ಸೇನೆಯಲ್ಲಿ ಭ್ರಷ್ಟಾಚಾರ: ಇನ್ನೊಂದು ವಿಡಿಯೋ ಸ್ಫೋಟಿಸಿದ ತೇಜ್ ಬಹಾದ್ದೂರ್
ನನ್ನ ವಿಆರ್’ಎಸ್ ತಡೆ ಹಿಡಿಯಲಾಗಿದೆ, ನನ್ನ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ; ಯೋಧನೊಬ್ಬ ಭ್ರಷ್ಟಾಚಾರವನ್ನು ಹೊರಗೆಡಹಿದ್ದಕೆ ಆತನಿಗೆ ಅನ್ಯಾಯವೆಸಗಲಾಗುತ್ತಿರುವುದು ಸರೀನಾ ಎಂದು ದೇಶದ 125 ಕೋಟಿ ಜನರು ಪ್ರಧಾನಿಯವರನ್ನು ಕೇಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತೇಜ್ ಬಹಾದ್ದೂರ್ ಹೇಳಿದ್ದಾರೆ.
ಭಾರತೀಯ ಸೇನೆಯಲ್ಲಿ ಯೋಧರಿಗೆ ನೀಡಲಾಗುತ್ತಿರುವ ಕಳಪೆ ಗುಣಮಟ್ಟ ಆಹಾರ ಹಾಗೂ ಅವ್ಯವಹಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್’ಲೋಡ್ ಮಾಡಿ ದೇಶಾದ್ಯಂತ ಸಂಚಲನ ಮೂಡಿಸಿದ್ದ ಬಿಎಸ್’ಎಫ್ ಯೋಧ ತೇಜ್ ಬಹಾದ್ದೂರ್ ಇನ್ನೊಂದು ವಿಡಿಯೋವನ್ನು ಅಪ್’ಲೋಡ್ ಮಾಡಿದ್ದಾರೆ.
ಇಂಡಿಯಾ ಎಂಬ ಯೂಟ್ಯೂಬ್ ಚಾನೆಲ್’ನಲ್ಲಿ 26 ಫೆಬ್ರವರಿಗೆ ಅಪ್’ಲೋಡ್ ಮಾಡಲಾಗಿರುವ ಒಂದೂವರೆ ನಿಮಿಷಗಳ ವಿಡಿಯೋನಲ್ಲಿ ತೇಜ್ ಬಹಾದ್ದೂರ್, ತನ್ನ ಹಿಂದಿನ ವಿಡಿಯೋಗಾಗಿ ಕಿರುಕುಳ ಹಾಗೂ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದ್ದೇನೆಯೆಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಮೊಬೈಲ್ ಫೋನಿನಲ್ಲಿ ಏನೋ ಕಿತಾಪತಿ ಮಾಡುವ ಮೂಲಕ ನಾನು ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದೇನೆಂದು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆ. ದೇಶದ ಜನತೆ ಸುಳ್ಳು ವದಂತಿಗಳನ್ನು ನಂಬಬಾರದೆಂದೂ, ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತೇಜ್ ಬಹಾದ್ದೂರ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಸ್ವತ: ದೇಶದಿಂದ ಭ್ರಷ್ಟಾಚಾರವನ್ನು ಕಿತ್ತೆಸೆಯ ಬಯಸುತ್ತಾರೆ. ನಾನು ಕೂಡಾ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹೊರಗೆಳಯುವ ಉದ್ದೇಶದಿಂದ ಯೋಧರಿಗೆ ಪೂರೈಸಲಾಗುತ್ತಿರುವ ಕಳಪೆ ಆಹಾರವನ್ನು ತೋರಿಸಿದ್ದೆ. ಭ್ರಷ್ಟಾಚಾರವನ್ನು ಹೊರಗೆಡಹಿದ್ದಕ್ಕೆ ನನಗೆ ಸಿಗುತ್ತಿರುವ ಪ್ರತಿಫಲ ಇದೇನಾ? ಎಂದು ತೇಜ್ ಬಹಾದ್ದೂರ್ ಪ್ರಶ್ನಿಸಿದ್ದಾರೆ.
ನನ್ನ ವಿಆರ್’ಎಸ್ ತಡೆ ಹಿಡಿಯಲಾಗಿದೆ, ನನ್ನ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ; ಯೋಧನೊಬ್ಬ ಭ್ರಷ್ಟಾಚಾರವನ್ನು ಹೊರಗೆಡಹಿದ್ದಕೆ ಆತನಿಗೆ ಅನ್ಯಾಯವೆಸಗಲಾಗುತ್ತಿರುವುದು ಸರೀನಾ ಎಂದು ದೇಶದ 125 ಕೋಟಿ ಜನರು ಪ್ರಧಾನಿಯವರನ್ನು ಕೇಳಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತೇಜ್ ಬಹಾದ್ದೂರ್ ಹೇಳಿದ್ದಾರೆ.