಕ್ಕಾಗಿ ದುಡಿದರೂ ಅದನ್ನು ಗುರುತಿಸುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಅಲ್ಲದೇ ರೆಡ್ಡಿಯಿಂದ ಸಂಪೂರ್ಣ ಕಾಂಗ್ರೆಸ್ ತೆಲಂಗಾಣದಲ್ಲಿ ಸರ್ವನಾಶವಗಲಿದೆ ಎಂದಿದ್ದಾರೆ. ಅಲ್ಲದೇ ಕೆಟಿ ರಾಮರಾವ್ ನೇತೃತ್ವದಲ್ಲಿ ಟಿಆರ್ ಎಸ್ ಸೇರ್ಪಡೆಯಾಗುವುದಾಗಿಯೂ ಹೇಳಿದ್ದಾರೆ.
ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಇದೇ ವೇಳೆ ನಡೆದ ಈ ಬೆಳವಣಿಗೆ ಕಾಂಗ್ರೆಸ್ ಗೆ ಶಾಕ್ ನೀಡಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿಯೂ ಕೂಡ ಪಕ್ಷಾಂತರ ಪರ್ವ ಜೋರಾಗಿದೆ.
ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ.